ಮನೆ ಬಾಗಿಲಲ್ಲೇ ತುಂಬಿ ಹರಿಯುತ್ತೆ ಕೃಷ್ಣಾ ನದಿಯ ಕಾಲುವೆ

Public TV
1 Min Read

ಯಾದಗಿರಿ: ಇಲ್ಲಿನ ನಿವಾಸಿಗಳು ಮನೆ ಮುಂದೆ ಹರಿಯುವ ನೀರಿನಿಂದ ಭಯಪಡುವಂತಾಗಿದೆ. ಈ ಅಪಾಯದ ಕಾಲುವೆ ಮಕ್ಕಳ ಜೀವವನ್ನೇ ಬಲಿ ಪಡೆದಿವೆ. ಹೀಗಿದ್ದರು ಅಧಿಕಾರಿಗಳು ಈ ಸಮಸ್ಯೆ ಬಗೆ ಹರಿಸುವ ಗೋಜಿಗೆ ಹೋಗಿಲ್ಲ.

ಸಾಮಾನ್ಯವಾಗಿ ಕಾಲುವೆಗಳು ಊರಾಚೆಗಿನ ಹೊಲದಲ್ಲೋ ರಸ್ತೆ ಬದಿಯಲ್ಲೋ ಹರಿಯೋದನ್ನ ನೋಡಿದ್ದೀವಿ. ಆದರೆ ಯಾದಗಿರಿಯ ಸುರಪುರ ತಾಲೂಕಿನ ಕೀರದಳ್ಳಿ ತಾಂಡಾದಲ್ಲಿ ಮನೆಗಳ ಮುಂದೆಯೇ ಕಾಲುವೆ ಹರಿಯುತ್ತಿದೆ. ಬಸವಸಾಗರ ಜಲಾಶಯದ ಎಡದಂಡೆ ಕಾಲುವೆ ಈ ತಾಂಡಾದ ಮನೆಗಳ ಮುಂಭಾಗದಲ್ಲಿದ್ದು, ಯಾವುದೇ ಸುರಕ್ಷಾ ಕ್ರಮಗಳಿಲ್ಲದ ಪರಿಣಾಮ ಇಲ್ಲಿನ ಜನರು ಜೀವ ಭಯದಲ್ಲಿ ಓಡಾಡುವ ಪರಿಸ್ಥಿತಿ ಇದೆ.

ಮಕ್ಕಳು, ವೃದ್ಧರಂತೂ ಇಲ್ಲಿ ನಡೆದುಕೊಂಡು ಹೋಗಲು ಪ್ರಯಾಸ ಪಡುತ್ತಾರೆ. ಇನ್ನೂ ಈ ಹಿಂದೆ ಹಲವು ಮಕ್ಕಳು ಈ ಕಾಲುವೆಗೆ ಬಲಿಯಾಗಿದ್ದಾರಂತೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ.

ಇನ್ನೂ ಈ ಕಾಲುವೆ ನೀರು ಹರಿದು ಹೋಗುವ ಚಿಕ್ಕದಾದ ಸೇತುವೆ ಕೂಡ ಕಿತ್ತು ಹೋಗಿದೆ. 5 ವರ್ಷಗಳಿಂದ ಸೇತುವೆ ದುಸ್ಥಿತಿಯಲ್ಲಿದೆ. ಹೆಚ್ಚಿನ ನೀರು ಕಾಲುವೆಗೆ ಬಿಟ್ಟರೆ ಮನೆಗಳಿಗೆ ಹಾಗೂ ಊರಿನೊಳಗೆ ನೀರು ನುಗ್ಗುತ್ತಿವೆ. ಅಧಿಕಾರಿಗಳು ಭೇಟಿ ನೀಡಿ ಜನರಿಗೆ ಭರವಸೆ ನೀಡುವ ಕೆಲಸ ಮಾಡಿದ್ದಾರೆ ಹೊರತು ಕಾಲುವೆಗೆ ತಡೆಗೊಡೆ ನಿರ್ಮಿಸುವ ಕೆಲಸ ಮಾಡಿಲ್ಲ.

Share This Article
Leave a Comment

Leave a Reply

Your email address will not be published. Required fields are marked *