ಪ್ರಧಾನಿಯವರು ಭಾಷಣ ಮಾಡುವ ಅರಮನೆ ಮೈದಾನದಲ್ಲಿ ತಪ್ಪಿತು ಭಾರೀ ಅವಘಢ!

Public TV
1 Min Read

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ 85 ದಿನಗಳ ಪರಿವರ್ತನಾ ಯಾತ್ರೆಗೆ ಇಂದು ತೆರೆ ಬೀಳಲಿದೆ. ಹೀಗಾಗಿ ಪ್ರಧಾನಿ ಮೋದಿ ಇಂದು ಅರಮನೆ ಮೈದಾನಕ್ಕೆ ಭೇಟಿ ನೀಡಲಿದ್ದು, ಈ ಮೊದಲೇ ಭಾರೀ ಅನಾಹುತವೊಂದು ತಪ್ಪಿದೆ.

ಅರಮನೆ ಮೈದಾನದಲ್ಲಿ ಅಡುಗೆ ಮಾಡುವಾಗ ಸಿಲಿಂಡರ್‍ನಿಂದ ಗ್ಯಾಸ್ ಲೀಕ್ ಆಗಿದೆ. ಇದನ್ನು ಕಂಡು ಅಡುಗೆಭಟ್ಟರು ಒಂದು ಕ್ಷಣ ಬೆಚ್ಚಿಬಿದ್ದು ಓಡಿಹೋಗಿದ್ದಾರೆ. ಬಳಿಕ ಗ್ಯಾಸ್ ಲೀಕ್ ವಿಷಯದಲ್ಲಿ ಅಡುಗೆಯವರು ಮತ್ತು ಆಯೋಜಕರ ನಡುವೆ ಮಾತಿನ ಚಕಮಕಿ ನಡೆದಿದೆ. ಆಯೋಜಕರು ಗ್ಯಾಸ್ ಲೀಕ್ ಆದ ರೆಗ್ಯೂಲೇಟರ್ ಬದಲಿಸಿದ್ದು, ಆತಂಕದಿಂದ ದೂರವಿದ್ದ ಅಡುಗೆಯವರಿಂದ ಅಡುಗೆ ಕೆಲಸ ಪುನಃ ಆರಂಭವಾಗಿದೆ.

60 ಸಾವಿರ ಮಂದಿ ಕಾರ್ಯಕರ್ತರಿಗೆ ಬೆಳಗ್ಗಿನ ತಿಂಡಿ, 1 ಲಕ್ಷದ 80 ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿದ್ದು, 4 ಭೋಜನ ಶಾಲೆಗಳಲ್ಲಿ ಸಮಾರೋಪ ಜಾಥಾಕ್ಕಾಗಿ ತಿಂಡಿ, ಊಟ ತಯಾರಿ ಮಾಡಲಾಗಿದೆ. ಪ್ರಧಾನಿ ಮೋದಿ ಇಂದು ಸಂಜೆ 4 ಗಂಟೆಗೆ ಅರಮನೆ ಮೈದಾನದಲ್ಲಿ ಭಾಷಣ ಮಾಡಲಿದ್ದಾರೆ.

ಇಂದು ನಡೆಯುವ ಈ ಸಮಾವೇಶದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸುಮಾರು ಮೂರೂವರೆ ಲಕ್ಷ ಜನ ಭಾಗಿಯಾಗುವ ನಿರೀಕ್ಷೆ ಇದೆ. ಮಧ್ಯಾಹ್ನ 1 ಗಂಟೆಗೆ ದೆಹಲಿಯಿಂದ ಹೊರಡಲಿರುವ ಪ್ರಧಾನಿ ಮೋದಿ 3.30ರ ವೇಳೆಗೆ ಎಚ್‍ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಬಳಿಕ ಅಲ್ಲಿಂದ ನೇರವಾಗಿ ವಿಶೇಷ ಹೆಲಿಕಾಪ್ಟರ್ ಮೂಲಕ 3.50ಕ್ಕೆ ಜೆಸಿನಗರದ ಹೆಲಿಪ್ಯಾಡ್‍ಗೆ ಬಂದಿಳಿಯಲಿದ್ದಾರೆ. ಅಲ್ಲಿಂದ 3.55ಕ್ಕೆ ಸಮಾವೇಶಕ್ಕೆ ಆಗಮಿಸಿ, 1 ಗಂಟೆಗಳ ಕಾಲ ಭಾಷಣ ಮಾಡಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *