ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಯ ಅಬ್ಬರ ಅವಾಂತರ ಜೋರಾಗಿದೆ. ಮಹಾದೇವಪುರ ವಲಯದಲ್ಲಿ ರಾತ್ರಿ 80ರಿಂದ 180 ಮಿ.ಮೀ ಮಳೆಯಾಗಿದೆ.
ಕಳೆದ ರಾತ್ರಿ ಸುರಿದ ರಣಮಳೆಗೆ ರಾಜಧಾನಿ ಬೆಂಗಳೂರು ಅಕ್ಷರಶಃ ನಲುಗಿಹೋಗಿದೆ. ಇಬ್ಬರು ಬಲಿಯಾಗಿದ್ದಾರೆ. ಕೆ.ಆರ್.ಪುರಂನಲ್ಲಿ ಸುರಿದ ಭಾರಿ ಮಳೆಗೆ ರಾಜಕಾಲುವೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಬೈಕ್ ರಕ್ಷಿಸಲು ಹೋಗಿ ಯುವಕ ನೀರುಪಾಲಾಗಿದ್ದಾನೆ.
ಶಿವಮೊಗ್ಗ ಮೂಲದ ಟೆಕ್ಕಿ ಮಿಥುನ್ಗಾಗಿ ಬೆಳಗ್ಗೆಯಿಂದ ಸಂಜೆವರೆಗೂ ಎಸ್ಡಿಆರ್ಎಫ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ರು. ಸುಳಿವು ಸಿಕ್ಕಿಲ್ಲ. ಕೆ.ಆರ್.ಪುರನಿಂದ ಸೀಗೆಹಳ್ಳಿ ಕೆರೆವರೆಗೂ ಜಾಲಾಡಿದ್ರು. ಮಹದೇವಪುರದಲ್ಲಿ ಗೋಡೆ ಕುಸಿದು 55 ವರ್ಷದ ಮುನಿಯಮ್ಮ ಎಂಬುವವರು ಮೃತಪಟ್ಟಿದ್ದಾರೆ. ಇದನ್ನೂ ಓದಿ: ದೇಶಭಕ್ತಿ ಇರೋರು ಸೇನೆ ಸೇರ್ತಾರೆ ಇಲ್ಲದಿರೋರು ಸಿದ್ದರಾಮಯ್ಯ ಥರ ಮಾತನಾಡುತ್ತಾರೆ: ಸಿ.ಟಿ ರವಿ
ಕೆಆರ್ಪುರದ ಕೃಷ್ಣ ಥಿಯೇಟರ್ನ ಕಾಂಪೌಂಡ್ ಕುಸಿದು 24 ಬೈಕ್ಗಳು ಜಖಂ ಆಗಿದೆ. ಥಿಯೇಟರ್ ಮಾಲೀಕರೇ ನಷ್ಟ ಭರಿಸಬೇಕೆಂದು ಬೈಕ್ ಸವಾರರು ದೂರು ಕೊಟ್ಟಿದ್ದಾರೆ. ಕೆ.ಆರ್.ಪುರಂನ ಮಳೆ ಹಾನಿ ಪ್ರದೇಶಗಳಿಗೆ ಸಚಿವ ಬೈರತಿ ಬಸವರಾಜು ಭೇಟಿ ಕೊಟ್ರು. ಜನ ತರಾಟೆ ತೆಗೆದುಕೊಂಡ್ರು. ಮತ್ತೆ ಸಾಯಿಲೇಔಟ್ ಮಂದಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹಲವು ಮನೆಗಳು ಜಲಾವೃತವಾಗಿದ್ದು, 2 ಅಡಿಗಿಂತ ಹೆಚ್ಚು ನಿಂತಿರುವ ನೀರಿನಲ್ಲಿ ಜನ ಪರದಾಡುವಂತಾಯಿತು.
ಆಹಾರವಿಲ್ಲದೇ ನಾಯಿಗಳ ಒದ್ದಾಟ ಒಂದು ಕಡೆಯಾದ್ರೆ, ಮತ್ತೊಂದೆಡೆ ಮಳೆ ಜೊತೆ ಹಾವುಗಳ ಕಾಟವೂ ಶುರುವಾಯ್ತು.ಎಸ್.ಆರ್ ಲೇಔಟ್ನಲ್ಲಿ ವರುಣನ ಅಬ್ಬರಕ್ಕೆ 2 ಅಡಿಯಷ್ಟು ಮನೆಗಳಲ್ಲಿ ನೀರು ನಿಂತು, ಮನೆಯಲ್ಲಿದ್ದ ವಸ್ತುಗಳೆಲ್ಲಾ ನೀರುಪಾಲಾಯಿತು. ಸಿಂಗಾಪುರ ಲೇಔಟ್ನಲ್ಲಿ ಅವಾಂತರಗಳ ಸರಮಾಲೆಯೇ ಸೃಷ್ಟಿಯಾಯ್ತು. ಜಿಲ್ಲೆಗಳಲ್ಲೂ ವರುಣನ ರಗಳೆ ಮುಂದುವರಿದಿದೆ.
ಚಿಕ್ಕಬಳ್ಳಾಪುರದಲ್ಲಿ ಪಾಪಾಘ್ನಿ ನದಿ ಉಕ್ಕಿಹರಿದು ರಸ್ತೆ ಕೊಚ್ಚಿ ಹೋಗಿದೆ. ಜಕ್ಕಲಮಡುಗು ಜಲಾಶಯ ಕೋಡಿಹರಿದಿದೆ. ತುಂಬಿ ಹರಿಯುತ್ತಿರುವ ನೀರಿನಲ್ಲಿ ಯುವಕರು ಮೀನು ಹಿಡಿದು ಖುಷಿಪಟ್ಟಿದ್ದಾರೆ. ಸುಲ್ತಾನಪೇಟೆ ಗ್ರಾಮದಲ್ಲಿ ಬೃಹತ್ ಆಲದ ಮರ ಧರೆಗುರುಳಿದ್ದು, ನಂದಿ ಗ್ರಾಮ- ಕಣಿವೆ ಬಸವಣ್ಣ-ನಂದಿಬೆಟ್ಟದ ಮಾರ್ಗ ಸಂಚಾರ ಬಂದ್ ಆಗಿದೆ.