ಚಿಕ್ಕಬಳ್ಳಾಪುರದಲ್ಲಿ ಇಂದು ಮತ್ತೆ ಕಂಪಿಸಿದ ಭೂಮಿ

Public TV
2 Min Read

ಚಿಕ್ಕಬಳ್ಳಾಪುರ: ತಾಲೂಕಿನ ಶೆಟ್ಟಿಗೆರೆ, ಬಂಡಹಳ್ಳಿ, ಪಿಲ್ಲಗುಂಡ್ಲಹಳ್ಳಿ ಸೇರಿ ಸುತ್ತಮುತ್ತಲ ಹಲವು ಗ್ರಾಮಗಳಲ್ಲಿ ಇಂದು ಮತ್ತೆ ಭೂಮಿ ಕಂಪಿಸಿದ ಅನುಭವ ಆಗಿದೆ. ಮುಂಜಾನೆ 3:16 ನಿಮಿಷಕ್ಕೆ ಭೂಮಿಯ ಅಂತರಾಳದಿಂದ ಭಾರೀ ಸ್ಫೋಟದ ಸದ್ದಿನೊಂದಿಗೆ 3-4 ಸೆಕೆಂಡ್‌ಗಳ ಕಾಲ ಭೂಮಿ ಕಂಪಿಸಿದ್ದು, ನಿದ್ದೆಯಲ್ಲಿದ್ದ ಜನ ಬೆಚ್ಚಿಬಿದ್ದು ಎದ್ದಿದ್ದಾರೆ.

ಈ ಬಗ್ಗೆ ರಾಜ್ಯ ನೈಸರ್ಗಿಕ ವಿಪತ್ತು ಪ್ರಾಧಿಕಾರವೂ 2.7 ತೀವ್ರತೆಯ ಭೂಕಂಪನ ಆಗಿರುವ ಬಗ್ಗೆ ಖಾತ್ರಿಪಡಿಸಿದೆ. ಮುಂಜಾನೆ 3 ಗಂಟೆ ಸುಮಾರಿಗೆ ಆದ ಅನುಭವಕ್ಕೆ ಜನ ಹೆದರಿ ಮನೆಗಳಿಂದ ಹೊರಬಂದಿದ್ದು, ಬೆಳಗಿನವರೆಗೂ ಮನೆಯ ಹೊರಭಾಗದಲ್ಲೇ ಕಾಲ ಕಳೆಯುವಂತಾಗಿದೆ. ಬೆಳಿಗ್ಗೆ 7 ಗಂಟೆ ಸುಮಾರಿಗೂ ಇನ್ನೊಮ್ಮೆ ಎರಡು ಬಾರಿ ಭಾರೀ ಸದ್ದು ಕೇಳಿಬಂತು ಅಂತ ಬಂಡಹಳ್ಳಿ ಗ್ರಾಮಸ್ಥರು ತಿಳಿಸಿದ್ದಾರೆ.

ಈ ಹಿಂದೆ ಸಹ ಇದೇ ಗ್ರಾಮಗಳಲ್ಲಿ ಮೂರು ಬಾರಿ ಭೂಕಂಪನ ಆಗಿತ್ತು. ಈ ಹಿಂದೆ 3.7 ತೀವ್ರತೆಯ ಭೂಕಂಪನದ ವರದಿ ಆಗಿತ್ತು. ಇದರಿಂದ ಕೆಲ ಗ್ರಾಮಸ್ಥರು ಮನೆಗಳನ್ನು ಖಾಲಿ ಮಾಡಿ ಸಂಬಂಧಿಕರ ಮನೆಗಳಿಗೆ ಸೇರಿದ್ದರು. ಕಳೆದ ಒಂದು ವಾರದಿಂದ ಯಾವುದೇ ಕಂಪನ ಇರಲಿಲ್ಲ. ಇದರಿಂದಾಗಿ ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ವಾಪಾಸ್ಸಾಗಿದ್ದಾರೆ. ಆದರೆ ತಡರಾತ್ರಿ ಮತ್ತೆ ಭೂಮಿ ಕಂಪಿಸಿದ್ದು, ಕೆಲ ಮನೆಗಳ ಗೋಡೆಗಳ ಬಿರುಕು ಬಿಟ್ಟಿವೆ. ಪಾತ್ರೆ ಸಾಮಾನುಗಳು ನೆಲಕ್ಕೆ ಬಿದ್ದಿವೆ. ಈ ಹಿಂದೆಯೇ ನೂರಾರು ಮನೆಗಳು ಬಿರುಕು ಬಿಟ್ಟಿದ್ದವು. ಇದನ್ನೂ ಓದಿ: ಕೋವಿಡ್-19 ಮುಂದಿನ ಎರಡು ವಾರ ನಿರ್ಣಾಯಕ – ಭಾರತಕ್ಕೆ WHO ತಜ್ಞರ ಎಚ್ಚರಿಕೆ

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಉಸ್ತುವಾರಿ ಸಚಿವ ಸುಧಾಕರ್, ಇದಕ್ಕೆ ಭೂಕಂಪನ ಪದ ಬಳಸೋದು ಬೇಡ. ಅನೇಕ ವರ್ಷಗಳಿಂದ ಮಳೆ ಇಲ್ಲದೆ ಕೊಳವೆಬಾವಿ ಕೊರೆದಿದ್ದು, ಭೂಮಿಯ ಒಳಭಾಗದಲ್ಲಿ ವ್ಯಾಕ್ಯೂಮ್ ಕ್ರಿಯೇಟ್ ಆಗಿದೆ. ಈ ಬಾರಿ ಸುರಿದ ಭಾರೀ ಮಳೆಯಿಂದಾಗಿ ಅಂತರ್ಜಲ ಹೆಚ್ಚಾಗಿರುವುದರಿಂದ ಜೋರು ಶಬ್ದ ಕೇಳಿಬರುತ್ತಿದೆ. ಹಾಗಾಗಿ ಜನ ಆತಂಕಪಡುವ ಅಗತ್ಯ ಇಲ್ಲ. ಹೆಚ್ಚು ಬಿರುಕು ಬಿಟ್ಟಿರುವ ಮನೆಗಳಿಗೆ ಸರ್ಕಾರದಿಂದ ಪರಿಹಾರ ಕೊಡಿಸಲು ಚರ್ಚಿಸಿದ್ದೇನೆ. ಇಂದು ಶೆಟ್ಟಿಗೆರೆ ಗ್ರಾಮಕ್ಕೆ ಭೇಟಿ ನೀಡುವುದಾಗಿ ತಿಳಿಸಿದರು. ಇದನ್ನೂ ಓದಿ: ಓಮಿಕ್ರಾನ್ ಶ್ವಾಸಕೋಶಕ್ಕೆ ಹೋಗಲ್ಲ, ಗಂಟಲಲ್ಲಿ ಮಾತ್ರ ಇರುತ್ತೆ: ಸುಧಾಕರ್

Share This Article
Leave a Comment

Leave a Reply

Your email address will not be published. Required fields are marked *