ಕಾಗದ ರಹಿತ ವಿಧಾನ ಪರಿಷತ್ತಿಗೆ ಶೀಘ್ರ ಕ್ರಮ: ಸಭಾಪತಿ ಹೊರಟ್ಟಿ

Public TV
1 Min Read

ಬೆಂಗಳೂರು: ನೂರಾ ಹದಿನಾಲ್ಕು ವರ್ಷಗಳ ಇತಿಹಾಸ ಹೊಂದಿರುವ ಕರ್ನಾಟಕ ರಾಜ್ಯ ವಿಧಾನ ಪರಿಷತ್‍ನಲ್ಲಿ ಅಮೂಲಾಗ್ರ ಬದಲಾವಣೆಗೆ ಒತ್ತು ನೀಡಿದ್ದು ಪರಿಷತ್ತಿನ ಕಾರ್ಯಚಟುವಟಿಕೆ ಹಾಗೂ ಸದನದ ಕಾರ್ಯಕಲಾಪಗಳನ್ನು ಕಾಗದರಹಿತವನ್ನಾಗಿ ಮಾಡುವ ಕುರಿತು ಶೀಘ್ರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿಧಾನ ಪರಿಷತ್ತಿನ ಮಾನ್ಯ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಸಂಸದೀಯ ಕಾರ್ಯವಿಧಾನ ಕುರಿತು ಮಾನ್ಯ ಲೋಕಸಭಾಧ್ಯಕ್ಷರಾದ ಓಂ ಬಿರ್ಲಾರವರು ದೇಶದ ಎಲ್ಲಾ ರಾಜ್ಯಗಳ ವಿಧಾನ ಮಂಡಲಗಳ ಸಭಾಪತಿಗಳು ಹಾಗೂ ಸಭಾಧ್ಯಕ್ಷರೊಂದಿಗೆ ಇಂದು ನಡೆದ ವರ್ಚುವಲ್ ಸಂವಾದದಲ್ಲಿ ಮಾತನಾಡಿದ ಅವರು ರಾಜ್ಯ ವಿಧಾನ ಪರಷತ್ತನ್ನು ಮಾದರಿ ವಿಧಾನ ಪರಿಷತ್ತನ್ನಾಗಿ ಮಾಡುವ ಸಂಕಲ್ಪದೊಂದಿಗೆ ಹಲವು ವಿನೂತನ ಕ್ರಮ ಕೈಗೊಳ್ಳಲಾಗುತ್ತಿದೆ. ಇ-ವಿಧಾನ ಕಾರ್ಯಕ್ರಮದಡಿ ವಿಧಾನ ಪರಿಷತ್ತನ್ನು ಕಾಗದರಹಿತವನ್ನಾಗಿ ಮಾಡುವ ನಿಟ್ಟಿನಲ್ಲಿ ಈಗಾಗಲೇ ಕ್ರಮ ಜರುಗಿಸಲಾಗುತ್ತಿದೆ. ಸದನದ ಕಲಾಪ, ಪ್ರಶ್ನೋತ್ತರ ಕಾರ್ಯಚಟುವಟಿಕೆಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತಿದೆ ಎಂದರು.

ಕಳೆದ ವಿಧಾನ ಮಂಡಲದ ಬಜೆಟ್ ಅಧಿವೇಶನದಿಂದಲೇ ವಿಧಾನ ಪರಿಷತ್ತಿನ ಕಾರ್ಯಕಲಾಪಗಳನ್ನು ರಾಜ್ಯ ಸಭೆಯ ಮಾದರಿಯಲ್ಲಿ ಮಾಡಲಾಗುತ್ತಿದ್ದು ನಿಗದಿತ ವೇಳೆ ಹಾಗೂ ಅವಧಿಯಲ್ಲಿಯೇ ಪ್ರಶ್ನೋತ್ತರ, ಶೂನ್ಯ ವೇಳೆ ಸೇರಿದಂತೆ ವಿವಿಧ ಕಾರ್ಯಕಲಾಪಗಳನ್ನು ನಡೆಸುವ ಮೂಲಕ ದೇಶದಲ್ಲಿಯೇ ಮಾದರಿಯಾಗಿದೆ ಎಂದರು. ಕೋವಿಡ್ ಸಂದರ್ಭದಲ್ಲಿಯೂ ಸರ್ಕಾರದ ಸೂಕ್ತ ನಿರ್ದೇಶನಗಳನ್ನು ಪಾಲಿಸಿ ಯಶಸ್ವಿಯಾಗಿ ಸದನದ ಕಲಾಪಗಳನ್ನು ನಡೆಸಲಾಗಿದೆ. ಕೋವಿಡ್ ಕುರಿತು ನಾಗರಿಕರಲ್ಲಿ ಜನಜಾಗೃತಿ ಹಾಗೂ ಮುಂಜಾಗ್ರತೆ ವಹಿಸುವಲ್ಲಿ ರಾಜ್ಯದ ವಿಧಾನ ಪರಿಷತ್ ಸದಸ್ಯರ ಪಾತ್ರ ಅನುಕರಣೀಯವಾಗಿದೆ ಎಂದು ಇದೇ ಸಂದರ್ಭದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಸಭೆಗೆ ತಿಳಿಸಿದರು.

ಲೋಕಸಭಾಧ್ಯಕ್ಷ ಓಂ ಬಿರ್ಲಾ ಮಾತನಾಡಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಲೋಕ ಸಭಾಧ್ಯಕ್ಷರಾಗಿ ತಾವು ಸದನದ ಕಲಾಪ ನಡೆಸಿದ ರೀತಿ, ಹಾಗೂ ಅನುಭವಗಳನ್ನು ಹಂಚಿಕೊಂಡರು. ಸಭೆಯಲ್ಲಿ ಕರ್ನಾಟ ವಿಧಾನ ಸಭಾಧ್ಯಕ್ಷ ಮಾನ್ಯ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ದೇಶದ ಎಲ್ಲ ರಾಜ್ಯಗಳ ವಿಧಾನ ಸಭಾಧ್ಯಕ್ಷರು ಹಾಗೂ ವಿಧಾನ ಪರಿಷತ್ತಿನ ಸಭಾಪತಿಗಳು ಪಾಲ್ಗೊಂಡು ವಿಚಾರ ಮಂಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *