ದಂಡ ವಸೂಲಿಗೆ ನಿಂತ ಪೊಲೀಸರು- ತಪ್ಪಿಸಿಕೊಳ್ಳಲು ಹೋದ ವಾಹನ ಪಲ್ಟಿ

Public TV
2 Min Read

– 7 ಕೂಲಿ ಕಾರ್ಮಿಕರಿಗೆ ಗಾಯ, ಸ್ಥಳೀಯರಿಂದ ಪ್ರತಿಭಟನೆ

ಹುಬ್ಬಳ್ಳಿ: ಪೊಲೀಸರ ದಂಡದಿಂದ ತಪ್ಪಿಸಿಕೊಳ್ಳುವ ಸಲುವಾಗಿ ರಸ್ತೆಯಂಚಿನಿಂದ ತೆರಳಲು ಮುಂದಾದಾಗ ಚಾಲಕನ ನಿಯಂತ್ರಣ ತಪ್ಪಿ ಟಾಟಾ ಏಸ್ ಜಮೀನಿಗೆ ಉರುಳಿದೆ. ಪರಿಣಾಮ ಏಳು ಜನ ಗಾಯಗೊಂಡಿದ್ದಾರೆ. ಪೊಲೀಸರ ಅವೈಜ್ಞಾನಿಕ ದಂಡ ವಸೂಲಿ ಖಂಡಿಸಿ ಸ್ಥಳೀಯರು ಪೊಲೀಸರ ನಡುವೆ ಮಾತಿನ ಚಕಮಕಿ, ತಳ್ಳಾಟ ನೂಕಾಟ ನಡೆದು ಕೆಲ ಕಾಲ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು.

ಕುಂದಗೋಳ ತಾಲೂಕಿನ ಪಶುಪತಿಹಾಳದಲ್ಲಿ ಗುಡಗೇರಿ ಪೊಲೀಸರು ದಂಡ ವಸೂಲಿ ಮಾಡುವ ವೇಳೆ ಘಟನೆ ಸಂಭವಿಸಿದೆ. ಕಾರ್ಮಿಕರ ಪೈಕಿ ಮಹಿಳೆಯರು ಸೇರಿ ಏಳು ಜನರು ಗಾಯಗೊಂಡು ಅಸ್ವಸ್ಥರಾಗಿ ರಸ್ತೆಯಲ್ಲಿ ಬಿದ್ದಿದ್ದರು. ಸೋಮವಾರ ಸಂಜೆ ಕೂಲಿ ಕಾರ್ಮಿಕರು ಕೆಲಸದಿಂದ ವಾಪಸ್ಸಾಗುತ್ತಿದ್ದ ವೇಳೆ ಘಟನೆ ನಡೆದಿದ್ದು, ಗಾಯಗೊಂಡವರನ್ನು ಗುಡಿಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಿಲಾಗಿದೆ. ಗಂಭೀರವಾಗಿ ಗಾಯಗೊಂಡ ಗಾಯಾಳುಗಳನ್ನ ಲಕ್ಷ್ಮೇಶ್ವರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ:  ಯುವತಿಯಿಂದ ಕಾರು ಚಾಲನೆ- ಆಟೋ ಸಂಪೂರ್ಣ ನಜ್ಜುಗುಜ್ಜು

ರಸ್ತೆಯ ಇಕ್ಕೆಲದಲ್ಲಿ ಗುಡಗೇರಿ ಪೊಲೀಸರು ವಾಹನ ನಿಲ್ಲಿಸಿಕೊಂಡು ದಂಡ ವಸೂಲಿ ಮಾಡುತ್ತಿದ್ದರು. ಈ ವೇಳೆ 22 ಕೂಲಿ ಕಾರ್ಮಿಕರನ್ನು ಟಾಟಾ ಏಸ್ ವಾಹನದಲ್ಲಿ ಕರೆ ತರುತ್ತಿದ್ದ ಚಾಲಕ, ಪೊಲೀಸರನ್ನು ಕಂಡು ಅವರಿಂದ ಪಾರಾಗಲು ರಸ್ತೆಯ ಅಂಚಿಗೆ ವಾಹನ ಕೊಂಡೊಯ್ದಿದ್ದಾನೆ. ಆದರೆ ಈ ವೇಳೆ ನಿಯಂತ್ರಣ ತಪ್ಪಿ ವಾಹನ ಜಮೀನಲ್ಲೆ ಅಡ್ಡಲಾಗಿ ಬಿದ್ದಿದೆ. ಕಾರ್ಮಿಕರ ಪೈಕಿ ಮಹಿಳೆಯರು ಸೇರಿ ಏಳು ಜನರು ಗಾಯಗೊಂಡು ಅಸ್ವಸ್ಥರಾಗಿ ರಸ್ತೆಯಲ್ಲಿ ಬಿದ್ದಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆ ಜಾರಿಗೆ ಚಿಂತನೆ ಮಾಡಲಾಗುತ್ತಿದೆ: ಅರಗ ಜ್ಞಾನೇಂದ್ರ

ಇದರಿಂದ ಕೆರಳಿದ ಸ್ಥಳೀಯರು ಪೊಲೀಸರ ವಿರುದ್ಧ ಹರಿಹಾಯ್ದರು. ದಂಡ ವಸೂಲಿ ಮಾಡುವ ನೆಪದಲ್ಲಿ ಬಡವರ ಪ್ರಾಣ ತೆಗೆಯುವ ಕೆಲಸ ಮಾಡಿದ್ದೀರಿ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ನಡುವೆ ಪೊಲೀಸ್ ಸಿಬ್ಬಂದಿ ಕೂಡ ಜನರ ಜೊತೆಗೆ ವಾಗ್ವಾದಕ್ಕೆ ಮುಂದಾದ ಕಾರಣ ಗ್ರಾಮಸ್ಥರು ಹಾಗೂ ಸಿಬ್ಬಂದಿ ನಡುವೆ ತಳ್ಳಾಟ ನೂಕಾಟ ನಡೆಯಿತು. ವಿಷಯ ತಿಳಿದ ಗುಡಗೇರಿ ಠಾಣೆ ಪಿಎಸ್‍ಐ ಸವಿತಾ ಮನ್ಯಾಳ ಅವರು ಸ್ಥಳಕ್ಕೆ ಬಂದಾಗ ಅವರನ್ನೂ ಜನತೆ ತರಾಟೆಗೆ ತೆಗೆದುಕೊಂಡರು.

ಬರೋಬ್ಬರಿ ಒಂದು ಗಂಟೆಗಳ ಕಾಲ ಈ ಪ್ರಹಸನ ನಡೆದಿದೆ. ರಸ್ತೆಯಲ್ಲೇ ಸ್ಥಳಿಕರು ಧರಣಿ ಕುಳಿತರು. ಬಳಿಕ ಕುಂದಗೋಳ ಗ್ರಾಮೀಣ ಸಿಪಿಐ ಎನ್.ಎಂ.ದೇವನೂರ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸುವ ಪ್ರಯತ್ನ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *