ಬಿಎಸ್‍ವೈ ರಾಜೀನಾಮೆಯಿಂದ ಲಿಂಗಾಯಿತ ಮತಗಳಲ್ಲಿ ಬದಲಾವಣೆ ಆಗಲ್ಲ: ಶಾಸಕ ರವೀಂದ್ರನಾಥ್

Public TV
1 Min Read

ದಾವಣಗೆರೆ: ಬಿ.ಎಸ್.ಯಡಿಯೂರಪ್ಪನವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಲಿಂಗಾಯಿತ ಮತಗಳಲ್ಲಿ ಬದಲಾವಣೆ ಆಗಲ್ಲ. ಬಿಎಸ್‍ವೈ ಕೆಜೆಪಿ ಕಟ್ಟಿದಾಗ ಕೇವಲ ಆರು ಸೀಟ್ ಗೆದ್ದಿದ್ದರು, ನಾವು ಲಿಂಗಾಯಿತರು ಬಿಜೆಪಿಯಲ್ಲೇ ಇದ್ದು, 40 ಸ್ಥಾನ ಗೆದ್ದಿದ್ದೆವು ಎಂದು ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್.ಎ.ರವೀಂದ್ರನಾಥ್ ಹೇಳಿದರು.

ಜಿಲ್ಲೆಯ ಶಿರಮಗೊಂಡನಹಳ್ಳಿಯಲ್ಲಿ ಮಾತನಾಡಿದ ಅವರು, ಲಿಂಗಾಯಿತ ಮತಗಳು ಅವರ ಕಡೆ ಇದ್ದಿದ್ದರೆ ಕೆಜೆಪಿಯಿಂದ ಜಾಸ್ತಿ ಸೀಟು ಗೆಲ್ಲಬೇಕಿತ್ತು. ಆ ರೀತಿ ಯಾವುದೇ ಬದಲಾವಣೆ ಆಗಲ್ಲ. ಎರಡು ವರ್ಷದ ನಿಯಮದಂತೆ ಬಿಎಸ್‍ವೈ ರಾಜೀನಾಮೆ ನೀಡಿದ್ದಾರೆ ಅಷ್ಟೇ ಎಂದರು.

ಸ್ವಾಮಿಜಿಗಳು, ಶಾಮನೂರು ಶಿವಶಂಕರಪ್ಪ ಬೆಂಬಲ ನೀಡಿದ ಕುರಿತು ಮಾತನಾಡಿದ ಅವರು, ಸ್ವಾಮೀಜಿಗಳು ಈಗ ಬೆಂಬಲ ನೀಡಿದ್ದಾರೆ, ಮುಂದಿನ ನೂತನ ಸಿಎಂ ಬಂದರೆ ಅವರಿಗೂ ಹಾರ ಹಾಕಿ ಬೆಂಬಲ ವ್ಯಕ್ತಪಡಿಸುತ್ತಾರೆ. ಅವರ ಬಗ್ಗೆ ನಾನು ಮಾತನಾಡಲ್ಲ ಎಂದು ಟಾಂಗ್ ಕೊಟ್ಟರು.

ಶಾಸಕ ರೇಣುಕಾಚಾರ್ಯ ಯಡಿಯೂರಪ್ಪನವರ ಮಾನಸ ಪುತ್ರ, ಬಿಎಸ್‍ವೈ ಸಿಎಂ ಇದ್ದಾಗ ಜಾಸ್ತಿ ಅನುದಾನ ಕೊಟ್ಟಿದ್ದಾರೆ. ಇನ್ನು ಮುಂದೆ ನಾವು ಹೆಚ್ಚು ಅನುದಾನ ತರುತ್ತೇವೆ ಎಂದು ಸವಾಲು ಹಾಕಿದರು.

ಸಚಿವ ಸ್ಥಾನದ ಮೇಲೆ ಕಣ್ಣು:
ನಾನು ಐದು ಬಾರಿ ಸೋತು, ಐದು ಬಾರಿ ಗೆದ್ದಿದ್ದೇನೆ. ಸಚಿವ ಸ್ಥಾನಕ್ಕೆ ಸೀನಿಯಾರಿಟಿ ನಂದೂ ಇದೆ. ಪಾರ್ಟಿ ನಿರ್ಣಯಕ್ಕೆ ಬದ್ಧವಾಗಿದ್ದೇನೆ ಎಂದು ಸಚಿವ ಸ್ಥಾನಕ್ಕೆ ಶಾಸಕ ರವೀಂದ್ರನಾಥ್ ಟವಲ್ ಹಾಕಿದರು. ಯಾವುದೇ ಸ್ಥಾನ ಕೊಟ್ಟರೂ ಮಾಡುತ್ತೇನೆ, ಆಶಾವಾದಿಯಾಗಿದ್ದೇನೆ. ಸಿಎಂ ರೇಸ್ ನಲ್ಲಿ ಪ್ರಹ್ಲಾದ್ ಜೋಶಿ, ಮುರುಗೇಶ್ ನಿರಾಣಿ, ಉಮೇಶ್ ಕತ್ತಿ, ಜಗದೀಶ್ ಶೆಟ್ಟರ್ ಹೆಸರು ಇದೆ. ಹೊಸಬರು ಎಂದರೆ ಸಂತೋಷ್ ಅವರೇ ಇದ್ದಾರೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *