ನವದೆಹಲಿ: ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಈ ವರ್ಷ ಹಲವು ಬದಲಾವಣೆಗಳೊಂದಿಗೆ ಗಣರಾಜ್ಯೋತ್ಸವ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವಾಲಯ ತಿಳಿಸಿದೆ.
ಅರ್ಧ ಗಂಟೆ ತಡ
ಇದೇ ಜ.26ರಂದು ನಡೆಯಲಿರುವ ಗಣರಾಜ್ಯೋತ್ಸವದ ಪಥಸಂಚಲನ ಅರ್ಧ ಗಂಟೆ ತಡವಾಗಿ ಆರಂಭವಾಗಲಿದೆ. ಆ ಸಂದರ್ಭದಲ್ಲಿ ದೆಹಲಿಯ ಮಂಜು ಹೆಚ್ಚಿನ ಪ್ರಮಾಣದಲ್ಲಿ ಆವರಿಸಿರುತ್ತದೆ. ಹೀಗಾಗಿ ಪರೇಡ್ ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಸಾಮಾನ್ಯವಾಗಿ 10 ಗಂಟೆಗೆ ಆರಂಭವಾಗಬೇಕಿದ್ದ ಪರೇಡ್ ಅನ್ನು 10:30ಕ್ಕೆ ಆರಂಭಿಸಲಾಗುವುದು. ಇದನ್ನೂ ಓದಿ: ರಾಜಪಥ್ನಲ್ಲಿ ಗಣರಾಜ್ಯೋತ್ಸವ ಪರೇಡ್ಗೆ ಭರ್ಜರಿ ಸಿದ್ಧತೆ
10 ದೊಡ್ಡ ಎಲ್ಇಡಿ ಪರದೆ ಅಳವಡಿಕೆ
ಪಥಸಂಚಲನದಲ್ಲಿ ವೀಕ್ಷಕರಿಗೆ ಉತ್ತಮ ವೀಕ್ಷಣೆಗಾಗಿ 10 ದೊಡ್ಡ ಎಲ್ಇಡಿ ಪರದೆಗಳನ್ನು ರಾಜಪಥದಲ್ಲಿ ಅಳವಡಿಸಲಾಗುವುದು. ಆ ವೇಳೆ ಮಂಜು ಕವಿದ ವಾತಾವರಣ ಇರಲಿದೆ. ಪಥ ಸಂಚಲನ ವೀಕ್ಷಣೆಗಾಗಿ ಈ ಕ್ರಮವಹಿಸಲಾಗಿದೆ.
ಹಿಂದಿನ ಪರೇಡ್ ಸಂಯೋಜಿತ ಕಿರುಚಿತ್ರ ಪ್ರದರ್ಶನ
ಹಿಂದಿನ ವರ್ಷದ ಪರೇಡ್ನ ತುಣುಕುಗಳ ಸಂಯೋಜಿತ ಕ್ಯುರೇಟೆಡ್ ಚಲನಚಿತ್ರ, ಸಶಸ್ತ್ರ ಪಡೆಗಳ ಕಿರುಚಿತ್ರ ಮತ್ತು ಗಣರಾಜ್ಯೋತ್ಸವ 2022ರ ಪೂರ್ವದಲ್ಲಿ ವಿವಿಧ ಘಟನೆಗಳಿಗೆ ಸಂಬಂಧಿಸಿದ ಕಥೆಗಳ ವೀಡಿಯೋ ತುಣುಕನ್ನು ಮೆರವಣಿಗೆ ಪ್ರಾರಂಭವಾಗುವ ಮೊದಲು ಪ್ರದರ್ಶಿಸಲಾಗುವುದು. ಇದನ್ನೂ ಓದಿ: ದೇಶದಲ್ಲಿ ಹಸಿವಿನಿಂದ ಸಾವು ಸಂಭವಿಸಿಲ್ಲವೇ – ಕೇಂದ್ರದ ವಿರುದ್ಧ ಸುಪ್ರೀಂ ತರಾಟೆ
24,000 ಅತಿಥಿಗಳಿಗೆ ಮಾತ್ರ ಅವಕಾಶ
ಕೊರೊನಾ ಸಾಂಕ್ರಾಮಿಕ ಕಾರಣದಿಂದಾಗಿ ಈ ಬಾರಿ ಪಥಸಂಚನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕೇವಲ 24,000 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ. 19,000 ಅತಿಥಿಗಳು ಆಹ್ವಾನಿತರಾಗಿರುತ್ತಾರೆ. ಉಳಿದವರು ಸಾಮಾನ್ಯ ಜನರು ಯಾರು ಬೇಕಾದರೂ ಟಿಕೆಟ್ ಖರೀದಿಸಿ ಪರೇಡ್ ವೀಕ್ಷಣೆಗೆ ಪಾಲ್ಗೊಳ್ಳಬಹುದು. ಕಳೆದ ವರ್ಷ 25,000 ಹಾಗೂ 2020ರಲ್ಲಿ 1.25 ಲಕ್ಷ ಮಂದಿಗೆ ಪರೇಡ್ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಅತಿಥಿಗಳು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆದಿರಬೇಕು.
ಹುತಾತ್ಮ ಸೈನಿಕರಿಗೆ ಪ್ರಧಾನಿ ಗೌರವ
ನವದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಸೈನಿಕರಿಗೆ ಪ್ರಧಾನಿ ಮೋದಿ ಅವರು ಗೌರವ ನಮನ ಸಲ್ಲಿಸಲಿದ್ದಾರೆ.
ಬಾನಿನಲ್ಲಿ ರಂಗು
ಸಮಾರೋಪದಲ್ಲಿ ಸಾಂಪ್ರದಾಯಿಕ ಫ್ಲೈ-ಪಾಸ್ಟ್ನಲ್ಲಿ 75 ವಿಮಾನಗಳು ಭಾಗವಹಿಸಲಿವೆ. ವಿಂಟೇಜ್ ಹಾಗೂ ಆಧುನಿಕ ರಫೇಲ್, ಸುಖೋಯ್, ಜಾಗ್ವಾರ್, ಎಂಐ-17, ಸಾರಂಗ್, ಡಕೋಟಾ ಆಕಾಶದಲ್ಲಿ ಹಾರಾಡಲಿವೆ. ಇದನ್ನೂ ಓದಿ: ಗಣರಾಜ್ಯೋತ್ಸವಕ್ಕೆ ಉಗ್ರರ ಸಂಚು- ಮೋದಿ, ವಿದೇಶಿ ಅತಿಥಿಗಳ ಜೀವಕ್ಕೆ ಅಪಾಯ
ವಿದೇಶಿ ಮುಖ್ಯ ಅತಿಥಿ ಇಲ್ಲ
ಗಣರಾಜ್ಯೋತ್ಸವ ಪರೇಡ್ನಲ್ಲಿ ಪಾಲ್ಗೊಳ್ಳಲು ಮಧ್ಯ ಏಷ್ಯಾದ ಅತಿಥಿಗಳನ್ನು ಆಹ್ವಾನಿಸುವ ಸಂಪ್ರದಾಯವಿತ್ತು. ಆದರೆ ಕೊರೊನಾ ಕಾರಣದಿಂದಾಗಿ ಈ ಬಾರಿಯೂ ವಿದೇಶದಿಂದ ಮುಖ್ಯ ಅತಿಥಿ ಆಹ್ವಾನಿಸದಿರಲು ರಕ್ಷಣಾ ಸಚಿವಾಲಯ ನಿರ್ಧರಿಸಿದೆ.
300 ಸಿಸಿಟಿವಿ ಕ್ಯಾಮರಾ ಅಳವಡಿಕೆ
ಪರೇಡ್ ನಡೆಯುವ ಪ್ರದೇಶದಲ್ಲಿ ಪ್ರತಿ ಚಲನವಲನಗಳ ಮೇಲೆ ನಿಗಾ ವಹಿಸಲು 300 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುವುದು.