ಮಗುಚಿ ಬಿದ್ದ ಕಾಂಕ್ರೀಟ್ ಮಿಕ್ಸರ್ ಲಾರಿ-ಇಬ್ಬರು ಕಾರ್ಮಿಕರ ಸಾವು

Public TV
1 Min Read

ಮಡಿಕೇರಿ: ಪಾಕ ರಸ್ತೆಯಲ್ಲಿ ತಡೆಗೋಡೆ ನಿರ್ಮಿಸುತ್ತಿದ್ದ ಸಂದರ್ಭ ಕಾಂಕ್ರೀಟ್ ಮಿಕ್ಸರ್ ಲಾರಿ ಮಗುಚಿ ಬಿದ್ದು, ಇಬ್ಬರು ಕಾರ್ಮಿಕರು ನಿನ್ನೆ ಚೇರಂಬಾಣೆ ಕೊಳಗದಾಳು ಬಳಿ ಮೃತಪಟ್ಟಿದ್ದರು. ಇಂದು ಮಣ್ಣಿನಡಿ ಸಿಲುಕಿದ್ದ ಅವರ ಮೃತದೇಹವನ್ನು ಹೊರ ತೆಗೆಯಲಾಗಿದೆ.

ಗದಗ ಮೂಲದ ಸಂತೋಷ್ ಭಂಡಾರಿ(27) ಮತ್ತು ಪ್ರವೀಣ್(21) ಮೃತ ದುರ್ದೈವಿಗಳು. ಕಳೆದ ಎರಡು ದಿನಗಳಿಂದ ಮಳೆ ಕ್ಷೀಣಿಸಿದ್ದ ಹಿನ್ನೆಲೆಯಲ್ಲಿ ಚೇರಂಬಾಣೆ ಪಾಕ ಬಳಿ ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರೊಬ್ಬರು ರಸ್ತೆಯ ತಡೆಗೋಡೆ ನಿರ್ಮಿಸುವ ಕಾರ್ಯಕ್ಕೆ ಮುಂದಾಗಿದ್ದರು. ಇದನ್ನೂ ಓದಿ: ಹಾಕಿ ಕೋಚ್ ಅಂಕಿತಾಗೆ ಕೊಡಗಿನ ಜನತೆಯಿಂದ ಶುಭ ಹಾರೈಕೆ

ನಿನ್ನೆ ಸಂಜೆ ವೇಳೆ ಮಡಿಕೇರಿಯಿಂದ ಕಾಂಕ್ರೀಟ್ ತುಂಬಿದ್ದ 10 ಚಕ್ರದ ಲಾರಿ ಕೊಳಗದಾಳು ಮಾರ್ಗವಾಗಿ ಪಾಕ ರಸ್ತೆಯ ತಡೆಗೋಡೆ ನಿರ್ಮಿಸುವ ಸ್ಥಳಕ್ಕೆ ತಲುಪಿದೆ. ಬಳಿಕ ಲಾರಿಯನ್ನು ಮೇಲ್ಬಾಗದಲ್ಲಿ ನಿಲ್ಲಿಸಿಕೊಂಡು ಕೆಳ ಭಾಗದಲ್ಲಿರುವ ತಡೆಗೋಡೆಗೆ ಕಾಂಕ್ರೀಟ್ ನ್ನು ತುಂಬಿಸಲಾಗುತ್ತಿತ್ತು. ಈ ಸಂದರ್ಭ ತಡೆಗೋಡೆಯ ಪಕ್ಕದಲ್ಲಿ ಕುಸಿತ ಉಂಟಾಗಿ ಲಾರಿ ಏಕಾಏಕಿ ಕೆಳಗೆ ಮಗುಚಿ ಬಿದ್ದಿದೆ. ಪರಿಣಾಮವಾಗಿ ಕೆಳಭಾಗದಲ್ಲಿದ್ದ ಇಬ್ಬರು ಕಾರ್ಮಿಕರಾದ ಗದಗ ಜಿಲ್ಲೆ ಇಂದಿರಾ ನಗರದ ನಿವಾಸಿಗಳಾದ ಸಂತೋಷ್ ಭಂಡಾರಿ ಹಾಗೂ ಪ್ರವೀಣ್ ಎಂಬವರು ಮಣ್ಣಿನಡಿ ಸಿಲುಕಿಕೊಂಡಿದ್ದು, ಅಲ್ಲೇ ಪ್ರಾಣ ಬಿಟ್ಟಿದ್ದಾರೆ.

ಲಾರಿ ಸಹಿತ ಮಣ್ಣಿನ ರಾಶಿ ಕುಸಿದು ಬಿದ್ದಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಹಿಟಾಚಿ ಯಂತ್ರಗಳನ್ನು ತಂದು ಮಣ್ಣಿನಡಿ ಸಿಲುಕಿದ್ದ ಇಬ್ಬರು ಕಾರ್ಮಿಕರ ಮೃತ ದೇಹಗಳನ್ನು ಇಂದು ಹೊರ ತೆಗೆಯಲಾಗಿದೆ. ಈ ದುರ್ಘಟನೆ ಕುರಿತು ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *