ವರ್ಷಕ್ಕೊಮ್ಮೆ ಪೂಜೆ ಸಲ್ಲುವ ಬೆಟ್ಟದ ತುದಿಯ ದೇವೀರಮ್ಮನ ನೋಡಲು ಹರಿದು ಬಂದ ಭಕ್ತಸಾಗರ

By
3 Min Read

ಚಿಕ್ಕಮಗಳೂರು: ಸಮುದ್ರ ಮಟ್ಟದಿಂದ ಸುಮಾರು 3,800 ಅಡಿ ಎತ್ತರದ ಗುಡ್ಡದ (Hill) ತುದಿಯಲ್ಲಿರುವ ತಾಲೂಕಿನ ಬಿಂಡಿಗ (Bindiga) ದೇವೀರಮ್ಮನ (Deviramma) ದರ್ಶನಕ್ಕಾಗಿ ಇಂದು ಸುಮಾರು 1 ಲಕ್ಷಕ್ಕೂ ಅಧಿಕ ಭಕ್ತರು ಬೆಟ್ಟ ಹತ್ತಿದ್ದಾರೆ. ತಾಯಿಯ ದರ್ಶನ ಪಡೆದು ಪುನೀತರಾಗಿದ್ದಾರೆ.

ಭಾನುವಾರ ಸಂಜೆಯಿಂದಲೇ ಕೆಎಸ್‌ಆರ್‌ಟಿಸಿ ಬಸ್ಸನ್ನು ಹತ್ತಿ ಬಿಂಡಿಗ ಗ್ರಾಮದತ್ತ ಸಾವಿರಾರು ಭಕ್ತರು ಸಾಗಿದ್ದರು. ಬಳಿಕ ರಾತ್ರಿಯಿಂದಲೇ ಬೆಟ್ಟ ಹತ್ತೋಕೆ ಆರಂಭಿಸಿದ್ದರು. ಸೋಮವಾರ ಬೆಳಗಿನ ಜಾವ ದೇವೀರಮ್ಮ ತಾಯಿಗೆ ಭಕ್ತರು ತಮ್ಮ ಭಕ್ತಿಯನ್ನು ಸಮರ್ಪಿಸಿದ್ದಾರೆ.

ಮಹಿಳೆಯರು, ಮಕ್ಕಳು ಸೇರಿದಂತೆ ಸಾವಿರಾರು ಭಕ್ತರು ಆಯಾಸವನ್ನು ಲೆಕ್ಕಿಸದೇ ಪಿರಮಿಡ್ ಆಕಾರದ ಬೆಟ್ಟವನ್ನು ಉತ್ಸಾಹದಿಂದ ಹತ್ತಿದರು. ಕಾಫಿತೋಟ, ಕಲ್ಲುಮುಳ್ಳಿನ, ಕಡಿದಾದ ರಸ್ತೆಯಲ್ಲಿ ಒಬ್ಬರ ಕೈಯನ್ನೊಬ್ಬರು ಹಿಡಿದುಕೊಂಡು ಸರದಿ ಸಾಲಲ್ಲಿ ಸಾಗಿ ಗುಡ್ಡದ ತುದಿಯ ದೇವಿ ದರ್ಶನ ಪಡೆದಿದ್ದಾರೆ.

ವಾಹನಗಳಲ್ಲಿ ಮಲ್ಲೇನಹಳ್ಳಿಗೆ ತೆರಳಿದ ಭಕ್ತರು 4 ಕಿ.ಮೀ ದೂರದಲ್ಲೇ ಗಾಡಿ ನಿಲ್ಲಿಸಿ ಕಾಫಿ ತೋಟದೊಳಗಿನಿಂದ ನಡೆಯೋಕೆ ಆರಂಭಿಸಿದ್ದರು. ದೇವಿಯ ದರ್ಶನ ಪಡೆದು ಹಿಂದಿರುಗುವಾಗ ಸೂರ್ಯ ಕ್ರಮೇಣ ನೆತ್ತಿ ಮೇಲೆ ಬರುತ್ತಿದ್ದಂತೆ ಭಕ್ತರು ಬೆಟ್ಟ ಹಾಗೂ ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಂಡರು.

ದೇವೀರಮ್ಮ ದೀಪೋತ್ಸವದ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಡಿವೈಎಸ್‌ಪಿ, 8 ಮಂದಿ ಸಿಪಿಐ, 32 ಪಿಎಸ್‌ಐ, 87 ಎಎಸ್‌ಐ, 453 ಮುಖ್ಯ ಪೇದೆ ಮತ್ತು ಪೇದೆ, 62 ಗೃಹ ರಕ್ಷಕದಳ ಹಾಗೂ 6 ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿತ್ತು.

ಮಲ್ಲೇನಹಳ್ಳಿ ಸಮೀಪ 15 ಎಕರೆ ಪ್ರದೇಶದಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿತ್ತು. ಬೆಟ್ಟಕ್ಕೆ ಸಾಗುವ ಭಕ್ತರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಭಕ್ತರು ಸುರಕ್ಷಿತವಾಗಿ ಬೆಟ್ಟ ಹತ್ತಲು ಅಗ್ನಿಶಾಮಕ ದಳ, ಗ್ರಾಮಸ್ಥರು ಮತ್ತು ಸ್ವಯಂ ಸೇವಕರನ್ನು ನಿಯೋಜಿಸಲಾಗಿತ್ತು.

ಕಳೆದ 2-3 ವರ್ಷಗಳಿಂದ ಕೊರೊನಾ, ಮಳೆ ಕಾರಣಕ್ಕೆ ಬೆಟ್ಟ ಹತ್ತುವವರ ಸಂಖ್ಯೆ ತೀವ್ರ ಇಳಿಮುಖವಾಗಿತ್ತು. ಆದರೆ ಈ ವರ್ಷ ಊಹೆಗೂ ಮೀರಿ ಭಕ್ತರ ಸಾಗರವೇ ಹರಿದು, ಬೆಟ್ಟ ಹತ್ತಿ ತಾಯಿಯ ದರ್ಶನ ಪಡೆದಿದ್ದಾರೆ. ದೀಪಾವಳಿ ಅಮಾವಾಸ್ಯೆಯ ಹಿಂದಿನ ದಿನ ಬೆಟ್ಟದಲ್ಲಿರುವ ಶಿವನ ಅಸ್ತ್ರಗಳುಳ್ಳ ದುರ್ಗೆಗೆ ವಿಶೇಷ ಪೂಜೆ ನಡೆಯುತ್ತದೆ. ಆ ಪೂಜೆಯನ್ನು ನೋಡಿ ಕಣ್ತುಂಬಿಕೊಳ್ಳಲು ಭಕ್ತರು ಬಿಂಡಿಗ ಗ್ರಾಮಕ್ಕೆ ಬಂದೇ ಬರುತ್ತಾರೆ. ಇಲ್ಲಿ ಹರಕೆ ಕಟ್ಟಿದರೆ, ಆ ಹರಕೆ ಈಡೇರುವುದರಲ್ಲಿ ಅನುಮಾನವಿಲ್ಲ. ಅದಕ್ಕಾಗಿ ಹರಕೆ ಕಟ್ಟಿದ, ಕಟ್ಟದ ಭಕ್ತರು ಪ್ರತಿ ವರ್ಷ ಇಲ್ಲಿಗೆ ಬಂದೇ ಬರುತ್ತಾರೆ. ಇದನ್ನೂ ಓದಿ: UK ಪ್ರಧಾನಿಯಾದ ರಿಷಿ ಸುನಾಕ್ – ಸಾಮಾಜಿಕ ಜಾಲತಾಣದಲ್ಲಿ ಆಶಿಶ್ ನೆಹ್ರಾ ಫೋಟೋ ಟ್ರೆಂಡ್

ವಿದ್ಯುತ್ ಸಂಪರ್ಕ ಕೂಡ ಇಲ್ಲದ, ಆ ಕಲ್ಲು-ಬಂಡೆ, ಮುಳ್ಳುಗಳ ಬೆಟ್ಟದಲ್ಲಿ ಭಕ್ತರು ಭಾನುವಾರ ರಾತ್ರಿ 10 ಗಂಟೆಯಿಂದಲೇ ಬೆಟ್ಟ ಹತ್ತೋಕೆ ಶುರು ಮಾಡಿ ರಾತ್ರೋರಾತ್ರಿ ಕೆಳಗಿಳಿಯುತ್ತಾರೆ. ಹರಕೆ ಕಟ್ಟಿಕೊಂಡವರು ಬೆಟ್ಟ ಹತ್ತುವಾಗ ಎಷ್ಟೇ ಕಷ್ಟವಾದರೂ ಅವರ ಶಕ್ತಿಗನುಸಾರವಾಗಿ ಸೌದೆಯನ್ನು ಹೊತ್ತೊಯ್ಯುತ್ತಾರೆ. ಇದರ ಜೊತೆಗೆ, ಸೀರೆ, ತುಪ್ಪ, ಬೆಣ್ಣೆ, ಕಾಯಿ, ಬಾಳೆಹಣ್ಣನ್ನು ದೇವಿಗೆ ಸಮರ್ಪಿಸುತ್ತಾರೆ.

ಸಮುದ್ರ ಮಟ್ಟದಿಂದ ಸುಮಾರು 3,800 ಅಡಿ ಎತ್ತದಲ್ಲಿರುವ ದೇವೀರಮ್ಮನ ಬೆಟ್ಟದಲ್ಲಿ ವರ್ಷಕ್ಕೊಮ್ಮೆ ಮಾತ್ರವೇ ಪೂಜೆ ನಡೆಯುತ್ತದೆ. ವೃತದ ಮೂಲಕ ಹರಕೆ ಕಟ್ಟಿ ಉಪವಾಸವಿದ್ದವರು ದೇವರಿಗೆ ಪೂಜೆ ಸಲ್ಲಿಸಿದ ಬಳಿಕ, ಬೆಟ್ಟದಲ್ಲಿ ಸಂಜೆ ದೀಪ ಬೆಳಗಿದ ನಂತರವೇ ಊಟ ಮಾಡುತ್ತಾರೆ. ಸಂಜೆ ಭಕ್ತರು ತಂದ ಸೌದೆ, ಎಣ್ಣೆ, ಬೆಣ್ಣೆ, ಸೀರೆ, ರವಕೆಗಳಿಗೆ ಅಗ್ನಿ ಸ್ಪರ್ಶ ಮಾಡಿದ ಮೇಲೆ ಚಿಕ್ಕಮಗಳೂರಿನ (Chikkamagaluru) ಸುತ್ತಮುತ್ತಲಿನ ಜನರು ಆ ಜ್ಯೋತಿಯನ್ನು ಭಕ್ತಿಯಿಂದ ನೋಡುತ್ತಾರೆ. ಬಳಿಕ ಅದಕ್ಕೆ ಆರತಿ ಮಾಡಿ, ದೀಪಾವಳಿಯನ್ನು ಆಚರಿಸುತ್ತಾರೆ. ಇದನ್ನೂ ಓದಿ: ಎಸ್ಸಿ, ಎಸ್ಟಿ ಮೀಸಲಾತಿ ಕಾಂಗ್ರೆಸ್‌ ಪಕ್ಷದ ಕೂಸು – ಡಿಕೆಶಿ

ಈ ಬೆಟ್ಟದ ತಾಯಿಗೂ ಮೈಸೂರು ಅರಸರಿಗೂ ತೀರಾ ಅವಿನಾಭಾವ ಸಂಬಂಧವಿದೆ. ಪ್ರತಿ ವರ್ಷ ಮೈಸೂರಿನ ಅರಮನೆಯಿಂದ ಈ ದೇವಾಲಯಕ್ಕೆ ಇಂದಿಗೂ ಎಣ್ಣೆ, ಸೀರೆ, ಅರಿಶಿನ, ಕುಂಕುಮ ಸೇರಿದಂತೆ ಪೂಜೆಯ ವಸ್ತುಗಳು ಬರುತ್ತದೆ. ಈ ವರ್ಷ ಪುನೀತ್ ರಾಜ್‌ಕುಮಾರ್ ಅವರ ಸಾವಿರಾರು ಅಭಿಮಾನಿಗಳು ಕೂಡಾ ಬೆಟ್ಟ ಹತ್ತಿದ್ದು, ಅಪ್ಪುವಿನ ಫ್ಲೆಕ್ಸ್ ಹಿಡಿದು ಗುಡ್ಡದ ತುದಿಯಲ್ಲಿ ಪ್ರದರ್ಶಿಸಿದ್ದು ವಿಶೇಷವಾಗಿತ್ತು. ಆದರೆ ಒಂದು ರಾತ್ರಿ, ಒಂದು ಹಗಲಲ್ಲಿ ಬರುವ ಸುಮಾರು ಲಕ್ಷದಷ್ಟು ಭಕ್ತರನ್ನು ನಿಭಾಯಿಸಿ, ಸಂಭಾಳಿಸುವಷ್ಟರಲ್ಲಿ ಪೊಲೀಸರು ಮಾತ್ರ ಹೈರಾಣಾಗಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *