ವಿಧಾನಸಭೆಯಲ್ಲಿ ಹಾಲಿ ಸ್ಪೀಕರ್‌ಗೆ ಮಾಜಿ ಸ್ಪೀಕರ್ ಸವಾಲ್ – ಸಸ್ಪೆಂಡ್ ಮಾಡ್ಬಿಡಿ ಎಂದ ರೇವಣ್ಣ

Public TV
2 Min Read

ಬೆಂಗಳೂರು: ವಿಧಾನಸಭೆಯಲ್ಲಿ ಇಂದು ಹಾಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸವಾಲು ಹಾಕಿದ ಘಟನೆ ನಡೆಯಿತು. ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ಧರಣಿಗೆ ಸ್ಪೀಕರ್ ಕೂಡ ಗರಂ ಆಗಿದ್ದರು.

ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಇವತ್ತು ಕೂಡ ಧರಣಿ ಮುಂದುವರಿಸಿ ಕಲಾಪಕ್ಕೆ ಅಡ್ಡಿ ಪಡಿಸಿತು. ಆ ವೇಳೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು. ಚರ್ಚೆಯಲ್ಲಿ ಭಾಗವಹಿಸಿ, ಧರಣಿ ಕೈಬಿಡಿ. ಕಲಾಪಕ್ಕೆ ಅಡ್ಡಿ ಮಾಡುವುದು ಸರಿಯಾದ ಕ್ರಮ ಅಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಶೋಭೆ ಅಲ್ಲ. ಕಾಂಗ್ರೆಸ್ ಪಕ್ಷಕ್ಕೂ ಇದು ಶೋಭೆ ಅಲ್ಲ. ಹೊರಗಡೆ ಏನಾದರೂ ಮಾಡಿ, ಕಲಾಪ ನಡೆಸಲು ಅವಕಾಶ ಕೊಡಿ ಅಂತಾ ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್ ರಾಜ್ಯದ ಮಕ್ಕಳಿಗೆ ದ್ರೋಹ ಮಾಡ್ತಿದೆ, ಇದು ರಾಜದ್ರೋಹ: ಬೊಮ್ಮಾಯಿ ಕಿಡಿ

ನಮ್ಮ ಮೇಲೆ ಏಕೆ ಗೂಬೆ ಕೂರಿಸ್ತೀರಾ?: ಈ ನಡುವೆ ಸದನದ ಬಾವಿಯಿಂದ ತಮ್ಮ ಆಸನಕ್ಕೆ ಬಂದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಸ್ಪೀಕರ್ ಕಾಗೇರಿಗೆ ಸವಾಲು ಹಾಕಿದರು. ಸಸ್ಪೆಂಡ್ ಮಾಡಲು ನಿಮಗೆ ಅವಕಾಶ ಇದೆ. ಸಸ್ಪೆಂಡ್ ಮಾಡಿ. ಸುಮ್ಮನೇ ನಮ್ಮ ಮೇಲೆ ಏಕೆ ಗೂಬೆ ಕೂರಿಸುತ್ತೀರಾ ಅಂತಾ ಸ್ಪೀಕರ್‌ಗೆ ತಿರುಗೇಟು ಕೊಟ್ಟರು. ಇದೇ ವೇಳೆ ಮಧ್ಯಪ್ರವೇಶ ಮಾಡಿದ ಶಾಸಕ ಹೆಚ್.ಡಿ.ರೇವಣ್ಣ, ಅವರೇ ಹೇಳ್ತಿದಾರಲ್ಲ, ಸಸ್ಪೆಂಡ್ ಮಾಡಿ. ಕಲಾಪ ನಡೆಸಲು ಕಾಂಗ್ರೆಸ್ ಅವರು ಅವಕಾಶ ಕೊಡಲಿ, ಇಲ್ಲದಿದ್ದರೆ ಸಸ್ಪೆಂಡ್ ಮಾಡಿ ಅಂತಾ ಒತ್ತಾಯಿಸಿದರು.

ರಾತ್ರಿ ಇಲ್ಲೇ ಮಲಗೋಣ ಎಂದ ಸಿದ್ದರಾಮಯ್ಯ: ಆಗ ಮಧ್ಯಪ್ರವೇಶ ಮಾಡಿದ ಸ್ಪೀಕರ್, ರಮೇಶ್ ಕುಮಾರ್‌ಗೆ ಟಾಂಗ್ ಕೊಟ್ಟರು. ಸಸ್ಪೆಂಡ್ ಮಾಡಿ ಅಂತಾ ರಮೇಶ್ ಕುಮಾರ್ ಸಲಹೆ ಕೊಟ್ಟಿದ್ದಾರೆ. ಸಸ್ಪೆಂಡ್ ಮಾಡಿ ಅಂತ ರಮೇಶ್ ಕುಮಾರ್ ಬರೆದು ಕೊಡಲಿ. ಸಿದ್ದರಾಮಯ್ಯ ಹಿರಿಯರಿದ್ದಾರೆ, ಅನುಭವಿಗಳಿದ್ದಾರೆ. ಅಂತಹವರನ್ನು ಸಸ್ಪೆಂಡ್ ಮಾಡಿ ಅಂತ ರಮೇಶ್ ಕುಮಾರ್ ಸಲಹೆ ಕೊಡ್ತಿದ್ದಾರೆ ಅಂತಾ ತಿರುಗೇಟು ನೀಡಿದರು. ಇದನ್ನೂ ಓದಿ: ನನಗೆ ವಯಸ್ಸಾಗಿದ್ರೂ ಹಾಗೆ ಕಾಣಲ್ಲ: ಸಿದ್ದರಾಮಯ್ಯ ಹಾಸ್ಯ ಚಟಾಕಿ

ಬಳಿಕವೂ ಗದ್ದಲ ಮುಂದುವರಿದಾಗ ವಿಧಾನಸಭೆ ಕಲಾಪವನ್ನು ಸೋಮವಾರ ಬೆಳಗ್ಗೆ 11ಕ್ಕೆ ಮುಂದೂಡಲಾಯಿತು. ಕಾಂಗ್ರೆಸ್ ನಾಯಕರು ಅಹೋರಾತ್ರಿ ಧರಣಿಯನ್ನು ಮುಂದುವರಿಸಿದ್ದಾರೆ. ಸೋಮವಾರದವರೆಗೂ ಧರಣಿ ಮಾಡೋಣ, ಯಾರೂ ಹೋಗಬೇಡಿ, ಇಲ್ಲೇ ಕೂರಿ. ರಾತ್ರಿ ವಿಧಾನಸಭೆಯಲ್ಲಿ ಮಲಗೋಣ ಎಂದು ಸಿದ್ದರಾಮಯ್ಯ ಕಾಂಗ್ರೆಸ್ ಸದಸ್ಯರಿಗೆ ಖಡಕ್ ಸೂಚನೆ ಕೊಟ್ಟಿದ್ದು, ಧರಣಿ ಮುಂದುವರಿದಿದೆ.

Share This Article
Leave a Comment

Leave a Reply

Your email address will not be published. Required fields are marked *