“ಗಾಂಧಿಯಿಂದ ಗೋಡ್ಸೆಯವರೆಗೆ”..ರಾಷ್ಟ್ರ ಲಾಂಛನಕ್ಕೆ ಅವಮಾನ – ಮೋದಿ ವಿರುದ್ಧ ಕಿಡಿ

Public TV
1 Min Read

ನವದೆಹಲಿ: ಹೊಸ ಸಂಸತ್ ಭವನದಲ್ಲಿ ಅನಾವರಣಗೊಂಡ 9,500 ಕೆಜಿ ಕಂಚಿನ ರಾಷ್ಟ್ರೀಯ ಲಾಂಛನ ಈಗ ವಿವಾದಕ್ಕೆ ಕಾರಣವಾಗಿದೆ.

ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ರಾಷ್ಟ್ರೀಯ ಲಾಂಛನವನ್ನು ವಿರೂಪಗೊಳಿಸಿದೆ ಎಂದು ವಿರೋಧ ಪಕ್ಷಗಳು  ಟೀಕೆ ವ್ಯಕ್ತಪಡಿಸಿವೆ.

ವಿವಾದ ಏನು?
ಸಾರನಾಥದ ಅಶೋಕ ಸ್ತಂಭದಲ್ಲಿರುವ ನಾಲ್ಕು ಮುಖಗಳ ಸಿಂಹ ಭಾರತ ರಾಷ್ಟ್ರ ಲಾಂಛನವಾಗಿದೆ. ಮೋದಿ ಅನಾವರಣಗೊಳಿಸಿರುವ ಲಾಂಛನದಲ್ಲಿ ಸಿಂಹಗಳು ಬಾಯಿ ತೆರೆದಿದ್ದು ಎರಡು ಕೋರೆ ಹಲ್ಲುಗಳು ಕಾಣುತ್ತಿದ್ದು ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ಹೊಸ ಸಂಸತ್ ಭವನದಲ್ಲಿ 9,500 ಕೆಜಿ ಕಂಚಿನ ರಾಷ್ಟ್ರೀಯ ಲಾಂಛನ ಅನಾವರಣ – ಏನಿದರ ವಿಶೇಷ?

ರಾಷ್ಟ್ರೀಯ ಜನತಾ ದಳ, ಮೂಲ ಲಾಂಛನದಲ್ಲಿ ನಾಲ್ಕು ಸಿಂಹಗಳ ಮುಖದಲ್ಲಿ ಸೌಮ್ಯವಿದೆ. ಆದರೆ ಹೊಸದಾಗಿ ಅನಾವರಣಗೊಂಡ ಸಿಂಹಗಳು ಬಾಯಿ ತೆರೆದಿದ್ದು ಎಲ್ಲವನ್ನೂ ನುಂಗುವ ಪ್ರವೃತ್ತಿಯಲ್ಲಿದೆ ಎಂದು ಟೀಕಿಸಿದೆ.

ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ʼಗಾಂಧಿಯಿಂದ ಗೋಡ್ಸೆಯವರೆಗೆʼ ಎಂದು ಬರೆದು ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. “ಗಾಂಧಿಯಿಂದ ಗೋಡ್ಸೆಯವರೆಗೆ; ನಮ್ಮ ರಾಷ್ಟ್ರೀಯ ಲಾಂಛನದಲ್ಲಿ ಸಿಂಹಗಳು ಭವ್ಯವಾಗಿ ಮತ್ತು ಶಾಂತಿಯುತವಾಗಿ ಕುಳಿತಿವೆ. ಸೆಂಟ್ರಲ್‌ ವಿಸ್ತಾದಲ್ಲಿ ನಿರ್ಮಾಣವಾಗುತ್ತಿರುವ ಹೊಸ ಸಂಸತ್ ಕಟ್ಟಡದ ಮೇಲ್ಭಾಗದಲ್ಲಿ ಅನಾವರಣಗೊಂಡ ಹೊಸ ರಾಷ್ಟ್ರೀಯ ಲಾಂಛನಗಳು ಕೋರೆಹಲ್ಲುಗಳನ್ನು ಹೊಂದಿರುವ ಕೆರಳಿರುವ ಸಿಂಹಗಳು. ಇದು ಮೋದಿಯ ನವ ಭಾರತ ಎಂದು ವ್ಯಂಗ್ಯವಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಷ್ಟ್ರೀಯ ಲಾಂಛನದಲ್ಲಿರುವ ಸಿಂಹಗಳಿಗೆ ಯಾವುದೇ ರೀತಿಯಲ್ಲಿ ಅವಮಾನವಾಗಿಲ್ಲ. ಮೇಲಿನಿಂದ ಫೋಟೋ ತೆಗೆದರೆ ಎಲ್ಲ ಸಿಂಹಗಳು ಸೌಮ್ಯ ರೀತಿಯಲ್ಲೇ ಕಾಣುತ್ತಿವೆ. ಆದರೆ ಕೆಳಗಡೆಯಿಂದ ಮೇಲುಗಡೆ ಇರುವ ಸಿಂಹದ ಫೋಟೋ ತೆಗೆದಾಗ ಎರಡು ಕೋರೆ ಹಲ್ಲುಗಳು ಕಾಣುತ್ತವೆ ಎಂದಿದ್ದಾರೆ.

ಇನ್ನು ಕೆಲವರು ಕಾಂಗ್ರೆಸ್‌ ಆಡಳಿತದ ಕಾಲದಲ್ಲಿ ಭಾರತ ವಿದೇಶಗಳಿಗೆ ತಲೆ ಬಾಗಿತ್ತು. ಆದರೆ ಮೋದಿ ಅವಧಿಯಲ್ಲಿ ಸಿಂಹದಂತೆ ಭಾರತ ಘರ್ಜಿಸುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *