ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಕೊರೊನಾ ಪೀಡಿತರ ಶವ ಸಾಗಾಟ, ಅಂತ್ಯಸಂಸ್ಕಾರ ಸಂಪೂರ್ಣ ಉಚಿತ

Public TV
2 Min Read

– ಖಾಸಗಿ ಆಸ್ಪತ್ರೆಗಳಿಗೆ ಸುಧಾಕರ್ ಎಚ್ಚರಿಕೆ
– ಹಣಕ್ಕೆ ಬೇಡಿಕೆ ಇಟ್ಟರೆ ಜೈಲು ಶಿಕ್ಷೆ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸೋಂಕಿತರ ಅಂತ್ಯಕ್ರಿಯೆಗೆ 35 ಸಾವಿರ, ಶವಪೂಜೆಗೆ 16,000 ತೆಗೆದುಕೊಳ್ಳಲಾಗಿದ್ದು, ಈ ಬಗ್ಗೆ ಮಧ್ಯಾಹ್ನದಿಂದಲೇ ನಿಂದಲೇ ಪಬ್ಲಿಕ್ ಟಿವಿ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಇದೀಗ ಈ ಸುದ್ದಿ ಇಂಪ್ಯಾಕ್ಟ್ ಆಗಿದ್ದು, ಕೊರೊನಾ ಪೀಡತರ ಶವ ಸಾಗಾಟ ಹಾಗೂ ಅಂತ್ಯಸಂಸ್ಕಾರ ಸಂಪೂರ್ಣ ಉಚಿತ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಗೌರವ ಗುಪ್ತಾ ಸ್ಪಷ್ಟಪಡಿಸಿದ್ದಾರೆ.

ಈ ಸಂಬಂಧ ನಗರದಲ್ಲಿ ಮಾತನಾಡುತ್ತಾ ಪಬ್ಲಿಕ್ ಟಿವಿ ವರದಿ ಪ್ರಸ್ತಾಪಿಸಿದ ಅವರು, 7 ಸ್ಮಶಾನಗಳನ್ನು ಶವ ಸಂಸ್ಕಾರಕ್ಕೆ ಮೀಸಲಿಡಲಾಗಿದೆ. ಸ್ಮಶಾನಕ್ಕೆ ಮೃತದೇಹಗಳನ್ನು ಅಂಬುಲೆನ್ಸ್ ನಲ್ಲಿ ಉಚಿತವಾಗಿ ಸಾಗಿಸಬೇಕು. ಒಂದು ವೇಳೆ ಹಣಕ್ಕೆ ಡಿಮ್ಯಾಂಡ್ ಮಾಡಿದ್ರೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಖಾಸಗಿ ಆಂಬುಲೆನ್ಸ್ ಗಳಿಗೆ ಎಚ್ಚರಿಕೆ ನೀಡಿದೆ.

 ಹೆಣ ಸುಡಲು ಕ್ಯೂ ನಿಲ್ಲಬೇಕಿದ್ದಲ್ಲದೆ ಶವವನ್ನು ಸಾಗಿಸಲು ಅಂಬುಲೆನ್ಸ್ ಚಾಲಕರು ಸಾವಿರಗಟ್ಟಲೆ ಹಣ ಪೀಕುತ್ತಿದ್ದರು. ಕೊರೊನಾ ಅಂತ್ಯಕ್ರಿಯೆ ಪ್ಯಾಕೇಜ್ 35,000 ರೂಪಾಯಿ, ಆಸ್ಪತ್ರೆಯಿಂದ ಚಿತಾಗಾರಕ್ಕೆ 13,000 ರೂ. ಸಂಬಂಧಿಕರಿಗೆ ಪಿಪಿಇ ಕಿಟ್ ನೀಡಲು ತಲಾ 1 ಸಾವಿರ, ಶವಪೂಜೆ ಪ್ರಕ್ರಿಯೆಗೆ 10,000 ರೂಪಾಯಿ ಹಾಗೂ ಶವಸಂಸ್ಕಾರ ಮಾಡಲು 6,500 ರೂಪಾಯಿ ಕೊಡಬೇಕಾಗಿತ್ತು. ಈ ಸಂಬಂಧ ಪಬ್ಲಿಕ್ ಟಿವಿಯಲ್ಲಿ ನಿರಂತರವಾಗಿ ಸುದ್ದಿ ಬಿತ್ತರಿಸಲಾಗಿತ್ತು. ಪಬ್ಲಿಕ್ ಟಿವಿ ವರದಿಯಿಂದ ಎಚ್ಚೆತ್ತ ಬಿಬಿಎಂಪಿ ಕೂಡಲೇ ಖಾಸಗಿ ಅಂಬುಲೆನ್ಸ್ ಅವರ ಕೊರೊನಾ ಡೆತ್ ಪ್ಯಾಕೆಜ್ ಗೆ ಬ್ರೇಕ್ ಹಾಕಿದೆ.

ಇತ್ತ ಆರೋಗ್ಯ ಸಚಿವ ಸುಧಾಕರ್ ಮಾತನಾಡಿ, ಖಾಸಗಿ ಅಂಬುಲೆನ್ಸ್ ಗಳ ವಿರುದ್ಧ ಪೊಲೀಸ್ ಕಮೀಷನರ್ ಗೆ ಹೇಳಿ ಕ್ರಮ ತೆಗೆದುಕೊಳ್ಳುತ್ತೇವೆ. ಖಾಸಗಿ ಅಂಬುಲೆನ್ಸ್ ದುಡ್ಡು ವಸೂಲಿ ಮಾಡಿದರೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ. ಹೆಣದ ಮೇಲೆ ಶೋಷಣೆ ಸರಿಯಲ್ಲ. ಖಂಡಿತವಾಗಿ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕ್ರಮ ತಗೋತೀವಿ. ಪೊಲೀಸರಿಗೆ ದೂರು ನೀಡಬೇಕು. ಯಾರು ಕೂಡ ಇಂತಹ ಕೆಲಸ ಮಾಡಬಾರದು. ಕೋವಿಡ್‍ನಂತ ಕೆಟ್ಟ ಸಂದರ್ಭ ಇದಾಗಿದ್ದು, ಈ ಸಮಯದಲ್ಲಿ ಅಮಾನವೀಯ ನಡವಳಿಕೆ ಸರಿಯಲ್ಲ ಎಂದರು.

ಖಾಸಗಿ ಆಸ್ಪತ್ರೆಗಳಿಗೆ ಸಿಎಂ ಮತ್ತು ನಾನು ಪದೇ ಪದೇ ಮನವಿ ಮಾಡ್ಕೊಂಡಿದ್ದೀವಿ. ಮನವಿ ಮಾಡ್ಕೊಂಡ್ರೂ ಬಹಳಷ್ಟು ಖಾಸಗಿ ಆಸ್ಪತ್ರೆಗಳು ಶೇ.15, ಶೇ.20 ರಷ್ಟು ಮಾತ್ರ ಹಾಸಿಗೆ ಬಿಟ್ಟು ಕೊಟ್ಟಿದ್ದಾರೆ. ಕೂಡಲೇ ನಿಗದಿ ಪಡಿಸಿದ ಬೆಡ್ ಗಳನ್ನು ನೀಡಲೇಬೇಕು. ಇಲ್ಲದಿದ್ರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಕಳೆದ ಬಾರಿಯಂತೆ ಕ್ರಮ ತಗೋತೇವೆ ಎಂದು ಇದೇ ವೇಳೆ ಸಚಿವರು ಖಾಸಗಿ ಆಸ್ಪತ್ರೆಗಳಿಗೆ ನೇರ ಎಚ್ಚರಿಕೆ ನಿಡಿದರು.

ಖಾಸಗಿ ಆಸ್ಪತ್ರೆಗಳು ತಕ್ಷಣ ಕೋವಿಡ್ ರೋಗಿಗಳ ದಾಖಲಾತಿ ಮಾಡಿಕೊಳ್ಳಲಿ. ಕೋವಿಡೇತರ ರೋಗಿಗಳನ್ನು ಶೀಘ್ರವೇ ಡಿಸ್ಚಾರ್ಜ್ ಮಾಡಿ. ಆ ಹಾಸಿಗೆಗಳನ್ನು ಗಂಭೀರವಾಗಿ ಕೋವಿಡ್ ಎದುರಿಸುತ್ತಿರುವವರಿಗೆ ನೀಡಿ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *