ಹಿರಿಯೂರಿನ ವೃದ್ಧ ದಂಪತಿ ಬಾಳಲ್ಲಿ ಪಬ್ಲಿಕ್ ಬೆಳಕು

Public TV
2 Min Read

ಚಿತ್ರದುರ್ಗ: ಅಪ್ಪ-ಅಮ್ಮ ಜಗಳದಲ್ಲಿ ಕೂಸು ಬಡವಾಗೋದು ಸಹಜ. ಆದ್ರೆ ಮಗ-ಸೊಸೆಯ ಜಗಳದಿಂದ ಬೀದಿಗೆ ಬಿದ್ದಿದ್ದ ವೃದ್ಧರಿಗೆ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮ ನ್ಯಾಯ ಒದಗಿಸಿದೆ.

ಹಳೇ ಮನೆಯಲ್ಲಿ ಹಾಲು ಉಕ್ಕಿಸುತ್ತಿರುವ ವೃದ್ಧರು. ದಂಪತಿ ಮೊಗದಲ್ಲಿ ಮೂಡಿದ ಮಂದಹಾಸ. ಈ ಹರ್ಷದಾಯಕ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ಕೋಟೆನಾಡು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಸಾಲುಹುಣುಸೆ ಗ್ರಾಮದ ಶಿವಣ್ಣ, ನೇತ್ರಾವತಿ. ಇದನ್ನೂ ಓದಿ: 1940ರಲ್ಲೇ ನಿಧನರಾದ ಹೆಡ್ಗೆವಾರ್ 1942ರಲ್ಲಿ ಬ್ರಿಟಿಷರಿಗೆ ಸಹಾಯ ಮಾಡಿದ್ಹೇಗೆ? – ಟ್ವೀಟ್‌ನಲ್ಲೇ ಟಾಂಗ್ ಕೊಟ್ಟ ಬಿಜೆಪಿ

ಹೌದು, ಇವರ ಏಕೈಕ ಪುತ್ರ ಅರವಿಂದ್ ಹಾಗೂ ಆತನ ಪತ್ನಿ ನಡುವೆ ಹೊಂದಾಣಿಕೆ ಕೊರತೆಯಿಂದ ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ ಇದನ್ನೇ ನೆಪ ಮಾಡಿಕೊಂಡಿರುವ ಅರವಿಂದ್‌ನ ಪತ್ನಿ, ತನ್ನ ಅತ್ತೆ-ಮಾವನನ್ನು ಮನೆಯಿಂದ ಹೊರಹಾಕಿ, ಮನೆಗೆ ಬೀಗ ಹಾಕಿದ್ದಳು. ಹೀಗಾಗಿ ಸತತ 2 ವರ್ಷಗಳಿಂದ ಬೀದಿಯಲ್ಲಿ ವಾಸವಾಗಿದ್ದ ವೃದ್ಧರು ಬೆಳಕು ಕಾರ್ಯಕ್ರಮದ ಮೊರೆಗೆ ಧಾವಿಸಿ, ಅವರೇ ಕಟ್ಟಿದ ಮನೆಯಲ್ಲಿ ವಾಸಿಸಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದರು. ಹೀಗಾಗಿ ಚಿತ್ರದುರ್ಗ ಎಸ್‌ಪಿ ಪರಶುರಾಮ್ ನೇತೃತ್ವದಲ್ಲಿ ಮನೆಯ ಬೀಗವನ್ನು ತೆರವುಗೊಳಿಸಿ, ನೊಂದ ವೃದ್ಧರು ಸಂತಸದಿಂದ ಹಾಲು ಉಕ್ಕಿಸಿದರು. ಸಂಭ್ರಮದಿಂದ ದೇವರನ್ನು ಪ್ರಾರ್ಥಿಸಿ ಗೃಹ ಪ್ರವೇಶ ಮಾಡಿದರು.

2 ವರ್ಷಗಳಿಂದ ಮಗ ಸೊಸೆಯ ಜಗಳದಿಂದ ಮನನೊಂದಿದ್ದ ವೃದ್ಧರು ಯಾರ ಬಳಿ ತೆರಳಿದರೂ ನ್ಯಾಯ ಸಿಕ್ಕಿರಲಿಲ್ಲ. ಹೀಗಾಗಿ ಪ್ರಾಣ ಭಯದಿಂದ ಬೀದಿಯಲ್ಲೇ ವಾಸವಾಗಿದ್ದರು. ಆದರೆ ಇವರ ಸಂಕಷ್ಟಕ್ಕೆ ಮರುಗಿದ ಪಬ್ಲಿಕ್ ಟಿವಿ, ಬೆಳಕು ಕಾರ್ಯಕ್ರಮದಡಿ ನ್ಯಾಯ ದೊರಕಿಸಿದೆ. ನೆಮ್ಮದಿಯಾಗಿ ಮನೆಯಲ್ಲಿ ವಾಸಿಸಲು ಅವಕಾಶ ಕಲ್ಪಿಸಿದೆ. ಹೀಗಾಗಿ ವೃದ್ಧ ದಂಪತಿ ಪಬ್ಲಿಕ್ ಟಿವಿ ಹಾಗೂ ಚಿತ್ರದುರ್ಗ ಎಸ್‌ಪಿ ಪರಶುರಾಮ್ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಮಳೆ ಅಬ್ಬರ – ಡ್ಯೂಟಿ ಮುಗಿಸಿ ಮನೆ ತೆರಳುವವರಿಗೆ ಕಿರಿಕಿರಿ

ಒಟ್ಟಾರೆ ಮಗ-ಸೊಸೆಯ ಜಗಳ ಇತ್ಯರ್ಥವಾಗದೇ ವಿವಾಹ ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ ಏನೂ ತಪ್ಪು ಮಾಡದ ವೃದ್ಧ ದಂಪತಿ ಬೀದಿಗೆ ಬಿದ್ದಿದ್ದರು. ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದಡಿ ಈ ವಿಚಾರವನ್ನು ಎಸ್‌ಪಿ ಪರಶುರಾಮ್ ಗಮನಕ್ಕೆ ತಂದು, ವೃದ್ಧರ ಬದುಕಿಗೆ ಬೆಳಕು ತರಿಸಿರುವುದು ಕೋಟೆನಾಡಿನ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *