ಬೆಳಗಾವಿ: ವಿಧಾನ ಪರಿಷತ್ನಲ್ಲಿ ಮತಾಂತರ ನಿಷೇಧ ಮಸೂದೆಯನ್ನು ಇಂದು ಮಂಡಿಸುವ ನಿರ್ಧಾರದಿಂದ ಬಿಜೆಪಿ ಹಿಂದೆ ಸರಿದಿದೆ. ಪ್ರತಿಪಕ್ಷಗಳ ವಿರೋಧದಿಂದಾಗಿ ಕಾದು ನೋಡುವ ತಂತ್ರ ಅನುಸರಿಸಿದ್ದ ಬಿಜೆಪಿ ಸರ್ಕಾರ ಮಸೂದೆ ಮಂಡನೆ ದಿನವನ್ನು ಮುಂದೂಡಿದೆ.
ವಿಧಾನಸಭೆಯಲ್ಲಿ ಬಹುಮತದ ಆಧಾರದಲ್ಲಿ ಅಂಗೀಕಾರ ಆಗಿದೆ. ಆದರೆ ವಿಧಾನ ಪರಿಷತ್ನಲ್ಲಿ ಬಿಜೆಪಿಗೆ ಬಹುಮತ ಇಲ್ಲದ ಕಾರಣ ಮತಾಂತರ ನಿಷೇಧ ಮಸೂದೆ ಮಂಡನೆಗೆ ಮೀನಾಮೇಷ ಎಣಿಸುತ್ತಿದೆ. ಇಂದು ಮಸೂದೆಯನ್ನು ಮಂಡಿಸಲಾಗುವುದು ಎಂದು ಹೇಳಲಾಗಿತ್ತು. ಆದರೆ ಕೊನೆ ಘಳಿಗೆಯಲ್ಲಿ ನಿಲುವು ಬದಲಿಸಲಾಗಿದೆ. ಮಸೂದೆಯನ್ನು ಜನವರಿಯಲ್ಲಿ ಮಂಡಿಸಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಮತಾಂತರ ಕಾಯ್ದೆ ವಿಧಾನಸಭೆಯಲ್ಲಿ ಪಾಸ್: ಕಟೀಲ್ ಸ್ವಾಗತ
ಇಂದು ಕಲಾಪದಲ್ಲಿ ಬಿಜೆಪಿಯ 30 ಸದಸ್ಯರು ಹಾಗೂ ಕಾಂಗ್ರೆಸ್ ಮತ್ತು ಜೆಡಿಎಸ್ನಿಂದ 26 ಸದಸ್ಯರು ಉಪಸ್ಥಿತರಿದ್ದರು. ಮತಾಂತರ ನಿಷೇಧ ಮಸೂದೆ ಮಂಡನೆ ವಿಚಾರವಾಗಿ ಇಂದು ಪರಿಷತ್ನಲ್ಲಿ ಹೈಡ್ರಾಮಾ ನಡೆಯಿತು. ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ವಾಗ್ವಾದ ಏರ್ಪಟ್ಟಿತು.
ಈ ವೇಳೆ ಮಾತನಾಡಿದ ಮರಿತಿಬ್ಬೇಗೌಡ, ನಾಳೆ ಬಿಲ್ ಮಂಡಿಸಿ. ಇವತ್ತೇ ಮಂಡಿಸಿ ಮಾಡಬೇಕಾದದ್ದೇನೂ ಇಲ್ಲ. ನಮ್ಮ ಕೆಲ ಸದಸ್ಯರು ಬರುವವರಿದ್ದಾರೆ. ನಾಳೆಯೇ ಅವಧಿ ಮುಗಿದವರ ವಿದಾಯ ಭಾಷಣಕ್ಕೆ ಅವಕಾಶ ಕೊಡಿ. ಕಲಾಪ ನಾಳೆಗೆ ಮುಂದೂಡುವಂತೆ ಮನವಿ ಮಾಡಿದರು. ಆದರೂ ಮಸೂದೆ ಮಂಡನೆ ವಿಚಾರವಾಗಿ ಗೊಂದಲ ಇದ್ದಿದ್ದರಿಂದ ಮುಂದೂಡಲಾಯಿತು. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಸಂವಿಧಾನಾತ್ಮಕ ಹಾಗೂ ಜನಪರ: ಬೊಮ್ಮಾಯಿ