ಕಳ್ಳರ ಗ್ಯಾಂಗ್ ಅರೆಸ್ಟ್ – 21 ಲಕ್ಷ ಮೌಲ್ಯದ ಶ್ರೀಗಂಧ ವಶ

Public TV
2 Min Read

ಚಿಕ್ಕಬಳ್ಳಾಪುರ: ಶ್ರೀಗಂಧ ಬೆಳೆಗಾರರಿಗೆ ಕಂಟಕವಾಗಿದ್ದ ಕಳ್ಳರ ಗುಂಪಿನ ಸದಸ್ಯರನ್ನು ಚಿಂತಾಮಣಿ ಪೊಲೀಸರು ಬಂಧಿಸಿದ್ದು, ಕಳ್ಳರ ಬಳಿಯಿದ್ದ 21 ಲಕ್ಷ ಮೌಲ್ಯದ ಶ್ರೀಗಂಧವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಲಾಭದಾಯಕ ಶ್ರೀಗಂಧದ ಮರಗಳನ್ನು ಬೆಳೆಸಿ ನಾಲ್ಕು ಕಾಸು ನೋಡೋಣ ಎಂದು ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಯ ರೈತರು, ಹಗಲು ರಾತ್ರಿ ಕಷ್ಟಪಟ್ಟು ಶ್ರೀಗಂಧದ ಮರಗಳನ್ನು ಬೆಳೆಸುತ್ತಾರೆ. ಆದರೆ ರಾತ್ರೋರಾತ್ರಿ ಶ್ರೀಗಂಧದ ತೋಟಕ್ಕೆ ನುಗ್ಗುತ್ತಿದ್ದ ಕಳ್ಳರ ಗ್ಯಾಂಗ್, ರೈತರು ಬೆಳೆದಿದ್ದ ಶ್ರೀಗಂಧದ ಮರಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗ್ತಿದ್ರು. ಆದ್ರೆ ಈಗ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಪೊಲೀಸರು ಕಳ್ಳರ ಹಿಂದೆ ಬಿದ್ದು, 7 ಜನರ ಕುಖ್ಯಾತ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಸಕಲ ಸೌಲಭ್ಯಗಳಿರುವ ನವಬೆಂಗಳೂರು ನಿರ್ಮಾಣಕ್ಕೆ ನೀಲನಕ್ಷೆ: ಸಿಎಂ

ದಬರಾಗನಹಳ್ಳಿಯ ನರಸಿಂಹಮೂರ್ತಿ, ಮುನಿಯಪ್ಪ, ಮುನಿರಾಜು, ಪ್ರಸನ್ನ, ಪ್ರದೀಪ್, ಕೃಷ್ಣಮೂರ್ತಿ ಹಾಗೂ ಕಟ್ಟಿಗೇನಹಳ್ಳಿಯ ಮಹಮದ್ ಇಸ್ಮಾಯಿಲ್ ಬಂಧಿತರು. ಕಳೆದ ಡಿಸೆಂಬರ್ 22 ರಂದು ಚಿಂತಾಮಣಿ ತಾಲೂಕು ಚೌಡದೇನಹಳ್ಳಿಯ ರೈತ ರಮೇಶ್ ಅವರ ಶ್ರೀಗಂಧದ ತೋಟಕ್ಕೆ ಖದೀಮರು ನುಗ್ಗಿದ್ದು, ಶ್ರೀಗಂಧದ ಮರಗಳನ್ನ ಕಟಾವು ಮಾಡಿಕೊಂಡು ಹೋಗಿದ್ರು.

ಈ ಸಂಬಂಧ ಚಿಂತಾಮಣಿ ನಗರ ಪೊಲೀಸ್ ಠಾಣೆಗೆ ರಮೇಶ್ ದೂರು ನೀಡಿದ್ದರು. ಪ್ರಕರಣದ ತನಿಖೆಗಿಳಿದ ಪೊಲೀಸರಿಗೆ 03 ಜನವರಿ 2022 ರಂದು ಮಾಡಿಕೆರೆ ಕ್ರಾಸ್ ಬಳಿ ಅನುಮಾನಸ್ಪದವಾಗಿ, ಪೊಲೀಸರನ್ನು ಕಂಡು ಚಕ್ಕೆಗಳನ್ನ ಬಿಸಾಡಿ ಪರಾರಿಯಾಗುತ್ತಿದ್ದ ವ್ಯಕ್ತಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆಸಲಿ ಸತ್ಯ ಬಯಲಾಗಿದೆ.

ಬಂಧಿತ ಪೊಲೀಸರ ಬಳಿ ಶ್ರೀಗಂಧ ಕಳ್ಳತನದ ಬಗ್ಗೆ ಬಾಯಿ ಬಿಟ್ಟಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗಿ ಕಳ್ಳರ ಹೆಸರನ್ನು ಹೇಳಿದ್ದಾನೆ. ಚಿಂತಾಮಣಿ ಹಾಗೂ ಶ್ರೀನಿವಾಸಪುರ ತಾಲೂಕುಗಳು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ 9 ಪ್ರಕರಣಗಳಲ್ಲಿ ಶ್ರೀಗಂಧ ಕದ್ದಿದ್ದ ಖತರ್ನಾಕ್ ಕಳ್ಳರು, ಪೊಲೀಸರು ಹಾಗೂ ರೈತರಿಗೆ ಚೆಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗ್ತಿದ್ರು. ಇದನ್ನೂ ಓದಿ: ರಾಜ್ಯದಲ್ಲಿ ಕೊರೊನಾ ಸ್ಫೋಟ – 4,246 ಪಾಸಿಟಿವ್, ಇಬ್ಬರು ಬಲಿ 

ಆದರೆ ಈಗ ಪೊಲೀಸರು ಅತ್ಯಾಧುನಿಕ ಮೊಬೈಲ್ ತಂತ್ರಜ್ಞಾನ ಬಳಸಿ, 7 ಜನ ಶ್ರೀಗಂಧ ಕಳ್ಳರನ್ನು ಬಂಧಿಸಿದ್ದಾರೆ. ಅದು ಅಲ್ಲದೇ ಅವರಿಂದ ಒಟ್ಟು 70 ಕೆ.ಜಿ ಇನ್ನೂರು ಗ್ರಾಂ ತೂಕದ 21 ಲಕ್ಷದ 6 ಸಾವಿರ ರೂಪಾಯಿ ಮೌಲ್ಯದ ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *