ಶೂಟಿಂಗ್ ಮುಗಿಸಿ ಅಚ್ಚರಿ ಮೂಡಿಸಿದ ಗುರುಪ್ರಸಾದ್

Public TV
1 Min Read

ನಿರ್ದೇಶಕ ಮಠದ ಗುರುಪ್ರಸಾದ್ ಸಿನಿಮಾ ಕೈಗೆತ್ತಿಕೊಂಡರೇ ಅದು ಯಾವತ್ತು ಶುರುವಾಗತ್ತೋ, ಯಾವತ್ತು ಮುಗಿಯತ್ತೋ ಅವರಿಗೇ ಗೊತ್ತಿರುವುದಿಲ್ಲ. ಆದರೆ, ಈ ಬಾರಿ ಹಾಗಾಗಿಲ್ಲ. ಜಗ್ಗೇಶ್ ಜತೆಗಿನ ‘ರಂಗನಾಯಕ’ ಚಿತ್ರವನ್ನು ಅತೀ ವೇಗದಲ್ಲಿ ಚಿತ್ರೀಕರಣ ಮುಗಿಸಿ ಅಚ್ಚರಿ ಮೂಡಿಸಿದ್ದಾರೆ ಗುರು.
ಈಗಾಗಲೇ ಇವರ ನಿರ್ದೇಶನದಲ್ಲಿ ಮೂಡಿ ಬಂದ ಮಠ, ಎದ್ದೇಳು ಮಂಜುನಾಥ, ಡೈರೆಕ್ಟರ್ ಸ್ಪೆಷಲ್, ಎರಡನೇ ಸಲ ಅವಧಿಗೂ ಮೀರಿ ತಯಾರಾಗಿದ್ದವು. ಇವುಗಳ ನಂತರ ಸೆಟ್ಟೇರಿದ ‘ಅದೇಮಾ’ ನಾಲ್ಕು ವರ್ಷಗಳಾದರೂ ಇನ್ನೂ ಮುಗಿದಿಲ್ಲ. ಈ ನಡುವೆ ಮುಹೂರ್ತ ಕಂಡ ‘ರಂಗನಾಯಕ’ ಚಿತ್ರ ಕೂಡ ಬೇಗ ಬರುವುದು ಅನುಮಾನ ಎನ್ನಲಾಗಿತ್ತು.

 

2020 ಡಿಸೆಂಬರ್ ಕೊನೆಯ ವಾರದಲ್ಲಿ ಈ ಚಿತ್ರಕ್ಕೆ ಮುಹೂರ್ತವಾಗಿ, ನಂತರ ಕೊರೋನಾ ಕಾರಣದಿಂದಾಗಿ ತಡವಾಗಿತ್ತು. 2021ರ ಮಧ್ಯದಲ್ಲಿ ಶೂಟಿಂಗ್ ಶುರು ಮಾಡಿದ ಗುರು ಪ್ರಸಾದ್, ಕೆಲವೇ ತಿಂಗಳುಗಳಲ್ಲೇ ಸಂಪೂರ್ಣ ಚಿತ್ರೀಕರಣ ಮುಗಿಸಿದ್ದಾರೆ. ಬೆಂಗಳೂರಿನ ವರವಲಯದಲ್ಲಿ ಈ ಸಿನಿಮಾಗಾಗಿಯೇ ಬೃಹತ್ ಸೆಟ್ ಹಾಕಲಾಗಿತ್ತು. ಬಹುತೇಕ ಶೂಟಿಂಗ್ ಅದೇ ಸೆಟ್ ನಲ್ಲಿ ನಡೆದಿದೆ. ಗುರು ಪ್ರಸಾದ್ ವೃತ್ತಿ ಬದುಕಿನಲ್ಲಿ ಅತೀ ಬೇಗ ತಯಾರಾದ ಸಿನಿಮಾ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ಡಬ್ಬಿಂಗ್, ಹಿನ್ನೆಲೆ ಸಂಗೀತ ಈಗ ಶೂಟಿಂಗ್ ನಂತರದ ಕೆಲಸಗಳು ಸದ್ಯ ನಡೆದದ್ದು, ಆದಷ್ಟು ಬೇಗ ಸಿನಿಮಾವನ್ನು ತೆರೆಗೆ ತರುವ ಯೋಜನೆ ಚಿತ್ರತಂಡದ್ದು.ಇದನ್ನೂ ಓದಿ: ವಿಷ್ಣುವರ್ಧನ್ ಅವರ ಸಿನಿಮಾಗೆ ಬಪ್ಪಿ ಲಹರಿ ಹಾಡು

‘ರಂಗನಾಯಕ’ ಗುರುಪ್ರಸಾದ್ ಮತ್ತು ಜಗ್ಗೇಶ್ ಕಾಂಬಿನೇಷನ್ ನ ಮೂರನೇ ಚಿತ್ರ. ಮಠ ಮತ್ತು ಎದ್ದೇಳು ಮಂಜುನಾಥ ಚಿತ್ರಗಳು ಗೆದ್ದಿವೆ. ನಿರ್ಮಾಪಕರಿಗೂ ಹಣ ತಂದು ಕೊಟ್ಟಿವೆ. ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಿವೆ. ಹೀಗಾಗಿ ಮೂರನೇ ಸಿನಿಮಾದ ಬಗ್ಗೆಯೂ ಸಾಕಷ್ಟು ನಿರೀಕ್ಷೆ ಮೂಡಿದೆ. ಇದನ್ನೂ ಓದಿ: ವಕೀಲ ಜಗದೀಶ್ ಜತೆ ಸೇರಿಕೊಂಡ ಸ್ಯಾಂಡಲ್‌ವುಡ್‌ ನಿರ್ದೇಶಕ ಯಾರು?

ಈ ಹಿಂದಿನ ಎರಡೂ ಸಿನಿಮಾಗಳಲ್ಲಿಯೂ ಗುರುಪ್ರಸಾದ್ ವಿಡಂಬನೆಯನ್ನೇ ಪ್ರಧಾನವಾಗಿಟ್ಟುಕೊಂಡು ಚಿತ್ರಕಥೆ ಬರೆದಿದ್ದರು. ರಂಗನಾಯಕ ಸಿನಿಮಾ ಕೂಡ ಅದೇ ಮಾದರಿಯಲ್ಲಿದೆಯಂತೆ. ಕಲಾವಿದರ ಬದುಕಿನ ಮತ್ತೊಂದು ಮುಖವನ್ನು ತೆರೆದಿಡುವ ಪ್ರಯತ್ನವನ್ನು ಗುರು ಪ್ರಸಾದ್ ಮಾಡಿದ್ದಾರಂತೆ.

Share This Article
Leave a Comment

Leave a Reply

Your email address will not be published. Required fields are marked *