ಕೋಲಾರ: ಗ್ರಾಮದ ಮುಖಂಡ ಊರಿನಲ್ಲಿ ಯಾವುದೇ ಸಮಸ್ಯೆಗಳಾದರೂ ಮುಂದೆ ನಿಂತು ಕೈಲಾದ ಸಹಾಯ ಮಾಡುತ್ತಾರೆ. ಅದೇ ರೀತಿ ಇಲ್ಲೊಬ್ಬ ಮುಖಂಡ ಯಾವುದೇ ಸಮಸ್ಯೆ ಬಂದ್ರೂ ಮುಂದೆ ನಿಂತು ರಾಜಿ ಪಂಚಾಯ್ತಿ ಮಾಡಿಸುತ್ತಿದ್ದರು. ಆದರೆ ಅವರ ಒಳ್ಳೆಯ ಕೆಲಸಗಳೇ ಅವನಿಗೆ ಮುಳುವಾಗಿ ಬಿಟ್ಟಿತ್ತು. ಯಾರದೋ ಸಮಸ್ಯೆ ಬಗೆಹರಿಸಲು ಹೋಗಿ ತಾನೇ ಬಲಿಯಾಗಿದ್ದಾರೆ.
ಶವದ ಮುಂದೆ ಗೋಳಿಡುತ್ತಿರುವ ಸಂಬಂಧಿಕರು. ಸಾವಿನ ಮನೆಯ ಸುತ್ತಲೂ ಸೇರಿರುವ ಸಾವಿರಾರು ಜನ, ಪೊಲೀಸರಿಂದ ಬಿಗಿ ಬಂದೋಬಸ್ತ್. ಮೃತರ ಅಂತಿಮ ದರ್ಶನಕ್ಕೆ ಬಂದಿರುವ ಮುಖಂಡರುಗಳು ಇದೆಲ್ಲಾ ದೃಶ್ಯಗಳು ಕಂಡುಬಂದಿದ್ದು, ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕು ತಮ್ಮೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಇದನ್ನೂ ಓದಿ: ಈ ಅಪರೂಪದ ಕೃತಿಯ ದರ್ಶನ ಪಡೆದರೆ ಮಾನವನ ಎಲ್ಲ ಸಂಕಷ್ಟ ದೂರ!
ಏನಿದು ಘಟನೆ!
ಕಳೆದ ರಾತ್ರಿ ಗ್ರಾಮದ ಬಳಿ ಮುನಿಯಪ್ಪ ಹಾಗೂ ಬೋಸ್ ಕೃಷ್ಣಪ್ಪ ಅವರ ನಡುವೆ ಇದ್ದ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ರಾಜಿ ಪಂಚಾಯ್ತಿನಡೆಯುತ್ತಿತ್ತು. ಈ ವೇಳೆ ಗ್ರಾಮದ ಮಾಜಿ ಗ್ರಾಮ ಪಂಚಾಯ್ತಿ ಸದಸ್ಯ, ಬಿಜೆಪಿ ಮುಖಂಡ ದೊಡ್ಡಮನೆ ಕೃಷ್ಣಪ್ಪ ಆಲಿಯಾಸ್ ಕೃಷ್ಣೇಗೌಡ ಸ್ಥಳಕ್ಕೆ ಹೋಗಿ ಏನಾಗ್ತಿದೆ ಎಂದು ನೋಡಲು ಹೋಗಿದ್ರು.
ಈ ವೇಳೆ ಅಲ್ಲೇ ಸ್ಕಾರ್ಪಿಯೋ ಕಾರಿನಲ್ಲಿ ಕುಳಿತಿದ್ದ ಅದೇ ಗ್ರಾಮದ ವೆಂಕಟೇಶ್ ದೊಡ್ಡಮನೆ ಕೃಷ್ಣಪ್ಪ ಅವರಿಗೆ ಚಾಕುವಿನಿಂದ ಇರಿದಿದ್ದಾನೆ. ಅಲ್ಲಿದ್ದ ಜನರು ಕತ್ತಲಲ್ಲಿ ಏನಾಗ್ತಿದೆ ಎಂದು ನೋಡುವಷ್ಟರಲ್ಲಿ ಕೃಷ್ಣಪ್ಪ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಈ ವೇಳೆ ಅಲ್ಲಿದ್ದ ಕೆಲವರು ಕೊಲೆ ಮಾಡಿದ ವೆಂಕಟೇಶ್ ಮೇಲೆ ಹಲ್ಲೆ ಮಾಡಿದ್ದಾರೆ. ಕೂಡಲೇ ಕೃಷ್ಣಪ್ಪ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲಿಯೇ ಕೃಷ್ಣಪ್ಪ ಸಾವನ್ನಪ್ಪಿದ್ದಾರೆ.
ಯಾವಾಗ ದೊಡ್ಡಮನೆ ಕೃಷ್ಣಪ್ಪ ಮೃತಪಟ್ಟಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ಆರೋಪಿಗಳಾದ ವೆಂಕಟೇಶ್, ಪಾಣಿ, ಮುನಿಯಪ್ಪ ಹಾಗೂ ಬೋಸ್ ಕೃಷ್ಣಪ್ಪ ತಲೆ ಮರೆಸಿಕೊಂಡಿದ್ದರು. ಬಿಜೆಪಿ ಮುಖಂಡ ಹಾಗೂ ಗ್ರಾಮದ ಸುತ್ತಮುತ್ತ ಒಳ್ಳೆಯ ಹೆಸರು ಮಾಡಿದ್ದ ದೊಡ್ಡಮನೆ ಕೃಷ್ಣಪ್ಪ ಸಾವಿನ ಸುದ್ದಿ ಕೇಳಿ ಕೋಲಾರ ಸಂಸದ ಎಸ್.ಮುನಿಸ್ವಾಮಿ ಸೇರಿದಂತೆ ಬಿಜೆಪಿ ಮುಖಂಡರು ಗ್ರಾಮಕ್ಕೆ ಭೇಟಿ ನೀಡಿ ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಹಲವು ವರ್ಷಗಳ ಜಿದ್ದು!
ಊರಿನಲ್ಲಿ ನಡೆಯುತ್ತಿದ್ದ ರಾಜಿ ಪಂಚಾಯ್ತಿಯಲ್ಲಿ ಭಾಗವಹಿಸುತ್ತಿದ್ದ ಕೃಷ್ಣಪ್ಪ ಅವರಿಗೂ ಕೊಲೆ ಮಾಡಿದ ವೆಂಕಟೇಶ್ನಿಗೂ ಈ ಹಿಂದೆಯೇ ವೈಮನಸ್ಸಿತ್ತು. ಕಳೆದ ಒಂದು ವರ್ಷದ ಹಿಂದೆ ಗ್ರಾಮದ ವೀಣಾ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ ಆರೋಪದಲ್ಲಿ ವೆಂಕಟೇಶ್ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಈ ವೇಳೆ ಕೃಷ್ಣಪ್ಪ ನೊಂದ ಮಹಿಳೆ ವೀಣಾ ಪರ ನಿಂತಿದ್ದರು. ಈ ಪ್ರಕರಣದಲ್ಲಿ ವೆಂಕಟೇಶ್ ಜೈಲಿಗೆ ಹೋಗಿ ಬಂದಿದ್ದರು.
ಹಗೆ ಸಾಧಿಸುತ್ತಿದ್ದ!
ಇದಕ್ಕೆ ಸಂಬಂಧಿಸಿದಂತೆ ಹಳೇ ದ್ವೇಷ ವೆಂಕಟೇಶ್ನಲ್ಲಿತ್ತು. ಅದನ್ನೇ ಹಗೆ ಸಾಧಿಸುತ್ತಿದ್ದ ವೆಂಕಟೇಶ್, ಕಳೆದ ರಾತ್ರಿ ಅಚಾನಕ್ಕಾಗಿ ಸ್ಥಳಕ್ಕೆ ಬಂದ ದೊಡ್ಮನೆ ಕೃಷ್ಣಪ್ಪನ ಮೇಲೆ ತನ್ನ ಸೇಡು ತೀರಿಸಿಕೊಳ್ಳಲು ಸ್ಕಾರ್ಪಿಯೋ ಕಾರ್ನಲ್ಲಿದ್ದ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣದ ಮೊದಲ ಆರೋಪಿ ವೆಂಕಟೇಶ್ ಹಾಗೂ ಪಾಣಿಯನ್ನು ಬಂಧಿಸಿದ್ದಾರೆ. ಉಳಿದ ಮುನಿಯಪ್ಪ ಮತ್ತು ಕೃಷ್ಣಪ್ಪನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಉಕ್ರೇನ್ನ ಸಮುದ್ರ, ಭೂ-ಆಧಾರಿತ ಪ್ರದೇಶದ ಮೇಲೆ ರಷ್ಯಾ ದಾಳಿ!
ಒಟ್ಟಿನಲ್ಲಿ ದೊಡ್ಡಮನೆ ಕೃಷ್ಣಪ್ಪ ಹೆಸರಿಗೆ ತಕ್ಕಂತೆ ಊರಿನವರ ಕಷ್ಟಕ್ಕೆ ಸ್ಪಂದಿಸುವ ಮನಸ್ಸುಳ್ಳವರಾಗಿದ್ದರು. ಅದಕ್ಕೆ ತಕ್ಕಂತೆ ಜನರ ಕಷ್ಟ ಸುಖ ಕೇಳುತ್ತಿದ್ರು. ಆದರೆ ಊರ ಮುಖಂಡನಾಗಿ ಊರಿನವರ ಸಮಸ್ಯೆ ಕೇಳೊದಕ್ಕೆ ಹೋಗಿ ತನ್ನ ಪ್ರಾಣವನ್ನೇ ಬಲಿ ಕೊಡುವ ಸ್ಥಿತಿ ಬಂದಿದ್ದು ಮಾತ್ರ ವಿಪರ್ಯಾಸ.