ಬೇಡ..ಬೇಡ ಎಂದರೂ ಅಮ್ಮ ಮಕ್ಕಳೊಂದಿಗೆ ನದಿಗೆ ಹಾರಿದ್ಳು

Public TV
2 Min Read

– ಮೂವರು ಮಕ್ಕಳ ಜೊತೆ ಆತ್ಮಹತ್ಯೆಗೆ ಮುಂದಾದ ತಾಯಿ
– ತಾಯಿಯ ಜೊತೆ ಕೊನೆ ಕ್ಷಣದ ಮಾತು ಹಂಚಿಕೊಂಡ ತನುಶ್ರೀ

ಗದಗ: ಮಕ್ಕಳ ಜೊತೆ ತಾಯಿ ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ರೋಣ ತಾಲೂಕಿನ ಹೊಳೆಆಲೂರ ಬಳಿ ನಡೆದಿದೆ.

ಉಮಾದೇವಿ ತನ್ನ ಮೂರು ಮಕ್ಕಳೊಂದಿಗೆ ನದಿಗೆ ಹಾರಲು ಬಂದಿದ್ದಾಳೆ. ಈ ಪೈಕಿ ತನುಶ್ರೀ (10) ಪ್ರಿಯಂಕಾ (7) ಬಚಾವ್ ಆಗಿದ್ದಾರೆ.

ಉಮಾದೇವಿ ಪತಿ ಸಂಗಮೇಶ್ 6 ತಿಂಗಳ ಹಿಂದೆ ಕೋವಿಡ್ ನಿಂದ ಮೃತಪಟ್ಟಿದ್ದು,  ಈ ವಿಚಾರದಿಂದ ಖಿನ್ನತೆಗೆ ಜಾರಿ ಉಮಾದೇವಿ ಆತ್ಮಹತ್ಯೆಗೆ ಯತ್ನಿಸಿರಬಹುದು ಎಂದು ಶಂಕಿಸಲಾಗಿದೆ. ಇದನ್ನೂ ಓದಿ: ಕಾರಲ್ಲೇ ಕೂರಿಸಿ ಯುವಕ, ಯುವತಿಯ ವೀಡಿಯೋ ರೆಕಾರ್ಡ್ – 5 ಲಕ್ಷಕ್ಕೆ ಬೆದರಿಕೆ

ತಾಯಿಯೊಂದಿಗೆ ಕೊನೆ ಕ್ಷಣದ ಮಾತು ಹಂಚಿಕೊಂಡ ಮಗಳು ತನುಶ್ರೀ, ನಮ್ಮನ್ನು ಬೆಳಗ್ಗೆ 4 ಗಂಟೆಗೆ ಅಮ್ಮ ಎಬ್ಬಿಸಿ ಊರಿಗೆ ಹೋಗೋಣ ಎಂದರು. ನಾನು ಬರಲ್ಲ ಎಂದೆ. ಆದರೂ ಅಮ್ಮ ನಮ್ಮನ್ನು ಕರೆದುಕೊಂಡು ಬಂದಳು. ಕತ್ತಲಾಗಿದ್ದರಿಂದ ನಾನು ಭಯಗೊಂಡು ಮತ್ತೆ ಬಾ ಹೋಗೋಣ ಎಂದೆ ಆದರೂ ಅಮ್ಮ ನನ್ನ ಮಾತು ಕೇಳದೇ ನದಿ ಬಳಿ ಕರೆದುಕೊಂಡು ಬಂದಳು ಎಂದು ಹೇಳಿದಳು.

ನಾನು ನದಿಯನ್ನು ನೋಡಿ ಭಯಗೊಂಡು ಬೇಡ ಎಂದು ಅಲ್ಲಿಂದ ಓಡಿ ಬಂದೆ. ಆದರೂ ಅಮ್ಮ ನನ್ನನ್ನು ಬಿಡದೆ ಮತ್ತೆ ನದಿಯತ್ತ ಎಳೆದುಕೊಂಡು ಬಂದಳು. ಮಗುವನ್ನು ಕೈಯಲ್ಲಿ ಹಿಡಿದುಕೊಂಡೆ ನದಿಗೆ ಹಾರಿದಳು. ನಾನು ಬೇಡ… ಬೇಡ ಎಂದು ಹೇಳಿದ್ದನ್ನು ಲೆಕ್ಕಿಸದೇ ನದಿಗೆ ಅಮ್ಮ, ಶ್ರೇಷ್ಠಾ ಹಾರಿದರು. ಈ ರೀತಿ ಏಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ನನಗೆ ಏನು ಹೇಳಿಲ್ಲ. ನಮಗೆ ಯಾರ ಜೊತೆಗೂ ಜಗಳವಾಗಿಲ್ಲ. ಅವರು ಬಿದ್ದಿದ ತಕ್ಷಣ ನಾನು ಅಲ್ಲಿಂದ ಓಡಿ ಬಂದೆ ಎಂದು ಉತ್ತರಿಸಿದ್ದಾಳೆ. ಇದನ್ನೂ ಓದಿ: ಶಕ್ತಿಯುತ ದೇಹ ಹಾಗೂ ಮನಸ್ಸು ಆರೋಗ್ಯಕರ ಜೀವನಕ್ಕೆ ಸಹಕಾರಿ: ಬೊಮ್ಮಾಯಿ

ಘಟನೆಯ ನಡೆದ ಬಳಿಕ ಅಗ್ನಿಶಾಮಕ ದಳ, ಪೊಲೀಸರು ಹಾಗೂ ಸ್ಥಳೀಯರಿಂದ ಶೋಧ ಕಾರ್ಯಾಚರಣೆ ನಡೆಸಿದ್ದು, ಉಮಾದೇವಿ ಅರೆಪ್ರಜ್ಞಾವಸ್ಥೆಯಲ್ಲಿ ಸಿಕ್ಕಿದರೆ 4 ವರ್ಷ ಶ್ರೇಷ್ಠಾ ಪತ್ತೆ ಕಾರ್ಯ ಮುಂದುವರಿದಿದೆ.

Share This Article
Leave a Comment

Leave a Reply

Your email address will not be published. Required fields are marked *