ಉಡುಪಿಯಲ್ಲಿ 14 ದಿನ ಶ್ರೀರಾಮ- ಹನುಮದುತ್ಸವ

Public TV
2 Min Read

– ಪರ್ಯಾಯ ಅದಮಾರು ಸ್ವಾಮೀಜಿ ಮಾಹಿತಿ

ಉಡುಪಿ: ಅಯೋಧ್ಯಾ ರಾಮ ಜನ್ಮಭೂಮಿಯಲ್ಲಿ ಭವ್ಯ ಮಂದಿರ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಎಲ್ಲೆಡೆ ರಾಮ ಮಂದಿರವೇ ಸುದ್ದಿಯಲ್ಲಿರುವಾಗ ಶ್ರೀಕೃಷ್ಣನ ನಾಡು ಉಡುಪಿಯಲ್ಲಿ ಶ್ರೀರಾಮ ಹನುಮದುತ್ಸವಕ್ಕೆ ಸಿದ್ಧತೆ ನಡೆದಿದೆ.

ಉಡುಪಿ ಶ್ರೀಕೃಷ್ಣಮಠದಲ್ಲಿ ಶ್ರೀರಾಮ-ಹನುಮದುತ್ಸವ ಕಾರ್ಯಕ್ರಮ ಏಪ್ರಿಲ್ 13ರಿಂದ 27ರವರೆಗೆ ಆಯೋಜಿಸಲಾಗಿದ್ದು, ಶ್ರೀರಾಮ ಜನ್ಮಭೂಮಿ ಸಂಬಂಧಿಸಿ ಕೆಲಸ ಮಾಡಿದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.

ಪರ್ಯಾಯ ಮಠಾಧೀಶ ಶ್ರೀಈಶಪ್ರಿಯತೀರ್ಥ ಸ್ವಾಮೀಜಿಗಳು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಏ. 13ರಂದು ಸಂಜೆ 4.30ಕ್ಕೆ ರಾಜಾಂಗಣದಲ್ಲಿ ರಾಮಾಯಣ ಪ್ರಪಂಚ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಬಳಿಕ ಪ್ರತಿದಿನ ರಾಮಾಯಣದ ಪಾತ್ರಗಳು ಮತ್ತು ಪುಸ್ತಕಗಳ ಪರಿಚಯ ನಡೆಯಲಿದೆ. ಅದೇ ದಿನ ಡಾಕ್ಟರೇಟ್ ಪುರಸ್ಕೃತ ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿಯವರಿಗೆ ಗೌರವ ಸಮರ್ಪಣೆ ಜರಗಲಿದೆ ಎಂದು ಮಾಹಿತಿ ನೀಡಿದರು.

ಅಯೋಧ್ಯಾದಲ್ಲಿರುವ ಶ್ರೀರಾಮ ಜನ್ಮಭೂಮಿಯೇ ಎಂದು ಉತ್ಖನನದ ಮೂಲಕ ಸಾಬೀತುಪಡಿಸಿದ ಪುರಾತತ್ತ್ವಜ್ಞ ಡಾ. ಕೆ.ಕೆ. ಮುಹಮ್ಮದ್ ಏ. 15ರಂದು ಸಂಜೆ 5ಕ್ಕೆ ‘ಅಯೋಧ್ಯಾದಲ್ಲಿ ಉತ್ಖನನಗಳು ಮತ್ತು ಪರಿಶೋಧನೆಗಳು’ ವಿಚಾರ ಮಂಡಿಸಲಿದ್ದಾರೆ. ಏ.16ರಂದು 5ಗಂಟೆಗೆ ‘ಚಂಬಲ್ ಕಣಿವೆಯಲ್ಲಿನ ದೇವಾಲಯಗಳ ಸಂರಕ್ಷಣೆಯಲ್ಲಿ ಡಕಾಯಿತರ ಪಾತ್ರ’ ಕುರಿತು ಉಪನ್ಯಾಸ ನೀಡಲಿದ್ದಾರೆ. ಬಳಿಕ ಉಪನ್ಯಾಸಕರೊಂದಿಗೆ ಸಂವಾದ ಹಾಗೂ ಪುರಸ್ಕಾರ ಕಾರ್ಯಕ್ರಮವಿದೆ. ವಕೀಲ ಕೆ. ಪರಾಶರನ್‍ಗೆ ಪುರಸ್ಕಾರ ಶ್ರೀರಾಮಜನ್ಮಭೂಮಿ ವ್ಯಾಜ್ಯಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‍ನಲ್ಲಿ ಸುದೀರ್ಘ ಕಾಲ ಪರಿಣಾಮಕಾರಿಯಾಗಿ ವಾದ ಮಂಡಿಸಿದ ಹಿರಿಯ ವಕೀಲ ಕೆ. ಪರಾಶರನ್ (ಮಾಜಿ ಅಟಾರ್ನಿ ಜನರಲ್ ಆಫ್ ಇಂಡಿಯಾ) ಅವರನ್ನು ಏ. 18ರಂದು ಸಂಜೆ 6ಗಂಟೆಗೆ ಪುರಸ್ಕರಿಸಲಾಗುತ್ತದೆ.

ಏ. 19ರಂದು ಸಂಜೆ 4ಕ್ಕೆ ಅಯೋಧ್ಯಾ ರಾಮ ಮಂದಿರದ ಶಂಕುಸ್ಥಾಪನೆ ನೆರವೇರಿಸಿದ ದೈವಜ್ಞ ಪುರೋಹಿತ ವಿದ್ವಾನ್ ಗಂಗಾಧರ ಪಾಠಕ್ ರಾಮಮಂತ್ರದ ಮಹತ್ವ ವಿವರಿಸಲಿದ್ದಾರೆ. ರಾಮತಾರಕ ಮಂತ್ರ ಜಪ-ಯಾಗ ಅಯೋಧ್ಯಾದಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ನಿರ್ವಿಘ್ನ ಸಿದ್ಧಿಗಾಗಿ ಏ. 21ರಂದು ರಾಮತಾರಕ ಮಂತ್ರಜಪ ಮತ್ತು ಯಾಗವನ್ನು ಏರ್ಪಡಿಸಲಾಗಿದೆ. ಬೆಳಗ್ಗೆ 8ಗಂಟೆಯಿಂದ 11ರವರೆಗೆ ರಾಜಾಂಗಣದಲ್ಲಿ ಕಾರ್ಯಕ್ರಮ ಜರಗಲಿದೆ. ಬಳಿಕ ಸಂಜೆ 5ಗಂಟೆಗೆ ರಾಜ್ಯಸಭಾ ಸದಸ್ಯ ಡಾ. ಸುಬ್ರಮಣಿಯನ್ ಸ್ವಾಮಿ `ನ್ಯಾಯ ರಾಮಾಯಣ’ ಕುರಿತು ಉಪನ್ಯಾಸ ನೀಡಲಿದ್ದಾರೆ. ನಂತರ ಅವರನ್ನು ಪುರಸ್ಕರಿಸಲಾಗುತ್ತದೆ.

ಅಟ್ಲಾಂಟಾದ ಸಂಶೋಧಕ ಡಾ. ನೀಲೇಶ್ ನೀಲಕಂಠ ಓಕ್ ಏ. 22ರಂದು 4.50ಕ್ಕೆ ರಾಮಾಯಣ ಪಥ- ‘ಸುಗ್ರೀವ ಪರ್ಯಟನೆ’ ಹಾಗೂ 23ರಂದು ‘ಅಯೋಧ್ಯಾದಿಂದ ಮಿಥಿಲೆಗೆ – ಅಯೋಧ್ಯಾದಿಂದ ಲಂಕೆಗೆ’ ವಿಚಾರ ಮಂಡಿಸಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *