ಮಂಗಳೂರು: ಕೊರೊನಾ ಪ್ರಕರಣಗಳು ತೀವ್ರಗತಿಯಲ್ಲಿ ಹೆಚ್ಚುತ್ತಿರುವುದರಿಂದ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದ್ದು, ವಿವಾಹ ಸಮಾರಂಭಗಳಿಗೆ ಸಹ ಕೇವಲ 50 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಹೆಚ್ಚು ಜನ ಸರಳವಾಗಿ ವಿವಾಹವಾಗುತ್ತಿದ್ದು, ಅದೇ ರೀತಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಇಂದು ಬರೋಬ್ಬರಿ 47 ಜೋಡಿಗಳ ಸರಳ ವಿವಾಹವಾಗಿದೆ.
ಕೊರೊನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಜಾರಿ ಮಾಡಿರುವ ಹಿನ್ನೆಲೆ ಸರಳ ವಿವಾಹ ನಡೆಸಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 47 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿವೆ. ಕೋವಿಡ್ ನಿಯಮ ಪಾಲಿಸಿ ವಿವಾಹಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅದರಂತೆ ಒಂದು ಮದುವೆಗೆ ಅರ್ಚಕರು, ಫೊಟೋಗ್ರಾಫರ್ ಸೇರಿ ಕೇವಲ 10 ಜನರಿಗೆ ಅವಕಾಶ ಕಲ್ಪಿಸಲಾಗಿತ್ತು.
ದೇವಳದ ಸರಸ್ವತಿ ಸದನ, ಮಹಾಲಕ್ಷ್ಮಿ ಸದನ, ಅನ್ನ ಛತ್ರದಲ್ಲಿ ವಿವಾಹಗಳನ್ನು ನಡೆಸಲಾಗಿದೆ. ದೇವಸ್ಥಾನದ ಹೊರಭಾಗದಿಂದಲೇ ದೇವಿಯ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ವಿವಾಹಕ್ಕಾಗಿ 90 ಜೋಡಿಗಳು ಮೊದಲೇ ಬುಕ್ಕಿಂಗ್ ಆಗಿದ್ದವು. ಇಂದು 47 ಜೋಡಿಗಳ ಮದುವೆ ಕಾರ್ಯಕ್ರಮ ನೆರವೇರಿದೆ.