ಲಸಿಕೆ ದುರ್ಬಳಕೆ ಮಾಡುತ್ತಿರೋ ಅಶ್ವಥ್ ನಾರಾಯಣರನ್ನು ಕೂಡಲೇ ವಜಾಗೊಳಿಸಿ: ಮೋಹನ್ ದಾಸರಿ ಆಗ್ರಹ

Public TV
2 Min Read

ಬೆಂಗಳೂರು: ಕೊರೊನಾ ನಿಯಂತ್ರಣ ಕಾರ್ಯಪಡೆಯ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವಥ್ ನಾರಾಯಣ್ ಪ್ರಾರಂಭದಿಂದಲೂ ಲಸಿಕೆ ವಿತರಣೆಯಲ್ಲಿ ದುರ್ಬಳಕೆ, ಸ್ವಜನಪಕ್ಷಪಾತ, ಗೊಂದಲಗಳು, ತಾರತಮ್ಯ ಧೋರಣೆಯನ್ನು ಅನುಸರಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಬೆಂಗಳೂರಿನ ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳಲ್ಲೂ ಇಂದು ಲಸಿಕೆ ವಿತರಣೆಯನ್ನು ಬಿಜೆಪಿಯ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಳ್ಳಲು ಅನುವು ಮಾಡಿಕೊಟ್ಟಿದ್ದಾರೆ. ತಮ್ಮ ಸಾಂವಿಧಾನಿಕ ಹುದ್ದೆಯನ್ನು ಸಂಪೂರ್ಣ ದುರುಪಯೋಗ ಪಡಿಸಿಕೊಳ್ಳುತ್ತಿರುವ ಅಶ್ವಥ್ ನಾರಾಯಣ್ ಅವರನ್ನು ಈ ಕೂಡಲೇ ಕಾರ್ಯಪಡೆ ಅಧ್ಯಕ್ಷ ಹುದ್ದೆಯಿಂದ ವಜಾಗೊಳಿಸಬೇಕೆಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ರಾಜ್ಯಪಾಲರಿಗೆ ಒತ್ತಾಯಿಸಿದ್ದಾರೆ.

ಉಪ ಮುಖ್ಯಮಂತ್ರಿಗಳು ತಾವು ಸಮಸ್ತ ಕರ್ನಾಟಕ ರಾಜ್ಯಕ್ಕೆ ಕೊರೊನಾ ಮಹಾಮಾರಿಯನ್ನು ನಿಯಂತ್ರಿಸುವ ಕಾರ್ಯಪಡೆಯ ಅಧ್ಯಕ್ಷರು ಎಂಬುದನ್ನು ಮರೆತು ಕೇವಲ ತಾವು ಪ್ರತಿನಿಧಿಸುವ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರವನ್ನು ಗಮನದಲ್ಲಿಟ್ಟುಕೊಂಡು ಡಾ. ಸಿ. ಎನ್. ಅಶ್ವತ್ಥನಾರಾಯಣ ಫೌಂಡೇಷನ್ ಹೆಸರಿನಲ್ಲಿ ತಮ್ಮ ಬೆಂಬಲಿಗರು ಇರುವ ಪ್ರದೇಶಗಳಲ್ಲಿ ಮಾತ್ರ ಟೋಕನ್ ಗಳನ್ನು ಮೊದಲೇ ವಿತರಿಸಿ ಲಸಿಕೆಯನ್ನು ಹಾಕುತ್ತಿರುವುದು ಎಲ್ಲೆಡೆ ಕಂಡುಬರುತ್ತಿದೆ.

ಫ್ರಂಟ್ ಲೈನ್ ವಾರಿಯರ್ಸ್ ಗಳ ನೆಪದಲ್ಲಿ ಆದ್ಯತೆಯ ನಿಯಮ ಹಾಗೂ ಕಂಪನಿಗಳ ಸಾಮಾಜಿಕ ಜವಾಬ್ದಾರಿಯ ನಿಧಿ ಅಡಿಯಲ್ಲಿ ದುರ್ಬಳಕೆ ಮಾಡಿಕೊಂಡು ಈ ರೀತಿಯ ಲಸಿಕೆ ವಿತರಣೆಯನ್ನು ಬಿಜೆಪಿ ತನ್ನ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಬಳಸಿಕೊಳ್ಳುತ್ತಿದೆ. ನಗರದ 27 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಈ ಅನೈತಿಕ ಚಟುವಟಿಕೆಗಳು ಅವ್ಯಾಹತವಾಗಿ ನಡೆಯುತ್ತಿದ್ದು ಇದಕ್ಕೆ ಉಪ ಮುಖ್ಯಮಂತ್ರಿಗಳು ತಮ್ಮ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡು ಸಾಕಷ್ಟು ಇಂಬು ನೀಡುತ್ತಿದ್ದಾರೆ. ಜನತೆ ಬೆಳ್ಳಂಬೆಳಗ್ಗೆ 8 ಗಂಟೆಗೆ ಲಸಿಕಾ ಕೇಂದ್ರಗಳಿಗೆ ಹೋದರೂ ಯಾರಿಗೂ ಲಸಿಕೆ ಸಿಗುವುದಿಲ್ಲ. ಕೇವಲ ಟೋಕನ್ ಹೊಂದಿರುವವರಿಗೆ ಮಾತ್ರ ಲಸಿಕೆ ನೀಡುತ್ತಿರುವದು ಎಲ್ಲಾ ಲಸಿಕಾ ಕೇಂದ್ರಗಳಲ್ಲಿ ಕಾಣಸಿಗುತ್ತದೆ.

ಈಗಾಗಲೇ ಆಮ್ ಆದ್ಮಿ ಪಕ್ಷವು ಈ ರೀತಿಯ ಲಸಿಕೆ ವಿತರಣೆ ಯಲ್ಲಿನ ಬಿಜೆಪಿಗರ ರಾಜಕಾರಣ, ಅಸಮಾನತೆ ತಾರತಮ್ಯ ಧೋರಣೆಯ ವಿರುದ್ಧ ವಿರುದ್ಧ ಸರ್ ಸಿ.ವಿ.ರಾಮನ್ ನಗರ, ಜಯನಗರ, ಬಸವನಗುಡಿ, ಬೊಮ್ಮನಹಳ್ಳಿ, ಗೋವಿಂದರಾಜನಗರ ಮುಂತಾದ ವಿಧಾನಸಭಾ ಕ್ಷೇತ್ರಗಳಲ್ಲಿ ಜನಸಾಮಾನ್ಯರೊಂದಿಗೆ ಜೊತೆಗೂಡಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ತಮ್ಮ ಅಸಮಾಧಾನವನ್ನು, ಪ್ರತಿಭಟನೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಜನಸಾಮಾನ್ಯನಿಗೆ ನ್ಯಾಯೋಚಿತವಾಗಿ ಸಿಗಬೇಕಿದ್ದ ಲಸಿಕೆಗಳು ಇಂದು ಕೇವಲ ರಾಜಕೀಯ ಉದ್ದೇಶಗಳಿಗಾಗಿ ಸಿಗದೆ ವಂಚಿತರಾಗುತ್ತಿದ್ದಾರೆ. ಈ ಗೊಂದಲಗಳಿಗೆ ನೇರ ವಾಗಿ ಕಾರಣಕರ್ತರಾಗಿರುವ ಕಾರ್ಯಪಡೆ ಅಧ್ಯಕ್ಷರನ್ನು ಈ ಕೂಡಲೇ ವಜಾಗೊಳಿಸಬೇಕೆಂದು ರಾಜ್ಯಪಾಲರಲ್ಲಿ ದೂರನ್ನು ಸಹ ನೀಡಲಾಗುವುದೆಂದು ಎಂದು ಮೋಹನ್ ದಾಸರಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ರಾಜ್ಯ ಹಿಂದುಳಿದ ವರ್ಗಗಳ ವಿಭಾಗದ ಉಪಾಧ್ಯಕ್ಷ ರಾಜಶೇಖರ ದೊಡ್ಡಣ್ಣ ಹಾಗೂ ಬೆಂಗಳೂರು ನಗರ ಎಸ್‍ಸಿ, ಎಸ್ ಟಿ ವಿಭಾಗದ ಅಧ್ಯಕ್ಷ ಜಯಕುಮಾರ್ ಅವರು ಸಹ ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *