ಮಗಳನ್ನು ಮದುವೆ ಮಾಡಿಕೊಡಿ ಎಂದಿದ್ದಕ್ಕೆ ಪ್ರೇಮಿಗೆ ಮಾರಣಾಂತಿಕ ಹಲ್ಲೆ

Public TV
1 Min Read

ಮಡಿಕೇರಿ: ತಮ್ಮ ಮಕ್ಕಳು ಬೇರೆಯವರನ್ನು ಪ್ರೀತಿಸಿ ಮದುವೆಯಾದರು ಎಂಬ ಕಾರಣಕ್ಕೆ ಸಿಟ್ಟಿಗೆದ್ದು ತೆಲಂಗಾಣ ಹಾಗೂ ಹೈದರಾಬಾದ್‍ನಲ್ಲಿ ಹತ್ಯೆಗೆ ಯತ್ನಿಸಿದ ಘಟನೆಗಳು ನಮ್ಮ ಕಣ್ಣ ಮುಂದಿನಿಂದ ಮಾಸುವ ಮುನ್ನವೇ ರಾಜ್ಯದಲ್ಲೂ ಇಂಥದೇ ಪ್ರಕರಣವೊಂದು ನಡೆದಿದೆ. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಹಾರಂಗಿಯಲ್ಲಿ ಈ ಘಟನೆ ನಡೆದಿದೆ.

ಆಗಿದ್ದೇನು?: ಹಾರಂಗಿಯ ಗಿರೀಶ್ ಹಾಗೂ ಯುವತಿಯೊಬ್ಬಳು ಪರಸ್ಪರ ಪ್ರೀತಿಸುತ್ತಿದ್ದರು. ಈ ಪ್ರೀತಿಯನ್ನು ಮದುವೆಯಲ್ಲಿ ಅಂತ್ಯಗೊಳಿಸಲು ಗಿರೀಶ್ ಮುಂದಾಗಿದ್ದ. ಹೀಗಾಗಿ ಗಿರೀಶ್ ಯುವತಿಯ ತಂದೆಯ ಬಳಿ ನಿಮ್ಮ ಮಗಳು ಮತ್ತು ನಾನು ಪ್ರೀತಿಸುತ್ತಿದ್ದೇವೆ. ನಮ್ಮ ಮದುವೆ ಮಾಡಿಕೊಡಿ ಎಂದು ಮನವಿ ಮಾಡಿದ್ದ. ಆದರೆ ಯುವತಿಯ ಮನೆಯವರಿಗೆ ಮದುವೆ ಮಾಡಿಸಿಕೊಡುವುದು ಇಷ್ಟವಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಪ್ರೇಯಸಿಯ ತಂದೆ ಸೇರಿದಂತೆ ಮೂವರು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.

ಹಲ್ಲೆಗೊಳಗಾದ ಪ್ರೇಮಿ ಗಿರೀಶ್ ಸ್ಥಿತಿ ಗಂಭೀರವಾಗಿದ್ದು ಮೈಸೂರು ಆಸ್ಪತ್ರೆಗೆ ಸಾಗಿಸಲಾಗಿದೆ. ಆರೋಪಿಗಳಾದ ಪ್ರೇಯಸಿಯ ತಂದೆ ವಸಂತ್ ಹಾಗೂ ಸಹೋದರ ಗೌತಮ್‍ನನ್ನು ಪೊಲೀಸರು ಬಂಧಿಸಿದ್ದು, ಪ್ರೇಯಸಿಯ ಮಾವ ಸೋಮಶೇಖರ್ ಪರಾರಿಯಾಗಿದ್ದಾನೆ.

ಕಳೆದ ಕೆಲವು ದಿನಗಳ ಹಿಂದೆ ಗಿರೀಶ್ ತನ್ನ ಪ್ರೀತಿಯ ಕುರಿತು ಪ್ರೇಯಸಿಯ ತಂದೆ ವಸಂತ್ ಹಾಗೂ ಕುಟುಂಬದವರಿಗೆ ತಿಳಿಸಿದ್ದ. ನಮ್ಮ ಮದುವೆ ಮಾಡಿಕೊಡಿ ಎಂದು ಮೂರ್ನಾಲ್ಕು ಬಾರಿ ಮನವಿ ಮಾಡಿಕೊಂಡಿದ್ದ. ಆದರೆ ಇದಕ್ಕೆ ಪ್ರೇಯಸಿಯ ಮನೆಯವರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

ಶುಕ್ರವಾರ ಕಾರಿನಲ್ಲಿ ಬಂದ ಗಿರೀಶ್ ನನ್ನು ತಡೆ ಪ್ರೇಯಸಿಯ ಸಂಬಂಧಿಕರು, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಗಿರೀಶ್ ನನ್ನು ಮೈಸೂರು ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಕುರಿತು ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *