ಕೌಶಲ್ಯ ರಥಕ್ಕೆ ಬೊಮ್ಮಾಯಿ ಚಾಲನೆ – 2.5 ಲಕ್ಷ ಯುವ ಜನತೆಗೆ ತರಬೇತಿ ನೀಡುವ ಗುರಿ

Public TV
3 Min Read

ಕಲಬುರಗಿ: ರಾಜ್ಯದ ಗ್ರಾಮೀಣ ಭಾಗದ ಪ್ರದೇಶದಲ್ಲಿ ವಾಸಿಸುತ್ತಿರುವ ಯುವಜನತೆಗೆ ಕೌಶಲ್ಯ ತರಬೇತಿಯನ್ನು ನೀಡಲು ಸಿದ್ಧಗೊಂಡಿರುವ ಸುಸಜ್ಜಿತ ಕೌಶಲ್ಯ ರಥಗಳಿಗೆ ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ನಾಲ್ಕು ತರಬೇತಿ ನೀಡುವ ಬಸ್ಸುಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಸಕ್ತ ವರ್ಷ 2.5 ಲಕ್ಷ ಯುವ ಜನತೆಗೆ ಕೌಶಲ್ಯ ತರಬೇತಿ ನೀಡುವ ಗುರಿ ಹೊಂದಲಾಗಿದೆ. ದೇಶದಲ್ಲಿರುವ ಒಟ್ಟಾರೆ ಜನಸಂಖ್ಯೆಯಲ್ಲಿ ಯುವ ಜನತೆಯ ಪ್ರಮಾಣ ಶೇ.46 ರಷ್ಟಿದೆ. ಹೀಗಾಗಿ ಇವರಿಗೆ ಉತ್ತಮ ಶಿಕ್ಷಣ ಮತ್ತು ಕೌಶಲ್ಯ ನೀಡಿ ಉದ್ಯೋಗ ಒದಗಿಸುವುದು ಸರ್ಕಾರದ ಕರ್ತವ್ಯ. ಕೇಂದ್ರ ಸರ್ಕಾರವು ಪಂಡಿತ್ ದೀನ್ ದಯಾಳ್ ಯೋಜನೆಯಡಿ ಕೌಶಲ್ಯ ತರಬೇತಿ ನೀಡುತ್ತಿದೆ. ಅದೇ ರೀತಿ ರಾಜ್ಯ ಸರ್ಕಾರ ಕೌಶಲ್ಯ ಕರ್ನಾಟಕ ಯೋಜನೆಯಡಿ ಯುವಕ-ಯುವತಿಯರಿಗೆ ಸೂಕ್ತ ತರಬೇತಿ ನೀಡಿ ಸ್ವಾವಲಂಬಿಯನ್ನಾಗಿಸುವ ಪ್ರಯತ್ನ ಮುಂದುವರೆದಿದೆ ಎಂದರು.  ಇದನ್ನೂ ಓದಿ: ಪ್ರಧಾನಿ ಭೇಟಿಗೂ ಮುನ್ನ ಜಮ್ಮುವಿನಲ್ಲಿ ಎನ್‌ಕೌಂಟರ್ – ಇಬ್ಬರು ಉಗ್ರರ ಹತ್ಯೆ

ಕೌಶಲ್ಯ ರಥಗಳು ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಸಂಚರಿಸಿ ಸ್ಥಳದಲ್ಲಿಯೇ ಉಚಿತವಾಗಿ ಎಲೆಕ್ಟ್ರಿಕಲ್ ಟೆಕ್ನಿಷಿಯನ್ ಮತ್ತು ಬ್ಯೂಟಿ ಥೆರಾಪಿಸ್ಟ್ ಕುರಿತು ಯುವಕ-ಯುವತಿಯರಿಗೆ ಒಂದು ತಿಂಗಳ ಕಾಲ ತರಬೇತಿ ನೀಡಿ ಸರ್ಟಿಫಿಕೇಟ್ ನೀಡಲಾಗುತ್ತಿದೆ. ಇದರಿಂದ ಅವರಿಗೆ ಸ್ವಯಂ ಉದ್ಯೋಗಕ್ಕೆ ಅನುಕೂಲವಾಗಲಿದೆ. ತರಬೇತಿ ಪಡೆದವರನ್ನು ಮಿಕ್ಸಿ, ಗೃಹ ಬಳಕೆ ಮಿಕ್ಸಿ, ಮೋಟಾರ್ ವೈಂಡಿಂಗ್ ಹೀಗೆ ಸ್ಥಳೀಯವಾಗಿ ಕಂಪನಿಗಳೊಂದಿಗೆ ಜೋಡಿಸಿ ಉದ್ಯೋಗ ಒದಗಿಸುವ ಹ್ಯಾಂಡ್ ಹೋಲ್ಡಿಂಗ್ ಜವಾಬ್ದಾರಿ ಸಹ ಕೌಶಲ್ಯ ಅಭಿವೃದ್ಧಿ ನಿಗಮ ಮಾಡಲಿದೆ ಎಂದು ತಿಳಿಸಿದರು.

ಮುಂದಿನ ದಿನದಲ್ಲಿ ಗ್ರಾಮೀಣ ಭಾಗದಲ್ಲಿ ಟ್ರಾನ್ಸ್ ಫಾರ್ಮರ್ (ಟಿ.ಸಿ) ಸಹ ಸ್ಥಳದಲ್ಲಿಯೇ ಯುವಕರು ದುರಸ್ತಿ ಮಾಡುವಂತಾಗಲು ಅಗತ್ಯ ಕೌಶಲ್ಯ ತರಬೇತಿ ನೀಡಬೇಕು ಎಂದು ಸ್ಥಳದಲ್ಲಿದ್ದ ನಿಗಮದ ಅಧಿಕಾರಿಗಳಿಗೆ ಮುಖ್ಯಮಂತ್ರಿ ನಿರ್ದೇಶನ ನೀಡಿದರು. ಇದರಿಂದ ರೈತಾಪಿ ವರ್ಗದ ಜನರಿಗೆ ತುಂಬಾ ಅನುಕೂಲವಾಗಲಿದೆ ಎಂದರು. ಇದನ್ನೂ ಓದಿ: ಎಲೆಕ್ಟ್ರಿಕ್ ವಾಹನಗಳ ಕಂಪನಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟ ನಿತಿನ್ ಗಡ್ಕರಿ

ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚಿನ ಗುರಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಯುವಕ-ಯುವತಿಯರಿಗೆ ತರಬೇತಿ ನೀಡಲು ಗುರಿ ಹೆಚ್ಚಿಸಲಾಗುವುದೆಂದು ಇದೇ ಸಂದರ್ಭದಲ್ಲಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಉನ್ನತ ಶಿಕ್ಷಣ, ಐ.ಟಿ-ಬಿ.ಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಅವರು ಮಾತನಾಡಿ, ಕಳೆದ ಅರ್ಥಿಕ ವರ್ಷದಲ್ಲಿ ಕೌಶಲ್ಯ ತರಬೇತಿ ನೀಡಲು 75 ಸಾವಿರ ಗುರಿ ನೀಡಲಾಗಿತ್ತು. 2022-23ನೇ ಸಾಲಿಗೆ 2.5 ಲಕ್ಷ ಜನರಿಗೆ ಕೌಶಲ್ಯತೆ ನೀಡುವ ಗುರಿ ಹೊಂದಲಾಗಿದೆ. ಶೇ.75 ರಷ್ಟು ಯುವ ಸಮುದಾಯ ಕೌಶಲ್ಯದಿಂದ ವಿಮುಖರಾಗಿದ್ದು, ಅವರೆಲ್ಲರಿಗೂ ಶಿಕ್ಷಣ, ಕೌಶಲ್ಯ ಹಾಗೂ ಜೀವನೋಪಾಯದ ತರಬೇತಿ ನೀಡುವ ಸಂಕಲ್ಪ ಮಾಡಿದ್ದೇವೆ. ಸ್ವ-ಸಹಾಯ ಸಂಘಗಳಿಗೆ 500 ಕೋಟಿ ರೂ. ನೀಡಲಾಗಿದೆ. ಇದಲ್ಲದೆ ಕೆ.ಜಿ.ಟಿ.ಟಿ.ಐ, ಜಿ.ಟಿ.ಟಿ.ಸಿ., ಐ.ಟಿ.ಐ, ಪಾಲಿಟೆಕ್ನಿಕ್ ಮೂಲಕವು ಸಹ ರಾಜ್ಯದಲ್ಲಿ ಲಕ್ಷಾಂತರ ಯುವಜನತೆಗೆ ಕೌಶಲ್ಯ ತರಬೇತಿ ನೀಡುತ್ತಿದ್ದೇವೆ ಎಂದರು. ಇದನ್ನೂ ಓದಿ: ದೆಹಲಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ಬೂಸ್ಟರ್‌ ಡೋಸ್‌ ಉಚಿತ

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಮುರುಗೇಶ ನಿರಾಣಿ, ಕೆ.ಕೆ.ಅರ್.ಡಿ.ಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ್, ಕೆ.ಕೆ.ಅರ್.ಟಿ.ಸಿ ಅಧ್ಯಕ್ಷ ರಾಜ್‍ಕುಮಾರ್ ಪಾಟೀಲ್ ತೇಲ್ಕೂರ್, ಕೆ.ಯು.ಡಬ್ಲ್ಯೂ.ಎಸ್.ಡಿ.ಬಿ. ಅಧ್ಯಕ್ಷ ರಾಜು ಗೌಡ, ಸಂಸದ ಡಾ.ಉಮೇಶ್ ಜಾಧವ್, ಶಾಸಕ ಬಸವರಾಜ್ ಮತ್ತಿಮೂಡ, ಮಾಜಿ ಸಚಿವ ಲಕ್ಷ್ಮಣ ಸವದಿ, ಪ್ರಾದೇಶಿಕ ಆಯುಕ್ತ ಡಾ.ಎನ್.ವಿ.ಪ್ರಸಾದ್, ಡಿ.ಸಿ. ಯಶವಂತ್ ವಿ. ಗುರುಕರ್, ನಗರ ಪೆÇಲೀಸ್ ಆಯುಕ್ತ ಡಾ.ವೈ.ಎಸ್.ರವಿಕುನಾರ, ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ದಿಲೀಷ್ ಸಾಸಿ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಡಿ. ಗೌಡ, ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ನಾಗಾಬಾಯಿ ಡಿ. ದೊಡ್ಡಮನಿ, ಸಹಾಯಕ ನಿರ್ದೇಶಕ ಸುದರ್ಶನ್, ವ್ಯವಸ್ಥಾಪಕ ಸಂತೋಷ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ತರಬೇತಿ ವಿವರ: ಎಲೆಕ್ಟ್ರಿಕಲ್ ಟೆಕ್ನಿಷಿಯನ್ ಮತ್ತು ಬ್ಯೂಟಿ ಥೆರಾಪಿಸ್ಟ್ ಉಚಿತ ತರಬೇತಿಯ ಅವಧಿ ತಲಾ 208 ಗಂಟೆಯದ್ದಾಗಿದೆ. ಪ್ರತಿ ದಿನ 8 ಗಂಟೆ ತರಬೇತಿ ನೀಡಲಾಗುತ್ತದೆ. ಪ್ರತಿ ಬ್ಯಾಚಿನಲ್ಲಿ 15 ಜನರಿಗೆ ಅವಕಾಶವಿದ್ದು, ಒಂದು ತಿಂಗಳಿನಲ್ಲಿ 15 ಜನರಿಗೆ ತರಬೇತಿಗೆ ನೀಡಲಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *