5 ಸ್ಟಾರ್‌ ಹೋಟೆಲ್‌ನಲ್ಲಿ ಬಂಡಾಯ ಶಾಸಕರು ಫುಲ್‌ ಬಿಂದಾಸ್ – ದಿನದ ಖರ್ಚು ಎಷ್ಟು ಗೊತ್ತಾ?‌

Public TV
2 Min Read

ದಿಸ್ಪುರ: ಇತ್ತ ಮಹಾರಾಷ್ಟ್ರ ಸರ್ಕಾರಕ್ಕೆ ಬಿಕ್ಕಟ್ಟು ಎದುರಾಗಿ ʼಮಹಾವಿಕಾಸ್‌ ಅಘಡಿʼ ಮೈತ್ರಿಕೂಟದ ನಾಯಕರು ತಲೆಕೆಡಿಸಿಕೊಂಡಿದ್ದರೆ, ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸಿ ಅತ್ತ ಬಂಡಾಯ ಶಾಸಕರು 5 ಸ್ಟಾರ್‌ ಹೋಟೆಲ್‌ನಲ್ಲಿ ಎಂಜಾಯ್‌ ಮಾಡುತ್ತಿದ್ದಾರೆ.

ಮಹಾರಾಷ್ಟ್ರ ಸರ್ಕಾರದ ವಿರುದ್ಧ ಬಂಡಾಯ ಎದ್ದಿರುವ ಶಿವಸೇನಾ ಶಾಸಕರಿಗೆ ಅಸ್ಸಾಂನ 5 ಸ್ಟಾರ್‌ ಹೋಟೆಲ್‌ನಲ್ಲಿ ರಾಜಾತಿಥ್ಯವೇ ನಡೆಯುತ್ತಿದೆ. ದುಬಾರಿ ಹೋಟೆಲ್‌ನಲ್ಲಿ ಶಾಸಕರನ್ನು ಇರಿಸಿ ವಿಶೇಷ ಆತಿಥ್ಯ ನೀಡಲಾಗುತ್ತಿದೆ. ಈ ಹೋಟೆಲ್‌ನಲ್ಲಿ ಎಲ್ಲವೂ ದುಬಾರಿ. ರೂಂ ವೆಚ್ಚ ಹಾಗೂ ಇತರೆ ಸೌಲಭ್ಯಗಳ ಬೆಲೆ ಕೇಳಿದರೆ ಅಚ್ಚರಿ ಪಡುವಂತಿದೆ. ಇದನ್ನೂ ಓದಿ: ಅಸ್ಸಾಂನಲ್ಲಿರುವ ಶಿವಸೇನೆ ರೆಬಲ್ ಶಾಸಕರನ್ನು ಆತಿಥ್ಯಕ್ಕೆ ಕರೆದ ಮಮತಾ ಬ್ಯಾನರ್ಜಿ

ಬಂಡಾಯ ಶಾಸಕರು ತಂಗಿರುವ ಗುವಾಹಟಿಯ ಪಂಚತಾರಾ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದಾರೆ. 7 ದಿನಗಳ ಮಟ್ಟಿಗೆ 70 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಏಕನಾಥ್ ಶಿಂಧೆ ನೇತೃತ್ವದ ಶಾಸಕರು ಸೋಮವಾರ ಬಿಜೆಪಿ ಆಡಳಿತವಿರುವ ಗುಜರಾತ್‌ನ ಸೂರತ್‌ನಲ್ಲಿರುವ ಹೊಟೇಲ್‌ನಲ್ಲಿದ್ದರು. ಅವರು ಬುಧವಾರ ಮತ್ತೊಂದು ಬಿಜೆಪಿ ಆಡಳಿತದ ರಾಜ್ಯವಾದ ಅಸ್ಸಾಂನ ಗುವಾಹಟಿಗೆ ಹಾರಿದರು. ಈಗ ಅಲ್ಲಿನ ಅತಿ ದುಬಾರಿ ಪಂಚತಾರಾ ಹೋಟೆಲ್‌ನಲ್ಲಿ ಹಾಯಾಗಿದ್ದಾರೆ.

ತಂಗಲು ವೆಚ್ಚ ಎಷ್ಟು?
ಗುವಾಹಟಿಯ ರಾಡಿಸನ್ ಬ್ಲೂ ಹೋಟೆಲ್‌ನಲ್ಲಿನ ಕೊಠಡಿಗಳಿಗೆ ಏಳು ದಿನಗಳ ಸುಂಕ 56 ಲಕ್ಷ ರೂ. ಎಂದು ಹೋಟೆಲ್ ಮತ್ತು ಸ್ಥಳೀಯ ರಾಜಕಾರಣಿಗಳ ಮೂಲಗಳು ತಿಳಿಸಿವೆ. ಆಹಾರ ಮತ್ತು ಇತರ ಸೇವೆಗಳ ದೈನಂದಿನ ಅಂದಾಜು ವೆಚ್ಚ ದಿನಕ್ಕೆ 8 ಲಕ್ಷ ರೂ. ಇದೆ.

ಹೋಟೆಲ್‌ನಲ್ಲಿ ಒಟ್ಟು 196 ಕೊಠಡಿಗಳಿವೆ. ಶಾಸಕರು ಮತ್ತು ಅವರ ತಂಡಗಳಿಗಾಗಿ ಕಾಯ್ದಿರಿಸಿದ 70 ಕೊಠಡಿಗಳನ್ನು ಹೊರತುಪಡಿಸಿ, ಈಗಾಗಲೇ ಕಾರ್ಪೊರೇಟ್ ಡೀಲ್‌ಗಳಲ್ಲಿ ಕಾಯ್ದಿರಿಸಿದವರನ್ನು ಬಿಟ್ಟು ಹೊಸ ಬುಕಿಂಗ್‌ಗಳನ್ನು ಆಡಳಿತ ಮಂಡಳಿ ಸ್ವೀಕರಿಸುತ್ತಿಲ್ಲ. ಅಲ್ಲದೆ ಔತಣಕೂಟವನ್ನು ಸಹ ಮುಚ್ಚಲಾಗಿದೆ. ಆದ್ದರಿಂದ ಹೋಟೆಲ್‌ನಲ್ಲಿ ಉಳಿದುಕೊಂಡಿರುವವರನ್ನು ಹೊರತುಪಡಿಸಿ ರೆಸ್ಟೋರೆಂಟ್ ಕೂಡ ಮುಚ್ಚಲ್ಪಟ್ಟಿದೆ. ಇದನ್ನೂ ಓದಿ: 24 ಗಂಟೆಯೊಗಳಗೆ ವಾಪಸ್‌ ಬಂದ್ರೆ, ಶಿವಸೇನೆ ಮೈತ್ರಿ ಬಿಡಲು ಸಿದ್ಧ: ಸಂಜಯ್‌ ರಾವತ್

ಕಾಂಗ್ರೆಸ್‌ ಹಾಗೂ ಎನ್‌ಸಿಪಿಯೊಂದಿಗೆ ಮೈತ್ರಿಕೂಟವನ್ನು ಶಿವಸೇನಾ ತ್ಯಜಿಸಬೇಕು ಎಂದು ಒತ್ತಾಯಿಸಿ ಏಕನಾಥ್‌ ಶಿಂಧೆ ನೇತೃತ್ವದಲ್ಲಿ 40 ಶಾಸಕರು ಪಂಚತಾರಾ ಹೋಟೆಲ್‌ನಲ್ಲಿ ಬೀಡುಬಿಟ್ಟಿದ್ದಾರೆ. ಅವರಿಗೆ ಬಿಜೆಪಿ ನಾಯಕರು ಎಲ್ಲಾ ರೀತಿಯ ಸೌಕರ್ಯ ಕಲ್ಪಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶಿವಸೇನಾ ಶಾಸಕರು ನೇರವಾಗಿ ಕೇಳಿದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದಿದ್ದ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಈಗಾಗಲೇ ಸಿಎಂ ಅಧಿಕೃತ ನಿವಾಸವನ್ನು ತೊರೆದಿದ್ದಾರೆ. ಇದರ ಬೆನ್ನಲ್ಲೇ, ಬಂಡಾಯ ಶಾಸಕರು 24 ಗಂಟೆಯೊಳಗೆ ವಾಪಸಾದರೆ ಮೈತ್ರಿಕೂಟವನ್ನು ಬಿಡಲಾಗುವುದು ಎಂದು ಸಂಜಯ್‌ ರಾವತ್‌ ಭರವಸೆ ನೀಡಿದ್ದಾರೆ. ರಾವತ್‌ ಹೇಳಿಕೆಯನ್ನು ಎನ್‌ಸಿಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ತೀವ್ರವಾಗಿ ಖಂಡಿಸಿವೆ.

Live Tv

Share This Article
Leave a Comment

Leave a Reply

Your email address will not be published. Required fields are marked *