ಮದ್ಯ ಕುಡಿಯಲು ಹಣ ನೀಡದಕ್ಕೆ ತಾಯಿಯನ್ನೇ ಕೊಂದ ಪಾಪಿ

Public TV
1 Min Read

ಚಿತ್ರದುರ್ಗ: ಮದ್ಯಪಾನ ಮಾಡಲು ಹಣ ಕೊಡಲಿಲ್ಲವೆಂದು ಆಕ್ರೋಶಗೊಂಡ ಮಗನೊಬ್ಬ ಕುಡಿದ ಅಮಿಲಿನಲ್ಲಿ ತನ್ನ ತಾಯಿಯನ್ನೇ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದಲ್ಲಿ ನಡೆದಿದೆ.

ತಾಯಿ ರತ್ನಮ್ಮ(45)ಳನ್ನು ಮಗ ಲೋಕೇಶ್(22) ಕೊಲೆ ಮಾಡಿದ್ದಾನೆ. ಕಳೆದ 20 ವರ್ಷಗಳ ಹಿಂದೆ ಪಿಲ್ಲಹಳ್ಳಿ ಗ್ರಾಮದಲ್ಲಿ ಗೋವಿಂದಪ್ಪ ಅವರ ಜೊತೆ ವಿವಾಹವಾಗಿದ್ದ ರತ್ನಮ್ಮ ಪತಿಯನ್ನು ಬಿಟ್ಟು ಮೊಳಕಾಲ್ಮೂರು ಪಟ್ಟಣದಲ್ಲಿ ಕೂಲಿ ಕೆಲಸ ಮಾಡಿಕೊಂಡು ಮಗನೊಂದಿಗೆ ವಾಸವಿದ್ದರು.

ಮಗ ಲೋಕೇಶ್ ಕೂಡ ಕೂಲಿ ಕೆಲಸ ಮಾಡಿಕೊಂಡಿದ್ದು, ಕುಡಿತದ ಚಟಕ್ಕೆ ಬಿದ್ದಿದ್ದನು. ಪ್ರತಿ ದಿನ ಕುಡಿದು ಮನೆಯಲ್ಲಿ ತಾಯಿಯೊಂದಿಗೆ ಜಗಳ ಮಾಡುತ್ತಿದ್ದನು. ಕಳೆದ ರಾತ್ರಿ ಕೂಡ ಕುಡಿದು ಮನೆಗೆ ಬಂದಿದ್ದಾನೆ. ಆಗ ಕೂಲಿ ಕೆಲಸ ಮುಗಿಸಿಕೊಂಡು ಸುಸ್ತಾಗಿದ್ದ ತಾಯಿ ರತ್ನಮ್ಮ, ಅನ್ನ ಮಾಡಿಟ್ಟು ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ಕುಡಿದ ಅಮಲಿನಲ್ಲಿ ಮನೆಗೆ ಬಂದ ಲೋಕೇಶ್, ಊಟಕ್ಕೆ ಸಾಂಬರ್ ಮಾಡಿಲ್ಲ ಎಂದು ಆಕ್ರೋಶಗೊಂಡು, ಕುಡಿಯಲು ಹಣವನ್ನಾದರೂ ಕೊಡು ಎಂದು ಪೀಡಿಸಿದ್ದಾನೆ. ತಾಯಿಯ ಮೇಲೆ ಕೂಗಾಡಿ ಜಗಳ ಮಾಡಿದ್ದಾನೆ. ಈ ವೇಳೆ ತಾಯಿಯ ಕೆನ್ನೆಗೆ ಹೊಡೆದಿದ್ದು, ಹೊಡೆತದ ರಭಸಕ್ಕೆ ರತ್ನಮ್ಮ ಮನೆಯ ಕಬ್ಬಿಣದ ಬಾಗಿಲಿಗೆ ಬಿದ್ದಿದ್ದಾರೆ. ಬಳಿಕ ಸ್ಥಳದಲ್ಲೇ ರತ್ನಮ್ಮ ಮೃತಪಟ್ಟಿದ್ದಾರೆ.

ವಿಷಯ ತಿಳಿದ ಅಕ್ಕ, ಪಕ್ಕದ ಮನೆಯವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಮೊಳಕಾಲ್ಮೂರು ಪೊಲೀಸರು ರತ್ನಮ್ಮನ ಮಗ ಲೋಕೇಶ್‍ನನ್ನು ಬಂಧಿಸಿ, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಚಿತ್ರದುರ್ಗ ಎಸ್ಪಿ ಜಿ.ರಾಧಿಕಾ ಭೇಟಿ ನೀಡಿ ಸ್ಥಳಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪ್ರತಿಕ್ರಿಯೆ ನೀಡಿದ ಎಸ್ಪಿ ರಾಧಿಕಾ, ಮದ್ಯಪಾನವೆಂಬ ದುಶ್ಚಟದಿಂದಾಗಿ ಹೆತ್ತವಳನ್ನೇ ಈ ಪಾಪಿ ಪುತ್ರ ಕೊಲೆಗೈದಿದ್ದಾನೆ. ಈ ಸಂಬಂಧ ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ಧಾಖಲಿಸಿಕೊಳ್ಳಲಾಗಿದೆ. ಆರೋಪಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *