ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಯುವಕ ಸಾವು

Public TV
1 Min Read

ಚಿಕ್ಕಬಳ್ಳಾಪುರ: ಚಲಿಸುತ್ತಿದ್ದ ರೈಲು ಹತ್ತಲು ಹೋದ ಯುವಕನೊಬ್ಬ ಆಯತಪ್ಪಿ ರೈಲಿನಡಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.

ಮುದುಗೆರೆ ಗ್ರಾಮದ 25 ವರ್ಷದ ಜಗದೀಶ್ ಮೃತ ಯುವಕ. ಗೌರಿಬಿದನೂರು ಪಟ್ಟಣದಿಂದ ಯಲಹಂಕಕ್ಕೆ ಐಎಎಸ್ ಕೋಚಿಂಗ್ ಗೆ ತೆರಳುತ್ತಿದ್ದ ಜಗದೀಶ್, ಹಿಂದೂಪುರ-ಬೆಂಗಳೂರು ಪ್ಯಾಸೆಂಜರ್ ರೈಲು ಹತ್ತಲು ಹೋಗಿ ಅಯತಪ್ಪಿ ರೈಲಿನಡಿ ಸಿಲುಕಿ ಸಾವನ್ನಪ್ಪಿದ್ದಾರೆ.

ಘಟನೆ ನಂತರ ರೊಚ್ಚಿಗೆದ್ದ ಪ್ರಯಾಣಿಕರು ಹಿಂದೂಪುರ-ಬೆಂಗಳೂರು ಪ್ಯಾಸೆಂಜರ್ ರೈಲನ್ನು ದೊಡ್ಡಬಳ್ಳಾಪುರ ತಾಲೂಕಿನ ಮಾಕಳಿ ದುರ್ಗಾ ರೈಲ್ವೆ ಸ್ಟೇಷನ್ ಬಳಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ಈ ಮೊದಲು 17 ಬೋಗಿಯ ಬೃಹತ್ ರೈಲು ಈ ಮಾರ್ಗದಲ್ಲಿ ಸಂಚರಿಸುತ್ತಿದ್ದು, ಈಗ 10 ಬೋಗಿಗಳುಳ್ಳ ರೈಲು ಸಂಚರಿಸುತ್ತಿದೆ. ಪ್ರಯಾಣಿಕರ ದಟ್ಟಣೆ ಜಾಸ್ತಿ ಇರುವ ಕಾರಣ ಪ್ರಯಾಣಿಕರು ನಾ ಮುಂದು ತಾ ಮುಂದು ಎಂದು ರೈಲು ಏರುವ ಆತುರದಲ್ಲಿ ಈ ತರಹದ ಅವಘಡಗಳು ಆಗುತ್ತಿವೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇನ್ನೂ ಹೆಚ್ಚು ಬೋಗಿಗಳುಳ್ಳ ರೈಲನ್ನು ಪುನಃ ಈ ಭಾಗದಲ್ಲಿ ಸಂಚರಿಸಲು ಅನುವು ಮಾಡಿಕೊಟ್ಟು ಪ್ರಯಾಣಿಕರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಆಗ್ರಹಿಸಿದ್ದಾರೆ. ರೈಲು ತಡೆಯಿಂದ ಇತರೆ ರೈಲುಗಳ ಓಡಾಟದಲ್ಲಿ ವ್ಯತ್ಯಾಸ ಉಂಟಾಗಿ ಹಲವು ಪ್ರಯಾಣಿಕರು ಪರದಾಡುವಂತಾಗಿದೆ.

ಯಶವಂತಪುರ ರೈಲ್ವೇ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *