ಚಲಿಸುತ್ತಿದ್ದ ಬಸ್ಸಿನಿಂದ ಜಿಗಿದು ಮಾಜಿ ಸೈನಿಕ ಆತ್ಮಹತ್ಯೆ

Public TV
1 Min Read

ಚಿಕ್ಕೋಡಿ(ಬೆಳಗಾವಿ): ಮಾಜಿ ಸೈನಿಕರೊಬ್ಬರು ಚಲಿಸುತ್ತಿದ್ದ ಸಾರಿಗೆ ಬಸ್ಸಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗೋಟುರ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ನಡೆದಿದೆ.

ಮೃತ ವ್ಯಕ್ತಿ ಗೋಪಿನಾಥ್ ಜೋತಿರಾಮ ಜಾನವಾಡೆ (27) ಆಗಿದ್ದು, ಇವರು ನಿಪ್ಪಾಣಿ ತಾಲೂಕಿನ ಹಂಚಿನಾಳ (ಕೆಎಸ್ )ನಿವಾಸಿ. ಬೆಳಗಾವಿಯಿಂದ ಸಂಕೇಶ್ವರ ಮಾರ್ಗವಾಗಿ ನಿಪ್ಪಾಣಿ ಕಡೆ ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಗೋಟುರ ಗ್ರಾಮ ಸಮೀಪಿಸುತ್ತಿದ್ದಂತೆ ಏಕಾಏಕಿ ಬಸ್ಸಿನ ಹಿಂಬದಿಯ ಬಾಗಿಲು ತೆರೆದು ಜಿಗಿದಿದ್ದಾರೆ. ಇದೇ ವೇಳೆ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಇನ್ನೊಂದು ಸಾರಿಗೆ ಬಸ್ಸಿನ ಟೈಯರ್ ಅಡಿ ಸಿಲುಕಿ ತಲೆಗೆ ತೀವ್ರವಾದ ಏಟು ಬಿದ್ದಿದೆ. ಇದರಿಂದ ಗಂಭೀರ ಗಾಯಗೊಂಡ ಗೋಪಿನಾಥ್ ಜಾನವಾಡೆ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಮೃತ ಗೋಪಿನಾಥ್ ಜಾನವಾಡೆ ಮಾನಸಿಕವಾಗಿ ಅಸ್ವಸ್ಥವಾಗಿದ್ದರು ಎಂದು ತಿಳಿದುಬಂದಿದೆ. ತಂದೆ ಇವರನ್ನು ಬೆಳಗಾವಿಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿ ಹಿಂದುರುಗಿ ಬರುವಾಗ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದಲೇ ಜಿಗಿದಿದ್ದಾರೆ. ಮೃತ ಗೋಪಿನಾಥ್ ಜಾನವಾಡ ಮೂರು ವರ್ಷದ ಹಿಂದೆ ಭಾರತೀಯ ಸೇನೆಯಲ್ಲಿ ಸೇವೆಯಲ್ಲಿದ್ದು, ಮಾನಸಿಕ ಅಸ್ವಸ್ಥಗೊಂಡ ಬಳಿಕ ಸೇನೆಯಿಂದ ವಜಾ ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ.

ಈ ಕುರಿತು ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *