ಹೆದ್ದಾರಿಯಲ್ಲಿ ದರೋಡೆಗೆ ಯತ್ನಿಸಿದ್ದ ಡಕಾಯಿತರು ರೆಡ್ ಹ್ಯಾಂಡಾಗಿ ಪೊಲೀಸ್ ಬಲೆಗೆ

Public TV
1 Min Read

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾಗೂ ಮಂಗಳೂರು ನಗರದಲ್ಲಿ ಹೆದ್ದಾರಿ ದರೋಡೆಗೆ ಸಿದ್ಧತೆ ಮಾಡಿಕೊಂಡಿದ್ದ ಟೀಂನ್ನು ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಉಳಾಯಿಬೆಟ್ಟು ಗ್ರಾಮದ ಪರಾರಿ ಎಂಬಲ್ಲಿ ಇನ್ನೋವಾ ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಮಾರಕಾಯುಧಗಳೊಂದಿಗೆ ನಿಂತಿದ್ದ ಎಂಟು ಜನರ ತಂಡವನ್ನು ಬಂಧಿಸಲಾಗಿದೆ. ಬಂಧಿತರನ್ನು ತೌಸಿರ್, ಮೊಹಮ್ಮದ್ ಅರಾಫತ್, ತಸ್ಲಿಂ, ನಾಸೀರ್ ಹುಸೈನ್, ಮೊಹಮ್ಮದ್ ರಫೀಕ್, ಮೊಹಮ್ಮದ್ ಸಫ್ವಾನ್, ಮೊಹಮ್ಮದ್ ಜೈನುದ್ದೀನ್, ಉನೈಝ್ ಎಂದು ಗುರುತಿಸಲಾಗಿದ್ದು, ಬಂಧಿತರಿಂದ ಎರಡು ತಲವಾರು,ಎರಡು ಚೂರಿ, ಒಂದು ಡ್ರಾಗ್ ಚೂರಿ, ಎಂಟು ಮೊಬೈಲ್ ಫೋನ್, ಮಂಕಿ ಕ್ಯಾಪ್, ಖಾರದ ಪುಡಿಯ ಪ್ಯಾಕೆಟ್, ಕೃತ್ಯಕ್ಕೆ ಬಳಸಿದ ಇನ್ನೋವಾ ಕಾರು ವಶಪಡಿಸಿಕೊಳ್ಳಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಎನ್.ಶಶಿಕುಮಾರ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

ಟಿ.ಬಿ.ಗ್ಯಾಂಗ್ ಕಟ್ಟಿಕೊಂಡಿದ್ದ ಡಕಾಯಿತರು

ಈ ಗ್ಯಾಂಗ್‍ನ್ನು ತೌಸಿರ್ ಮತ್ತು ವಿದೇಶದಲ್ಲಿರುವ ರೌಡಿ ಬಾತಿಶ್ ನಿರ್ವಹಣೆ ಮಾಡುತ್ತಿದ್ದ ಎಂದು ಆರೋಪಿಗಳು ವಿಚಾರಣೆ ಸಂದರ್ಭ ಬಾಯಿಬಿಟ್ಟಿದ್ದಾರೆ. ಈ ಗ್ಯಾಂಗ್ ಹಣಕಾಸಿನ ಸೆಟ್ಲ್‍ಮೆಂಟ್ ವ್ಯವಹಾರಗಳನ್ನು ನಡೆಸುತಿತ್ತು. ಇದಕ್ಕಾಗಿ ಟಿ.ಬಿ ಎಂಬ ವಾಟ್ಸಪ್ ಗ್ರೂಪ್‍ನ್ನು ಇವರು ಕ್ರಿಯೇಟ್ ಮಾಡಿಕೊಂಡಿದ್ದರು. ಇದರಂತೆ ಬೆಂಗಳೂರಿನಲ್ಲಿರುವ ಝೀಯದ್ ಎಂಬವನಿಂದ 12 ಲಕ್ಷ ಹಣವನ್ನು ವಸೂಲಿ ಮಾಡುವುದಕ್ಕೆ ಈ ಗ್ಯಾಂಗ್ ಬೆಂಗಳೂರಿಗೆ ತೆರಳಿತ್ತು. ಆದರೆ ಝೀಯದ್ ಸಿಗದೇ ಇದ್ದುದರಿಂದ ಬರಿಗೈಯಲ್ಲಿ ವಾಪಸಾಗಿ, ಇಂದು ಮುಂಜಾನೆ ಹೆದ್ದಾರಿ ದರೋಡೆಗೆ ಸ್ಕೆಚ್ ಹಾಕಿ ನಿಂತಿತ್ತು. ಈ ಸಂದರ್ಭ ನೈಟ್ ಕರ್ಫ್ಯೂ ಸ್ಪೆಷಲ್ ರೌಂಡ್ಸ್‍ನಲ್ಲಿದ್ದ ಸಿಸಿಬಿ ಪೊಲೀಸರು ಗ್ರಾಮಾಂತರ ಪೊಲೀಸರ ಸಹಾಯದಿಂದ ಗ್ಯಾಂಗ್‍ನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಮಂಗಳೂರು ಸಿಸಿಬಿ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ.

ಬಂಧಿತರಲ್ಲಿ ತೌಸಿರ್, ತಸ್ಲಿಂ ಮೇಲೆ ಈ ಹಿಂದೆಯೇ ಹಲವು ಪ್ರಕರಣ ದಾಖಲಾಗಿದ್ದು ಈ ಟೀಂ ಹಲವು ಅಪರಾಧ ಚಟುವಟಿಕೆ ನಡೆಸಿರುವ ಮಾಹಿತಿಯಿದೆ. ಹೀಗಾಗಿ ಪೊಲೀಸರು ಆರೋಪಿಗಳ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದು ಇನ್ನಷ್ಟು ಮಾಹಿತಿಗಳು ಹೊರ ಬರುವ ಸಾಧ್ಯತೆಯಿದೆ.

Share This Article
Leave a Comment

Leave a Reply

Your email address will not be published. Required fields are marked *