ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಆಯ್ತು, ಈಗ ಖಾಸಗಿ ಶಾಲೆಗಳಿಗೂ ಅಂಕುಶ

Public TV
3 Min Read

ಬೆಂಗಳೂರು: ಖಾಸಗಿ ಶಾಲೆಗಳ ಧನದಾಹಿ ತನಕ್ಕೆ ಕೊನೆಗೂ ಮುಕ್ತಿ ಸಿಗುವ ಕಾಲ ಬಂದಿದೆ. ಖಾಸಗಿ ಶಾಲೆಗಳ ಶುಲ್ಕ ನಿಗದಿ ಮುಂದಿನ ವರ್ಷದಿಂದ ಜಾರಿ ಮಾಡಲಾಗುತ್ತದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ.

ಪಿಯುಸಿ ಬೋರ್ಡ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಖಾಸಗಿ ಶಾಲೆಗಳ ಶುಲ್ಕ ನಿಗದಿ ಸಂಬಂಧ ಈಗಾಗಲೇ ಕರಡು ಮಸೂದೆ ಸಿದ್ಧವಾಗಿದೆ. ಅಧಿವೇಶನದಲ್ಲಿ ಮಂಡಿಸಿ ಮುಂದಿನ ಶೈಕ್ಷಣಿಕ ವರ್ಷದಿಂದ ಶುಲ್ಕ ನೀತಿ ಜಾರಿಗೆ ತರುತ್ತೇವೆ ಎಂದು ತಿಳಿಸಿದರು.

ಒಂದು ವೇಳೆ ಶುಲ್ಕ ನಿಗದಿ ಮಾಡಿದ ಮೇಲೆ ಹೆಚ್ಚುವರಿ ಶುಲ್ಕ ಪಡೆದರೆ ಅಂತಹ ಶಾಲೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ಮಾತ್ರವಲ್ಲ ಹೆಚ್ಚುವರಿ ಶುಲ್ಕ ಮರು ಪಾವತಿ ಮಾಡಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

 

ಪರೀಕ್ಷಾ ಸಿದ್ಧತೆ: ಪಿಯುಸಿ, ಎಸ್‍ಎಸ್‍ಎಲ್‍ಸಿ ಪರೀಕ್ಷೆ ತಯಾರಿ ನಡೆಸುತ್ತಿದ್ದು, ಮಾರ್ಚ್ 1-13 ದ್ವಿತಿಯ ಪಿಯುಸಿ ಹಾಗೂ ಮಾರ್ಚ್ 23 ರಿಂದ ಏಪ್ರಿಲ್ 6 ವರೆಗೆ ಪರೀಕ್ಷೆ ನಡೆಯಲಿದೆ. ಚುನಾವಣಾ ಆಯೋಗಕ್ಕೂ ಪರೀಕ್ಷಾ ವೇಳಾಪಟ್ಟಿ ಕಳುಹಿಸಿಕೊಟ್ಟಿದ್ದೇವೆ. ಕಳೆದ ವರ್ಷದಂತೆ ಈ ವರ್ಷವೂ ಕರ್ನಾಟಕ ಸೆಕ್ಯೂರ್ ಎಕ್ಸಾಂ ಸಿಸ್ಟಮ್ ಅಳವಡಿಸಲಾಗುತ್ತೆ ಎಂದು ಹೇಳಿದರು.

ಒಂದೇ ಭಾಷೆಯಲ್ಲಿ ಪ್ರಶ್ನೆ ಪತ್ರಿಕೆ ಮುದ್ರಣವಾಗುತ್ತದೆ ಎನ್ನುವ ಗೊಂದಲಕ್ಕೆ ತೆರೆ ಎಳೆದ ಸಚಿವರು, ಹಿಂದಿನ ವರ್ಷದಂತೆ ಎರಡೂ ಭಾಷೆಯಲ್ಲಿ ಪ್ರಶ್ನೆ ಪತ್ರಿಕೆ ಮುದ್ರಣ ಮಾಡುತ್ತೇವೆ. ಪರೀಕ್ಷಾ ಅಕ್ರಮ ತಡೆಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.

ಒಂದೇ ಸ್ಥಳದಲ್ಲಿ ಕೆಲಸ ಮಾಡುತ್ತಿರುವ ಪಿಯುಸಿ ಬೋರ್ಡ್ ಸಿಬ್ಬಂದಿಯನ್ನು ಬದಲಾವಣೆ ಮಾಡುವ ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು. ಅಲ್ಲದೆ ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಪ್ರತಿ ಹೋಬಳಿಗೆ ಒಂದು ಕರ್ನಾಟಕ ಪಬ್ಲಿಕ್ ಶಾಲೆ ಪ್ರಾರಂಭಿಸಿ ಖಾಸಗಿ ಶಾಲೆಗಳ ಸಮಾನ ಶಾಲೆ ನಿರ್ಮಾಣ ಮಾಡುವುದಾಗಿ ತಿಳಿಸಿದರು.

ಶಿಕ್ಷಕರ ಬಡ್ತಿ: ಇದೇ ಮೊದಲ ಬಾರಿಗೆ ಬಡ್ತಿ ಮೀಸಲಾತಿ ನಿಯಮದಲ್ಲಿ ಈ ಬಾರಿ 11 ಸಾವಿರ ಶಿಕ್ಷಕರಿಗೆ ಬಡ್ತಿ ನೀಡುತ್ತಿದ್ದೇವೆ. 6-8 ತರಗತಿ ಶಿಕ್ಷಕರಿಗೆ ಹೈಸ್ಕೂಲ್ ಶಿಕ್ಷಕರಾಗಿ ಬಡ್ತಿ ನೀಡಲಾಗುತ್ತೆ. ಶಿಕ್ಷಕರಿಗೆ ಪರೀಕ್ಷೆ ನಡೆಸುವ ಮೂಲಕ ಬಡ್ತಿಗೆ ಆಯ್ಕೆ ಮಾಡಲಾಗುತ್ತದೆ. ಹೈಸ್ಕೂಲ್ ಶಿಕ್ಷಕರನ್ನು ಪಿಯುಸಿ ಉಪನ್ಯಾಸಕರಾಗಿ ಹಾಗೂ ಮುಖ್ಯೋಪಾಧ್ಯಾಯರಾಗಿ ಬಡ್ತಿ ನೀಡುವ ನಿರ್ಧಾರ ತೆಗೆದುಕೊಂಡಿವೆ ಎಂದರು.

ಪ್ರಸ್ತುತ ನಡೆಯುತ್ತಿರುವ ಶಿಕ್ಷಕರ ನೇಮಕಾತಿ ಫೆಬ್ರವರಿಯಲ್ಲಿ ಮುಕ್ತಾಯವಾಗಲಿದ್ದು, ಜನವರಿಯಲ್ಲಿ ಟಿಇಟಿ ಪರೀಕ್ಷೆ ನಡೆಸಲಾಗುತ್ತೆ ಎಂದು ತಿಳಿಸಿದರು.

ಇದೇ ವೇಳೆ ತಮ್ಮ ಮುಂದಿನ ಚುನಾವಣೆ ಕ್ಷೇತ್ರ ಕುರಿತು ಸ್ಪಷ್ಟಪಡಿಸಿದ ಅವರು, ಪ್ರಸ್ತುತ ನನ್ನ ಸ್ವಕ್ಷೇತ್ರ ಮೈಸೂರು ನರಸಿಂಹರಾಜ ವಿಧಾನಸಭಾ ಕ್ಷೇತ್ರದಿಂದಲೇ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಾಗಿ ಖಚಿತ ಪಡಿಸಿದರು.

ಕಾಯ್ದೆ ಹಿನ್ನೆಲೆ: 1998-99 ಶುಲ್ಕ ನಿಗಧಿ ಮಾಡಲಾಗಿತ್ತು. ಇದರ ಅನ್ವಯ ಖಾಸಗಿ ಶಾಲೆಯೊಂದರ ಒಟ್ಟಾರೆ ಸಿಬ್ಬಂದಿಯ ಸಂಬಳ ಹಾಗೂ 30% ಹೆಚ್ಚುವರಿಯನ್ನು ಒಟ್ಟು ಮಾಡಿ ವಿದ್ಯಾರ್ಥಿಗಳ ಅನುಗುಣಕ್ಕೆ ಭಾಗಿಸಿದ ಮೊತ್ತವನ್ನು ಶುಲ್ಕವಾಗಿ ಪಡೆಯುವ ನಿಯಮ ರೂಪಿಸಲಾಗಿತ್ತು. ಇದರ ಅನ್ವಯ ಹೆಚ್ಚುವರಿ ಪಡೆದ 30% ಶುಲ್ಕದಲ್ಲಿ ಶಾಲೆಯ ಇನ್ನಿತರ ಖರ್ಚುಗಳು ಕರೆಂಟ್ ಬಿಲ್, ಬಾಡಿಗೆ ಇತ್ಯಾದಿಗಳನ್ನು ಮಾಡಬೇಕಿತ್ತು.

ಸುಮಾರು 18- 19 ವರ್ಷಗಳಿಂದ ಶುಲ್ಕ ಪರಿಷ್ಕರಣೆ ಆಗಿರಲಿಲ್ಲ. ಆದರೆ ಹಿಂದಿನ ಶುಲ್ಕ ನಿಗಧಿಯನ್ನ ಗಾಳಿಗೆ ತೂರಿ ಮನಸೋ ಇಚ್ಛೆ ಖಾಸಗಿ ಶಾಲೆಗಳು ಶುಲ್ಕವನ್ನು ತೆಗೆದುಕೊಳ್ಳುತ್ತಿದ್ದವು. ಲಕ್ಷ ಲಕ್ಷ ಹಣವನ್ನು ಪೋಷಕರಿಂದ ಪಡೆಯುತ್ತಿದ್ದರು.

ಖಾಸಗಿ ಶಾಲೆಗಳ ವಿರೋಧ: ಕಾಯ್ದೆಗೆ ಕೆಲವು ಮಧ್ಯಮ ವರ್ಗದ ಶಾಲೆಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದವು. ಶಿಕ್ಷಣ ಇಲಾಖೆ 2015ರಲ್ಲಿ ಶುಲ್ಕ ಪರಿಷ್ಕರಣೆ ಸಂಬಂಧ ಕರಡು ರಚಿಸಿತ್ತು. ಇದರಲ್ಲಿ ಶಿಕ್ಷಕರ ಸಂಬಳ ಒಟ್ಟು ಮೊತ್ತ ಮತ್ತು ಗ್ರಾಮೀಣ ಪ್ರದೇಶಗಳಿಗೆ 50%, ಅರೆ ನಗರ ಪ್ರದೇಶಗಳಿಗೆ 60%, ನಗರ ಪಾಲಿಕೆಗಳಿಗೆ 75% ಹಾಗೂ ಬಿಬಿಎಂಪಿ ವಲಯಗಳಿಗೆ 100% ಶುಲ್ಕ ಹೆಚ್ಚಳ ಪಡೆಯುವ ಪ್ರಸ್ತಾಪ ಮಾಡಲಾಗಿತ್ತು. ಅಲ್ಲದೆ ಪ್ರತೀ ವರ್ಷ 10% ರಿಂದ 15% ಶುಲ್ಕ ಹೆಚ್ಚಳಕ್ಕೆ ಅನುಮತಿ ನೀಡಿತ್ತು. ಇದಕ್ಕೆ ಅನೇಕ ಖಾಸಗಿ ಶಾಲೆಗಳು ವಿರೋಧ ವ್ಯಕ್ತಪಡಿಸಿದ್ದವು. ಹೀಗಾಗಿ ಖಾಸಗಿ ಶಾಲೆಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಖಾಸಗಿ ಶಾಲೆಗಳು ಶುಲ್ಕ ವರ್ಗೀಕರಣ ಸರಿ ಇಲ್ಲ ಎಂದು ಆಕ್ಷೇಪಣೆ ಸಲ್ಲಿಸಿದ ಪರಿಣಾಮವಾಗಿ ಕಳೆದ ಎರಡು ವರ್ಷಗಳಿಂದ ಕರಡು ಮಸೂದೆ ಮಂಡನೆಯಾಗಿರಲಿಲ್ಲ.

ಏನು ಲಾಭ?
ಕಾಯ್ದೆ ಜಾರಿಯಾದರೆ ಖಾಸಗಿ ಶಾಲೆಗಳ ಧನದಾಹಿ ತನಕ್ಕೆ ಬ್ರೇಕ್ ಬೀಳಲಿದೆ. ಶಾಲೆಗಳು ಮನಸ್ಸಿಗೆ ಬಂದಂತೆ ಶುಲ್ಕ ಪಡೆಯಲು ಸಾಧ್ಯವಾಗುವುದಿಲ್ಲ. ಲಕ್ಷ ಲಕ್ಷ ರೂ. ಹಣ ಶುಲ್ಕ ಪಡಿಯುವ ಶಾಲೆಗಳಿಗೆ ಬ್ರೇಕ್ ಬೀಳುತ್ತದೆ. ಖಾಸಗಿ ಶಾಲೆಗಳ ಗುಣಮಟ್ಟಕ್ಕೆ ತಕ್ಕಂತೆ ಶುಲ್ಕ ಪರಿಷ್ಕರಣೆ ಮಾಡಲಾಗುತ್ತೆ. ಏಕರೂಪ ಶುಲ್ಕ ಮಾಡಲು ಸಾಧ್ಯವಾಗದೇ ಇದ್ದರೂ ಮನ ಬಂದಂತೆ ಶುಲ್ಕ ಪಡಿಯುವ ಶಾಲೆಗಳಿಗೆ ಬ್ರೇಕ್ ಬೀಳುತ್ತದೆ.

 

Share This Article
Leave a Comment

Leave a Reply

Your email address will not be published. Required fields are marked *