ಹಿಜಬ್‌ ಹೆಸರಲ್ಲಿ ಧ್ರುವೀಕರಣ ಮಾಡುವ ಬಿಜೆಪಿ ಬಲೆಗೆ ಬೀಳಬೇಡಿ: ರಾಹುಲ್ ಗಾಂಧಿ

By
2 Min Read

ನವದೆಹಲಿ: ಹಿಜಬ್ ಮೂಲಕ ರಾಜ್ಯವನ್ನು ಧ್ರುವೀಕರಣಗೊಳಿಸುವ ಯೋಜನೆಯಲ್ಲಿ ಬಿಜೆಪಿಯ ಬಲೆಗೆ ಬೀಳಬೇಡಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕರ್ನಾಟಕದ ಪಕ್ಷದ ನಾಯಕರಿಗೆ ಹೇಳಿದ್ದಾರೆ.

ವಿರೋಧ ಪಕ್ಷದ ನಾಯಕರು, ಪಕ್ಷದ ರಾಜ್ಯ ಘಟಕದ ಮುಖ್ಯಸ್ಥರು ಮತ್ತು ಇತರ ಪದಾಧಿಕಾರಿಗಳು ಸೇರಿದಂತೆ ಕರ್ನಾಟಕದ ಪಕ್ಷದ ಹಿರಿಯ ನಾಯಕರೊಂದಿಗಿನ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಆಡಳಿತದ ಕರ್ನಾಟಕದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ. ಹಿಜಬ್ ಮೂಲಕ ರಾಜ್ಯವನ್ನು ಧ್ರುವೀಕರಣಗೊಳಿಸುವ ಯೋಜನೆಯಲ್ಲಿ ಬಿಜೆಪಿಯ ಬಲೆಗೆ ಬೀಳಬೇಡಿ ಎಂದು ಕರ್ನಾಟಕದ ಪಕ್ಷದ ನಾಯಕರಿಗೆ ಹೇಳಿದ್ದಾರೆ.

ದೆಹಲಿಯಲ್ಲಿ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ, ಉದ್ಯೋಗದ ಕೊರತೆ, ಬೆಲೆ ಏರಿಕೆ ಮತ್ತು ಸ್ಥಳೀಯ ಸಮಸ್ಯೆಗಳ ಹೊರತಾಗಿ ಕ್ರಿಪ್ಟೊ ಕರೆನ್ಸಿ ಹಗರಣ, ಸರ್ಕಾರಿ ಗುತ್ತಿಗೆಗಳಲ್ಲಿ ಶೇ.40 ರಷ್ಟು ಕಮಿಷನ್‌ ಭ್ರಷ್ಟಾಚಾರವನ್ನು ಹೈಲೈಟ್ ಮಾಡಲು ನಾಯಕರು ಯೋಜಿಸಿದ್ದಾರೆ. ಬೊಮ್ಮಾಯಿ ಸರ್ಕಾರ ವಿಫಲವಾಗಿದೆ. ರಾಜ್ಯದ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸಲು ಕಾಂಗ್ರೆಸ್ ಸರಣಿ ಸಾರ್ವಜನಿಕ ಆಂದೋಲನಗಳನ್ನು ನಡೆಸಲು ಚಿಂತಿಸಿದೆ. ಈಗ ವಿಧಾನಸಭಾ ಚುನಾವಣೆಗೆ ಕೇವಲ 14 ತಿಂಗಳುಗಳು ಬಾಕಿಯಿದ್ದು, ಚುನಾವಣೆಯ ತಯಾರಿಗಾಗಿ ಆ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ಸಿಲುಕಿದ್ದಾರೆ 10 ಮಂದಿ ಕರ್ನಾಟಕ ವಿದ್ಯಾರ್ಥಿಗಳು!

ಜನರನ್ನು ಧ್ರುವೀಕರಿಸುವಲ್ಲಿ ಬಿಜೆಪಿ ಯಶಸ್ವಿಯಾಗುತ್ತಿದೆ. ವಿಶೇಷವಾಗಿ ಇತ್ತೀಚಿನ ಹಿಜಬ್ ಸಂಬಂಧಿತ ಪ್ರತಿಭಟನೆ, ಹಿಂಸಾಚಾರದ ದೃಷ್ಟಿಯಿಂದ ಈ ವಿಷಯದ ಬಗ್ಗೆ ಪಕ್ಷಕ್ಕೆ ಸ್ಪಷ್ಟತೆ ಬೇಕು ಎಂದು ಸಭೆಯಲ್ಲಿ ಹೇಳಲಾಗಿದೆ. ಹಿಜಬ್ ವಿಷಯವು ನ್ಯಾಯಾಲಯದಲ್ಲಿರುವ ಕಾರಣ ಪಕ್ಷ ಅಧಿಕೃತವಾಗಿ ಏನೂ ಮಾತನಾಡಿಲ್ಲ ಎಂದಿದ್ದಾರೆ. ಇದನ್ನೂ ಓದಿ: ರಷ್ಯಾ ದಾಳಿಯಿಂದ ರಕ್ಷಿಸಿಕೊಳ್ಳಲು ಭೂಗತ ಹ್ಯಾಕರ್‌ಗೆ ಉಕ್ರೇನ್ ಕರೆ!

ಈ ಹಿಂದೆ ಹಿಜಬ್‌ ವಿವಾದದ ಕುರಿತು ಮಾತನಾಡಿದ ಗಾಂಧಿ, ಶಿಕ್ಷಣಕ್ಕೆ ಅಡ್ಡಿ ಪಡಿಸುವ ಮೂಲಕ ದೇಶವು ತನ್ನ ಹೆಣ್ಣುಮಕ್ಕಳ ಭವಿಷ್ಯವನ್ನು ಕಸಿದುಕೊಳ್ಳುತ್ತಿದೆ. ಸರಸ್ವತಿಯು ಎಲ್ಲರಿಗೂ ಜ್ಞಾನವನ್ನು ನೀಡುತ್ತಾಳೆ. ಅವಳು ಭಿನ್ನಾಭಿಪ್ರಾಯ ಹೊಂದಿಲ್ಲ ಎಂದಿದ್ದರು.

Share This Article
Leave a Comment

Leave a Reply

Your email address will not be published. Required fields are marked *