ಮದುವೆ ನಿಶ್ಚಯವಾಗಿದ್ದ ಹುಡುಗನ ಜೊತೆ ತೆರಳಿದ್ದ ಅಪ್ರಾಪ್ತೆ ಅನುಮಾನಾಸ್ಪದ ಸಾವು

Public TV
1 Min Read

ಹಾಸನ: ಮದುವೆ ನಿಶ್ಚಯವಾಗಿದ್ದ (Engagement) ಹುಡುಗನ ಜೊತೆ ತೆರಳಿದ್ದ ಅಪ್ರಾಪ್ತೆ (Minor Girl) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾಸನ (Hassan) ಜಿಲ್ಲೆ ಅರಕಲಗೂಡು ತಾಲೂಕಿನ ಕೊಣನೂರು ಹೋಬಳಿಯಲ್ಲಿ ನಡೆದಿದೆ.

ಕೂಡ್ಲೂರು ಗ್ರಾಮದ ದಿನೇಶ್ ಜೊತೆ 2 ತಿಂಗಳ ಹಿಂದೆ ಅಪ್ರಾಪ್ತ ಬಾಲಕಿಗೆ ಮದುವೆ ನಿಶ್ಚಯವಾಗಿತ್ತು. ಆಕೆಗೆ ಇನ್ನೂ 16 ವರ್ಷವಾಗಿದ್ದು ಮನೆಯವರೇ ಮದುವೆ ನಿಶ್ಚಯ ಮಾಡಿದ್ದರು. ದಿನೇಶ್ ಆಕೆಯನ್ನು ನವೆಂಬರ್ 29 ರಂದು ರಾಮನಾಥಪುರ ಷಷ್ಠಿ ಜಾತ್ರೆಗೆಂದು ಕರೆದೊಯ್ದಿದ್ದ. ಮಧ್ಯಾಹ್ನ 2:30 ರ ವೇಳೆಗೆ ದಿನೇಶ್ ಆಕೆಯನ್ನು ಕರೆದೊಯ್ದಿದ್ದು 4 ಗಂಟೆ ವೇಳೆಗೆ ಆಕೆಯ ಪೋಷಕರಿಗೆ ಕರೆ ಮಾಡಿ, ನಿಮ್ಮ ಮಗಳು ವಿಷ ಕುಡಿದಿದ್ದಾಳೆ ಎಂದು ತಿಳಿಸಿದ್ದಾನೆ.

 

ಆಕೆಯನ್ನು ಬಳಿಕ ದಿನೇಶ್ ಕುಟುಂಬದವರು ಹಾಸನದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುತ್ತಿರುವುದಾಗಿ ಹೇಳಿದ್ದಾರೆ. ಆದರೆ ಆಕೆ ಆಸ್ಪತ್ರೆಗೆ ದಾಖಲಾಗುವ ವೇಳೆಗೆ ಮೃತಪಟ್ಟಿದ್ದಾಳೆ. ಇದೇ ವೇಳೆ ದಿನೇಶ್ ಕೂಡಾ ವಿಷ ಸೇವಿಸಿರುವುದು ತಿಳಿದುಬಂದಿದ್ದು, ಆತನಿಗೆ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಗಳ ಸಾವಿನ ಬಗ್ಗೆ ಅನುಮಾನಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಸ್ನೇಹಿತರಿಗೆ ಚಿಕನ್ ನೀಡದ್ದಕ್ಕೆ ವರ ಮದುವೆಯನ್ನೇ ರದ್ದುಗೊಳಿಸಿದ

ಮಕ್ಕಳ ಕಲ್ಯಾಣ ಸಮಿತಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಂದ ಘಟನೆ ಬಗ್ಗೆ ತನಿಖೆಗೆ ಎಸ್ಪಿಗೆ ದೂರು ನೀಡಲಾಗಿದೆ. ಚೈಲ್ಡ್ ಲೈನ್‌ಗೆ ಬಂದ ಅಪರಿಚಿತ ಕರೆ ಆಧರಿಸಿ ಪೋಷಕರಿಂದ ಮಾಹಿತಿ ಪಡೆದು ದೂರು ದಾಖಲಿಸಲಾಗಿದೆ. ಬಾಲಕಿ ಸಾವಿನ ಬಗ್ಗೆ ಅನುಮಾನ ಇದ್ದು, ಸೂಕ್ತ ತನಿಖೆ ನಡೆಸಲು ಮನವಿ ಮಾಡಲಾಗಿದೆ.

ತನಿಖೆ ವೇಳೆ ಬಾಲಕಿಯ ಮೃತದೇಹದ ಮೇಲೆ ಗಾಯದ ಗುರುತು, ಕುತ್ತಿಗೆಯಲ್ಲಿ ಪೆಟ್ಟಾಗಿರುವ ಗುರುತು ಪತ್ತೆಯಾಗಿದೆ. ಈ ಹಿನ್ನೆಲೆ ಬಾಲಕಿ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ಅಗ್ನಿ ಅವಘಡ – 3 ಮಕ್ಕಳು ಸೇರಿ ಕುಟುಂಬದ 6 ಮಂದಿ ಸಾವು

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *