ಕರಾವಳಿ, ಮಲೆನಾಡಿನಲ್ಲಿ ಮುಂದುವರಿದ ಮಳೆ ಅವಾಂತರ – 10 ದಿನದ ಹಿಂದೆ ಕೊಚ್ಚಿಹೋದ ಬಾಲಕಿ ಸುಳಿವು ಇನ್ನೂ ಸಿಕ್ಕಿಲ್ಲ

Public TV
3 Min Read

ಬೆಂಗಳೂರು: ಕೇವಲ ಒಂದು ದಿನದ ಮಟ್ಟಿಗೆ ಬಿಡುವು ಕೊಟ್ಟಿದ್ದ ಮಳೆ ಕರಾವಳಿ, ಮಲೆನಾಡಿನ ಹಲವೆಡೆ ಮತ್ತೆ ಅಬ್ಬರಿಸಲು ಶುರು ಮಾಡಿದೆ.

ಚಿಕ್ಕಮಗಳೂರಿನ ಕಡೂರು ಭಾಗದಲ್ಲಿ ಅಡಿಕೆ ಹಾಗೂ ತೆಂಗಿನ ತೋಟಗಳು ಸಂಪೂರ್ಣ ಜಲಾವೃತಗೊಂಡಿದೆ. ತೋಟದ ನಡುವೆ ಮೂರ್ನಾಲ್ಕು ಅಡಿ ಎತ್ತರದವರೆಗೂ ನದಿ ನೀರು ಪ್ರವಹಿಸಿದ್ದು, ರೈತರು ಕಂಗಾಲಾಗಿದ್ದಾರೆ. ಕೊಪ್ಪ ತಾಲೂಕಿನ ಕಲ್ಲು ಗುಡ್ಡೆ ಗ್ರಾಮದ ರಸ್ತೆ, ಜಯಪುರದಿಂದ ಬಸರಿಕಟ್ಟೆ ಮಾರ್ಗದ ರೋಡ್ ಅರ್ಧಕರ್ಧ ಕಟ್ಟಾಗಿದೆ. ಈ ಭಾಗದ ಹತ್ತಾರು ಹಳ್ಳಿಗಳ ಜನ ಸಂಕಷ್ಟಕ್ಕೀಡಾಗಿದ್ದಾರೆ. ಮಳೆ ನಡುವೆಯೇ ಚಿಕ್ಕಮಗಳೂರಿನ ಉಂಡೆ ದಾಸರಹಳ್ಳಿಯ ಹಳ್ಳದಲ್ಲಿ ಕೊಚ್ಚಿಹೋದ ವ್ಯಕ್ತಿಗಾಗಿ ಶೋಧ ಮುಂದುವರಿದಿದೆ. 10 ದಿನದ ಹಿಂದೆ ಕೊಚ್ಚಿಹೋದ ಬಾಲಕಿ ಸುಪ್ರಿತಾ ಸುಳಿವು ಇನ್ನೂ ಸಿಕ್ಕಿಲ್ಲ. ಶೃಂಗೇರಿಯಲ್ಲಿ ಇವತ್ತು ಕೂಡ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಶಿವಮೊಗ್ಗ ಜಿಲ್ಲೆ ತಾಳಗುಪ್ಪದ ಬೀಸನಗದ್ದೆಯಲ್ಲಿ ಇತ್ತೀಚಿಗೆ 1 ಕೋಟಿ ವೆಚ್ಚದಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದ್ದ ರಸ್ತೆ ಕೊಚ್ಚಿ ಹೋಗಿದೆ. ಈ ಬಗ್ಗೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಕೆಸರು ಗದ್ದೆಯಾದ ಗ್ರಾಮದ ಮುಖ್ಯರಸ್ತೆ – ಅಧಿಕಾರಿಗಳಿಗೆ ಜನರ ಹಿಡಿ ಶಾಪ

ಹೊಸನಗರದ ಸುಣ್ಣದ ಬಸ್ತಿ ಬಳಿ ಮರ ಬಿದ್ದು, ರಿಪ್ಪನ್ ಪೇಟೆ – ಕೋಣಂದೂರು ಮಾರ್ಗ ಬಂದ್ ಆಗಿದೆ. ಕೊಡಗಿನ ಶಿರಂಗಾದಲ್ಲಿ ಮತ್ತೊಂದು ಮನೆ ಕುಸಿದಿದೆ. ಇದರಿಂದಾಗಿ ಮಲಗೋಕು ಜಾಗ ಇಲ್ಲವಾಯ್ತು ಎಂದು ವೃದ್ಧೆ ಕಣ್ಣೀರು ಇಟ್ಟಿದ್ದಾರೆ. ಕರಾವಳಿಯಲ್ಲಿ ಇವತ್ತು ಎಲ್ಲಿಯೂ ಜೋರು ಮಳೆ ಆಗಿಲ್ಲ. ಆದ್ರೆ, ಗುಡ್ಡಕುಸಿತ ಮತ್ತು ನೆರೆ ಅವಾಂತರಗಳು ಮುಂದುವರಿದಿವೆ. ದಕ್ಷಿಣ ಕನ್ನಡದ ಹರಿಹರ ಪಲ್ಲತಡ್ಕ ಎಂಬಲ್ಲಿ ಗೃಹಪ್ರವೇಶಕ್ಕೆ ರೆಡಿ ಆಗಿದ್ದ ಮನೆ ಮೇಲೆ ಗುಡ್ಡ ಕುಸಿದಿದೆ. ಮನೆ ಸಂಪೂರ್ಣ ನೆಲಸಮವಾಗಿದ್ದು, ಅದೃಷ್ಟವಶಾತ್ ಸಾವು ನೋವು ತಪ್ಪಿದೆ. ಉತ್ತರ ಕನ್ನಡ ಜಿಲ್ಲೆಯ ಗುಡ್ನಾಪೂರದ ಬಂಗಾರೇಶ್ವರ ದೇವಸ್ಥಾನ ಜಲಾವೃವಾಗಿದೆ. ಶಿರಸಿಯ ನೂರಾರು ಎಕರೆ ಅಡಿಕೆ ತೋಟ, ಗದ್ದೆಗಳು ನೀರಿನಲ್ಲಿ ಮುಳುಗಡೆಯಾಗಿದೆ. ಇದನ್ನೂ ಓದಿ: ಮೂಲಸೌಕರ್ಯಕ್ಕೆ 500 ಕೋಟಿ ರೂ. ಬಿಡುಗಡೆ: ಬೊಮ್ಮಾಯಿ

ಉತ್ತರ ಕರ್ನಾಟಕದಲ್ಲಿ ವಿಸ್ತಾರವಾಗಿ ಮಳೆ ಆಗ್ತಿಲ್ಲ. ಆದ್ರೆ, ಮಹಾರಾಷ್ಟ್ರದಲ್ಲಿ ಭಾರೀ ಮಳೆ ಮುಂದುವರಿದಿರುವ ಪರಿಣಾಮ ನದಿಗಳು ತುಂಬಿ ಹರಿಯುತ್ತಿವೆ. ಹಲವು ಜಿಲ್ಲೆಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಕೃಷ್ಣೆ ಅಪಾಯದ ಮಟ್ಟ ಮೀರಿದೆ. ಚಿಕ್ಕೋಡಿದ ದತ್ತ ದೇಗುಲ, ಕಾರದಗಾ ಗ್ರಾಮದ ಬಂಗಾಲಿ ಬಾಬಾ ದೇಗುಲ ಜಲಾವೃತವಾಗಿದೆ. 8 ಕೆಳಹಂತದ ಸೇತುವೆ ಮುಳುಗಿವೆ. ನಾರಾಯಣಪುರ ಡ್ಯಾಂನಿಂದ ಕೃಷ್ಣಾ ನದಿಗೆ ಅಪಾರ ನೀರು ಹರಿಸಿರೋದ್ರಿಂದ ಲಿಂಗಸುಗೂರಿನ ಶೀಲಹಳ್ಳಿ ಸೇತುವೆ ಮುಳುಗಡೆ ಹಂತದಲ್ಲಿದೆ. ದೇವದುರ್ಗದ ಹೂವಿನಹೆಡಗಿ ಸೇತುವೆ ಬಳಿಯ ಬಸವಣ್ಣ ದೇವಾಲಯ ಭಾಗಶಃ ಮುಳುಗಿದೆ. ನದಿ ತಟದ ಪಂಪ್‍ಸೆಟ್ ಉಳಿಸಿಕೊಳ್ಳಲು ರೈತರು ಪರದಾಡ್ತಿದ್ದಾರೆ. ತುಂಗಭದ್ರಾ ಜಲಾಶಯವೂ ಭರ್ತಿಯಾದ ಪರಿಣಾಮ 1ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ಬಿಡಲಾಗಿದೆ. ಗಂಗಾವತಿಯ ನವಬೃಂದಾವನ ಗಡ್ಡೆ, ಶ್ರೀಕೃಷ್ಣದೇವರಾಯನ ಸಮಾಧಿ ಮಂಟಪ ಮುಳುಗಡೆ ಆಗಿದೆ. ಟಿಬಿ ಡ್ಯಾಂ ವೀಕ್ಷಣೆಗೆ ನಿರ್ಬಂಧ ಹೇರಲಾಗಿದೆ. ಕಂಪ್ಲಿ-ಗಂಗಾವತಿ ಸೇತುವೆ ಬಂದ್ ಆಗಿದೆ. ಏಕಾಏಕಿ ನೀರು ಬಿಟ್ಟಿದ್ರಿಂದ ವಿಜಯನಗರ ಕಾಲುವೆ ಬಿರುಕು ಬಿಟ್ಟಿದೆ. ವರದಾ ನದಿ ಉಕ್ಕಿದ ಪರಿಣಾಮ ಹಾವೇರಿಯ ಬಂಕಾಪುರದ ಬಳಿ ನೂರಾರು ಎಕರೆ ಕೃಷಿ ಭೂಮಿ ಜಲಾವೃತವಾಗಿದೆ. ಇದಕ್ಕೆ ಅವೈಜ್ಞಾನಿಕ ಕಾಲುವೆಯೇ ಕಾರಣ ಎಂದು ಆರೋಪಿಸಿ ರೈತರು ನೀರಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಭಾರೀ ಮಳೆಗೆ ಗೃಹಪ್ರವೇಶ ಸಿದ್ಧತೆಯಲ್ಲಿದ್ದ ಮನೆ ನೆಲಸಮ

ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾದ ಕಾರಣ ಕೆಆರ್‌ಎಸ್‌ಗೆ ನೀರಿನ ಹರಿವು ಕಡಿಮೆ ಆಗಿದೆ. ಹೀಗಾಗಿ ಹೊರ ಹರಿವನ್ನು ಕಡಿಮೆ ಮಾಡಲಾಗಿದೆ. ಶ್ರೀರಂಗಪಟ್ಟಣದ ಸಂಗಮದಲ್ಲಿ ಬೆಂಗಳೂರು ಮೂಲದ ಯುವಕನೊಬ್ಬ ಕೊಚ್ಚಿ ಹೋಗಿದ್ದಾನೆ. ಆದ್ರೆ, ಕಬಿನಿಗೆ ಒಳ ಹರಿವು ಹೆಚ್ಚುತ್ತಲೇ ಇದೆ. ಜಲಾಶಯ ಬಹುತೇಕ ಭರ್ತಿಯಾಗಿದೆ. ಡ್ಯಾಂ ಸುರಕ್ಷತೆಯಿಂದ ನಾಲ್ಕು ಗೇಟ್‌ಗಳ ಮೂಲಕ ನೀರು ಬಿಡಲಾಗಿದೆ. ಹೊಗೆನಕಲ್ ಜಲಪಾತ ಭೋರ್ಗರೆಯುತ್ತಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *