ಕೊರೊನಾ ತಗುಲಿ ಪ್ರಾಣ ಬೇಕಾದರೂ ಹೋಗಲಿ ಸಿಎಂ ಮನೆ ಮುಂದೆ ಪ್ರತಿಭಟನೆ ಮಾಡ್ತೀನಿ: ರೇವಣ್ಣ

Public TV
1 Min Read

– ದುಡ್ಡಿಗಾಗಿ ಬಿಜೆಪಿ ಸರ್ಕಾರ ಏನು ಬೇಕಾದ್ರೂ ಮಾಡುತ್ತೆ

ಹಾಸನ: ಕೊರೊನಾ ನಿರ್ವಹಣೆಯಲ್ಲಿ ಜಿಲ್ಲಾಡಳಿತ ಹಾಗೂ ಸರ್ಕಾರದ ವೈಫಲ್ಯವನ್ನು ಖಂಡಿಸಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ನಾಳೆ ಬೆಳಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮನೆಯ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತಾನಾಡಿದ ಅವರು, ನಾಳೆ ಬೆಳಗ್ಗೆ 9 ರಿಂದ 10 ಗಂಟೆಯವರೆಗೂ ಧರಣಿ ನಡೆಸುತ್ತೇನೆ, 144 ಸೆಕ್ಷನ್ ಇದೆ ಹಾಗಾಗಿ ನಾನೋಬ್ಬನೇ ಧರಣಿ ಕೂರುತ್ತೇನೆ. ಅರೆಸ್ಟ್ ಮಾಡೋದಾದರೆ ಮಾಡಲಿ, ಕೊರೊನಾ ಬರೋದಾದರೆ ಬರಲಿ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ದುಡ್ಡಿಗಾಗಿ ಬಿಜೆಪಿ ಸರ್ಕಾರ ಏನು ಬೇಕಾದ್ರೂ ಮಾಡುತ್ತೆ. ಹಿಮ್ಸ್ ಆಸ್ಪತ್ರೆಯ ಡಿಎಚ್‍ಒ ಅನ್ನು ಸರ್ಕಾರ ವರ್ಗಾವಣೆ ಮಾಡಿದೆ. ಕೋವಿಡ್ ನಿರ್ವಹಣೆಯಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ನಮ್ಮ ಜನರನ್ನು ಉಳಿಸಿಕೊಳ್ಳಲಾಗದಿದ್ದರೆ ನಾವೇಕೆ ಬದುಕಿರಬೇಕು, ನನ್ನ ಪ್ರಾಣ ಬೇಕಾದ್ರೂ ಹೋಗಲಿ, ನನಗೆ ಕೊರೊನಾದ್ರೂ ಬರಲಿ ನಾನು ಬೆಳಗ್ಗೆ ಸಿಎಂ ಮನೆ ಮುಂದೆ ಹೋಗಿ ಕೂರುತ್ತೇನೆ ಎಂದರು.

ಜಿಲ್ಲೆಯಲ್ಲಿ ಪರಿಸ್ಥಿತಿ ಕೈ ಮೀರುತ್ತಿದೆ, ಒಂದೇ ಒಂದು ರೆಮ್‍ಡಿಸಿವಿರ್ ಇಂಜೆಕ್ಷನ್ ಸಿಗ್ತಿಲ್ಲ, ರಾಜ್ಯದ ಪರಿಸ್ಥಿತಿಯೂ ಹದಗೆಟ್ಟು ಹೋಗಿದೆ. ಉಳ್ಳವರಿಗೆ ಮಾತ್ರ ಚಿಕಿತ್ಸೆ ಸಿಗುವಂತಾಗಿದೆ, ಸರ್ಕಾರದ ವಿಫಲತೆಯನ್ನು ಖಂಡಿಸಿ ನಾನು ಏಕಾಂಗಿಯಾಗಿ ಧರಣಿ ನಡೆಸುತ್ತೇನೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಬಾರಿ ನಮ್ಮಪ್ಪ ಹೇಳಿದರೂ ನಾನು ಕೇಳೋದಿಲ್ಲ, ಪ್ರತಿಭಟನೆ ಮಾಡೇ ಮಾಡುತ್ತೇನೆ. ತರಕಾರಿ ಮಾರುವವನಿಗೆ ದಿಢೀರ್ ತಳ್ಳೋ ಗಾಡಿಯಲ್ಲಿ ಮಾಡಿ ಎಂದಿದ್ದಾರೆ. ದಿಢೀರ್ ಆದೇಶ ಹೊರಡಿಸಿದರೆ ಅವರು ತಳ್ಳೋಗಾಡಿ ಎಲ್ಲಿಂದ ತರುತ್ತಾರೆ. ಜನರನ್ನು ಸಂದಿಗ್ಧ ಪರಿಸ್ಥಿತಿಗೆ ಸರ್ಕಾರ ತಳ್ಳುತ್ತಿದೆ ಎಂದು ಸರ್ಕಾರದ ಕೋವಿಡ್ ಮಾರ್ಗಸೂಚಿಯ ವಿರುದ್ಧ ರೇವಣ್ಣ ಕಿಡಿಕಾರಿದರು.

Share This Article
Leave a Comment

Leave a Reply

Your email address will not be published. Required fields are marked *