ಆರ್ಟಿಕಲ್ 370 ರದ್ದು ಬಳಿಕ ಮೊದಲ ಬಾರಿಗೆ ಜಮ್ಮು, ಕಾಶ್ಮೀರ ನಾಯಕರೊಂದಿಗೆ ಮೋದಿ ಸಭೆ

Public TV
3 Min Read

– ಜಮ್ಮು, ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ನೀಡುವ ಚಿಂತನೆ!

ನವದೆಹಲಿ: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್ 370ನ್ನು ಕೇಂದ್ರ ರದ್ದು ಮಾಡಿದ ಬಳಿಕ ಕಣಿವೆ ನಾಡಿನ ರಾಜಕೀಯ ಪ್ರಮುಖರ ಜೊತೆ ಪ್ರಧಾನಿ ನರೇಂದ್ರ ಮೋದಿ ಮೊದಲ ಸಭೆ ನಡೆಸಿದರು. ಸುಮಾರು ಮೂರುವರೆ ಗಂಟೆಗಳ ಕಾಲ ಸಭೆ ನಡೆದಿದ್ದು, ಜಮ್ಮು, ಕಾಶ್ಮೀರ ನಾಯಕರು ತಮ್ಮ ಅಭಿಪ್ರಾಯಗಳನ್ನು ಪ್ರಧಾನಿಗಳ ಮುಂದೆ ಇರಿಸಿದ್ದಾರೆ.

ರಾಜ್ಯ ಸ್ಥಾನಮಾನ ಶೀಘ್ರ ಸಿಗಲಿ:
ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಕಾಂಗ್ರೆಸ್ ನಾಯಕ ಗುಲಾಂ ನಬಿ ಅಜಾದ್, ಜಮ್ಮು ಮತ್ತು ಕಾಶ್ಮೀರಕ್ಕೆ ಪೂರ್ಣ ರಾಜ್ಯ ಸ್ಥಾನಮಾನ ಶೀಘ್ರ ಸಿಗಲಿ. ವಿಧಾನಸಭಾ ಚುನಾವಣೆ ಬಳಿಕ ಈ ಪ್ರಕ್ರಿಯೆ ಬೇಗ ನಡೆಯಲಿ. ಜೊತೆಗೆ ಕಾಶ್ಮೀರಿ ಪಂಡಿತರನ್ನು ವಾಪಸ್ ಕರೆತಂದು ಪುರ್ನವಸತಿಯ ವ್ಯವಸ್ಥೆ ಕಲ್ಪಿಸಬೇಕಿದೆ ಎಂದರು. ಇದೇ ವೇಳೆ ಮಾತನಾಡಿದ ಮುಜಫ್ಪರ್ ಹುಸೈನ್ ಬೇಗ್, ಆರ್ಟಿಕಲ್ 370 ರದ್ದು ನಿರ್ಧಾರ ವಿಧಾನಭೆ ಮೂಲಕ ನಡೆಯಬೇಕಿದೆ. ಜಮ್ಮು, ಕಾಶ್ಮೀರಕ್ಕೆ ಪೂರ್ಣ ರಾಜ್ಯದ ಸ್ಥಾನಮಾನ ನೀಡುವ ಕುರಿತು ಪ್ರಧಾನಿಗಳು ಸ್ಪಷ್ಟವಾಗಿ ಹೇಳಿಲ್ಲ ಎಂದರು.

ಜಮ್ಮು, ಕಾಶ್ಮೀರ ನಾಯಕರ ಜೊತೆಗಿನ ಸಭೆ ಬಳಿಕ ಮಾತನಾಡಿದ ಬಿಜೆಪಿ ನಾಯಕ ಕವಿಂದರ್ ಗುಪ್ತಾ, ಎಲ್ಲ ರಾಜಕೀಯ ನಾಯಕರು ತಮ್ಮ ಪ್ರಸ್ತಾಪ ಮತ್ತು ಅಭಿಪ್ರಾಯವನ್ನ ಸರ್ಕಾರದ ಮುಂದೆ ಇರಿಸಿದ್ದಾರೆ. ಮುಂದಿನ ದಿನಗಳಲ್ಲಿ ರಾಜಕೀಯ ಪ್ರಕ್ರಿಯೆಗಳು ನಡೆಯುವ ಸಾಧ್ಯತೆಗಳಿವೆ. ಗಡಿ ನಿರ್ಣಯದ ಬಳಿಕ ಕ್ಷೇತ್ರಗಳನ್ನ ಗುರುತಿಸಲಾಗುವುದು. ಮತ್ತೊಮ್ಮೆ ಜಮ್ಮು, ಕಾಶ್ಮೀರದಲ್ಲಿ ವಿಧಾನಸಭೆ ರಚನೆಯಾಗಲಿದೆ ಎಂದು ಹೇಳಿದರು. ಇದನ್ನೂ ಓದಿ: 370ನೇ ವಿಧಿ ರದ್ದು : ಇದು ಯಾವ ರೀತಿಯ ಅರ್ಜಿ – ಅರ್ಜಿದಾರರಿಗೆ ಸುಪ್ರೀಂ ತರಾಟೆ

ಆರ್ಟಿಕಲ್ 370 ವಿಷಯ ಚರ್ಚೆಗೆ ತಂದ ಮುಫ್ತಿ:
ಸಭೆಯಲ್ಲಿ ಪಿಡಿಪಿ ಅಧ್ಯಕ್ಷೆ 370 ರದ್ದುಗೊಳಿಸುವ ವಿಷಯವನ್ನು ಚರ್ಚೆಗೆ ತಂದರು. ನೀವು ಆರ್ಟಿಕಲ್ 370 ರದ್ದುಗೊಳಿಸುವ ಮುನ್ನು ಜಮ್ಮು, ಕಾಶ್ಮೀರ ವಿಧಾನಸಭೆಯನ್ನು ಕರೆದು ನಿರ್ಧಾರ ಪ್ರಕಟಿಸಬೇಕಿತ್ತು. ಈ ರೀತಿ ಕಾನೂನು ಪಾಲಿಸದೇ ವಿಶೇಷ ಸ್ಥಾನಮಾನ ರದ್ದುಗೊಳಿಸುವ ಹಕ್ಕು ಯಾರಿಗೂ ಇಲ್ಲ. ಸಾಂವಿಧಾನಿಕ ಮತ್ತು ಕಾನೂನು ರೀತಿಯಲ್ಲಿ ಆರ್ಟಿಕಲ್ 370 ಪುನಃಸ್ಥಾಪಿಸಲು ಬಯುಸುತ್ತೇವೆ ಎಂದು ಹೇಳಿರುವ ಬಗ್ಗೆ ವರದಿಯಾಗಿದೆ. ಇದನ್ನೂ ಓದಿ: ಮೋದಿಗೆ ದೇಶದ ಆರ್ಥಿಕತೆಗಿಂತ 370ರ ಬಗ್ಗೆಯೇ ಹೆಚ್ಚು ನಂಬಿಕೆ: ಎಚ್‍ಡಿಡಿ ಟಾಂಗ್

ಉಮರ್ ಅಬ್ದುಲ್ಲಾ ಆಕ್ರೋಶ:
ಸಭೆಯಲ್ಲಿ ಮಾಜಿ ಸಿಎಂ ಉಮರ್ ಅಬ್ದುಲ್ಲಾ ಆಕ್ರೋಶವಾಗಿ ಮಾತನಾಡಿದ್ದಾರೆ ಎಂದು ವರದಿಯಾಗಿದೆ. ಆಗಸ್ಟ್ 8, 2019ರಂದು ಕೇಂದ್ರ ಸರ್ಕಾರ ಆರ್ಟಿಕಲ್ 370 ರದ್ದುಗೊಳಿಸಿರೋದನ್ನು ನಾವು ವಿರೋಧಿಸುತ್ತೇವೆ. ಕೇಂದ್ರದ ಈ ನಿರ್ಧಾರಕ್ಕೆ ನಮ್ಮ ಒಪ್ಪಿಗೆ ಇಲ್ಲ. ಆರ್ಟಿಕಲ್ 370ರ ಸಂಬಂಧ ನಾವು ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತೇವೆ. ಇದನ್ನೂ ಓದಿ: 370ನೇ ವಿಧಿ ರದ್ದು ಭಾರತದ ಆರ್ಥಿಕ ಅಭಿವೃದ್ಧಿಗೆ ನಾಂದಿ: ಅಮೆರಿಕ ಸಂಸದ

ಜಮ್ಮು ಕಾಶ್ಮೀರಕ್ಕೆ ಮತ್ತೆ ರಾಜ್ಯ ಸ್ಥಾನಮಾನ ನೀಡುವ ಚಿಂತನೆ ನಡೆಸಿದ್ದ ಕೇಂದ್ರ ಸರ್ಕಾರ, ಇಂದು ಕಣಿವೆ ನಾಡಿನ ರಾಜಕೀಯ ಪ್ರಮುಖರ ಜೊತೆ ಸಭೆ ನಡೆಸಿತು. ಪ್ರಧಾನಿ ಮೋದಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬೀ ಆಜಾದ್, ಮಾಜಿ ಸಿಎಂಗಳಾದ ಫರೂಖ್ ಅಬ್ದುಲ್ಲಾ, ಓಮರ್ ಅಬ್ದುಲ್ಲಾ, ಪಿಡಿಪಿಯ ಮೆಹಬೂಬಾ ಮುಫ್ತಿ, ಯೂಸೂಫ್ ತರಿಗಾಮಿ, ರವೀಂದ್ರ ರೈನಾ, ನಿರ್ಮಲ್ ಸಿಂಗ್ ಸೇರಿ ಹಲವು ನಾಯಕರು ಪಾಲ್ಗೊಂಡಿದ್ರು. ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಕೂಡ ಈ ಸಭೆಯಲ್ಲಿ ಪಾಲ್ಗೊಂಡಿದ್ರು. ಇದನ್ನೂ ಓದಿ: ಆರ್ಟಿಕಲ್ 370 ರದ್ದು ಭಾರತದ ಆಂತರಿಕ ವಿಚಾರ ಅಂತ ಒಪ್ಕೊಂಡ ಪಾಕ್

Share This Article
Leave a Comment

Leave a Reply

Your email address will not be published. Required fields are marked *