ಶುಲ್ಕ ಪಾವತಿಸದೆ ಪರಾರಿಯಾಗಲು ಹೋಗಿ ಟೋಲ್ ಸಿಬ್ಬಂದಿಗೆ ಡಿಕ್ಕಿ ಹೊಡೆದ ಕಾರು ಚಾಲಕ

Public TV
1 Min Read

ಬೆಂಗಳೂರು: ತುಮಕೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ನವಯುಗ ಟೋಲ್ ನಲ್ಲಿ ಶುಲ್ಕ ಪಾವತಿ ಮಾಡದೆ ಪರಾರಿಯಾಗುತ್ತಿದ್ದ ಕಾರನ್ನು ತಡೆಯಲು ಹೋಗಿದ್ದ ಸಿಬ್ಬಂದಿಗೆ ಚಾಲಕನೊಬ್ಬ ಗುದ್ದಿ ಪರಾರಿಯಾಗಿದ್ದಾನೆ.

ಆಂಧ್ರ ಮೂಲದ ವೀರೇಂದ್ರ ಗಾಯಗೊಂಡ ಟೋಲ್ ಸಿಬ್ಬಂದಿ. ಎಂದಿನಂತೆ ಕಳೆದ ಭಾನುವಾರ ಕೆಲಸಕ್ಕೆ ವೀರೇಂದ್ರ ಹಾಜರಾಗಿದ್ದರು. ತುಮಕೂರು ಕಡೆಯಿಂದ ಬಂದ ಸ್ವಿಫ್ಟ್ ಕಾರಿನ ಚಾಲಕ ಕೇವಲ 20 ರೂ. ಟೋಲ್ ಶುಲ್ಕ ಪಾವತಿ ಮಾಡದೇ ಪರಾರಿಯಾಗಲು ಯತ್ನಿಸಿದ್ದನು. ಕಾರನ್ನು ತಡೆಲು ಎಡಬದಿಯಿಂದ ಬಂದ ವೀರೇಂದ್ರನಿಗೆ ಗುದ್ದಿದ್ದಾನೆ. ವೇಗವಾಗಿದ್ದ ಕಾರಿನಿಂದ ಕೆಳಗೆ ಬಿದ್ದು, ವೀರೇಂದ್ರ ಗಂಭೀರವಾಗಿ ಗಾಯಗೊಂದಿದ್ದರು. ಆದರೆ ಚಾಲಕ ಕಾರನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.

ಇತ್ತ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವೀರೇಂದ್ರ ಸಹಾಯಕ್ಕೆ ಟೋಲ್ ಆಡಳಿತ ಮಂಡಳಿ ಮುಂದಾಗಿಲ್ಲ. ಸಂಸ್ಥೆಯ ಅಮಾನವೀಯ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವೀರೇಂದ್ರ ತಮ್ಮ ಗ್ರಾಮಕ್ಕೆ ಮರಳಿದ್ದಾರಂತೆ. ದಿನಕ್ಕೆ ಲಕ್ಷ ಲಕ್ಷ ರೂ. ಸಂಪಾದನೆ ಮಾಡುವ ಟೋಲ್ ಸಂಸ್ಥೆ ಆತನ ನೆರವಿಗೆ ಬಂದಿಲ್ಲವೆಂದು ಟೋಲ್ ಗೇಟ್ ಸಿಬ್ಬಂದಿ ಬೇಸರ ವ್ಯಕ್ತಪಡಿಸಿದ್ದಾರೆ.

ಇಷ್ಟೆಲ್ಲ ಅವಾಂತರ ನಡೆದರೂ ಈ ಕುರಿತು ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ. ಇದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *