ಪಬ್ಲಿಕ್ ಟಿವಿ ಇಂಪ್ಯಾಕ್ಟ್ – 7 ದಶಕದ ಹಳ್ಳದ ಬದುಕಿಗೆ ಮುಕ್ತಿ, ಸೇತುವೆ ನಿರ್ಮಾಣದ ಸರ್ವೇ ಕಾರ್ಯ ಶುರು

Public TV
2 Min Read

ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಕಣತಿ ಸಮೀಪದ ಐದಳ್ಳಿ ಗ್ರಾಮದ ಜನ ಕಳೆದ ಏಳೆಂಟು ದಶಕಗಳಿಂದ ಐದಳ್ಳಿ ಗ್ರಾಮದಲ್ಲಿ ಹರಿಯೋ ಆನೆ ಬಿದ್ದ ಹಳ್ಳದ ಮಾರ್ಗವೇ ಗತಿಯಾಗಿತ್ತು. ಇಲ್ಲಿನ ಜನರು ನಿತ್ಯ ಸಂಚಾರ ಮಾಡಲು ಪಡುತ್ತಿದ್ದ ಕಷ್ಟವನ್ನು ಹಲವು ಬಾರಿ ಸರ್ಕಾರದ ಮುಂದಿಟ್ಟರೂ ಪರಿಹಾರ ಸಿಕ್ಕಿರಲಿಲ್ಲ. ಹಳ್ಳಿಗರ ಪರಿಸ್ಥಿತಿ ಅರಿತು ಪಬ್ಲಿಕ್ ಟಿವಿ ಸುದ್ದಿ ಬಿತ್ತರಿಸಿತ್ತು. ಇದೀಗ ಪಬ್ಲಿಕ್ ಟಿವಿ ವರದಿಯ ಫಲಶೃತಿಯ ಫಲವಾಗಿ ಕಳೆದ 70 ವರ್ಷದಿಂದ ನದಿ ಮಾರ್ಗವಾಗಿ ಓಡಾಡಿಕೊಂಡು ಜೀವನ ಸಾಗಿಸುತ್ತಿದ್ದ ಕುಗ್ರಾಮದ ಜನರಿಗೆ ಸೇತುವೆಯ ಭಾಗ್ಯ ಲಭಿಸಿದ್ದು, ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸೇತುವೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಈ ಊರಿನ ಜನರಿಗೆ ಹುಟ್ಟು-ಸಾವಿಗೂ ಇದೊಂದೆ ದಾರಿಯಾಗಿತ್ತು. ಮಕ್ಕಳು ಶಾಲೆಗೆ ಹೋಗಲು ಇದ್ದದ್ದು ಇದೊಂದೆ ಮಾರ್ಗವಾಗಿವಾಗಿತ್ತು. ಮಳೆಗಾಲದಲ್ಲಿ ಮಕ್ಕಳು ಎರಡ್ಮೂರು ತಿಂಗಳು ಶಾಲೆಗೆ ಹೋಗುತ್ತಿರಲಿಲ್ಲ. ಅನಿವಾರ್ಯವಾಗಿ ಐದಳ್ಳಿಯಿಂದ ಅರ್ಧ ಕಿ.ಮೀ. ದೂರದ ಕಣತಿ ಗ್ರಾಮಕ್ಕೆ ಬರಬೇಕೆಂದರೆ ಸುಮಾರು ಐದಾರು ಕಿ.ಮೀ. ಸುತ್ತಿ ಬರಬೇಕಿತ್ತು.

ಸ್ಥಳೀಯರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡುತ್ತಲೇ ಬಂದಿದ್ದರು. ಆದರೆ, ಮಳೆಗಾಲ ಮುಗಿಯಲಿ, ಬೇಸಿಗೆಯಲ್ಲಿ ಸೇತುವೆ ನಿರ್ಮಿಸಿ ಕೊಡುತ್ತೇವೆ ಎಂದು ಹೇಳುತ್ತಾ ಸರ್ಕಾರ ದಶಕಗಳನ್ನೇ ದೂಡಿತ್ತು. ಹಳ್ಳಿಗರ ಪರಿಸ್ಥಿತಿ ಅರಿತು ಪಬ್ಲಿಕ್ ಟಿವಿ ಸುದ್ದಿ ಬಿತ್ತರಿಸಿತ್ತು. ಇದೀಗ ಸ್ಥಳಕ್ಕೆ ಭೇಟಿ ನೀಡಿರುವ ಅಧಿಕಾರಿಗಳು ಸೇತುವೆ ನಿರ್ಮಾಣಕ್ಕೆ ಸರ್ವೇ ಮಾಡಿದ್ದಾರೆ. ಶಾಸಕರು ಕೂಡ 50 ಲಕ್ಷದಲ್ಲಿ ಸೇತುವೆ ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ. ಇದರಿಂದ ಹರ್ಷಗೊಂಡ ಹಳ್ಳಿಗರು ಪಬ್ಲಿಕ್ ಟಿವಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಗ್ರಾಮದಿಂದ ಅರೆನೂರು, ಬೆಟ್ಟದಹಳ್ಳಿ ಹಾಗೂ ದುರ್ಗ ಗ್ರಾಮಕ್ಕೂ ಸಂಪರ್ಕವಿದೆ. ಐದಳ್ಳಿ ಗ್ರಾಮದಲ್ಲಿ ಸುಮಾರು 30-35 ಮನೆಗಳಿವೆ. ಇಲ್ಲಿಂದ ಚಿಕ್ಕಮಗಳೂರು-ಶೃಂಗೇರಿ ಮಾರ್ಗದ ರಾಜ್ಯ ಹೆದ್ದಾರಿಯ ಕಣತಿ ಗ್ರಾಮಕ್ಕೆ ಕೇವಲ ಒಂದು ಕಿ.ಮೀ. ಆದರೆ, ಐದಳ್ಳಿ ಜನ ಕಣತಿಗೆ ಬರಬೇಕೆಂದರೆ ಸುಮಾರು ಐದಾರು ಕಿ.ಮೀ. ಸುತ್ತಿ ಬರಬೇಕು.

ಈ ಆನೆ ಬಿದ್ದ ಹಳ್ಳಕ್ಕೆ ಸೇತುವೆ ನಿರ್ಮಾಣವಾದರೆ ಮುಕ್ಕಾಲು ಅಥವಾ ಒಂದು ಕಿ.ಮೀ ನಲ್ಲಿ ಕಣತಿ ಗ್ರಾಮಕ್ಕೆ ಬರುತ್ತಾರೆ. ಆದರೆ, ಏಳು ದಶಕಗಳಿಂದ ಇವರಿಗೆ ಒಂದು ಸೇತುವೆ ಭಾಗ್ಯ ಒದಗಿಬಂದಿರಲಿಲ್ಲ. ಯಾರಿಗಾದರೂ ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ಕರೆದೊಯ್ಯಬೇಕೆಂದರೆ ಜೋಳಿಗೆ ಕಟ್ಟಿಕೊಂಡು ಹೊತ್ತುಕೊಂಡೇ ಹೋಗಬೇಕಾಗಿತ್ತು. ಈ ಹಳ್ಳದಲ್ಲಿ ಹೋಗುವಾಗ ಕೆಲ ಹುಡುಗರ ಕೊಚ್ಚಿ ಹೋಗಿರುವ ಪ್ರಸಂಗವು ನಡೆದಿತ್ತು. ಆದರೆ ಇದೀಗ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೇತುವೆ ನಿರ್ಮಾಣಕ್ಕೆ ಸರ್ವೇ ಮಾಡಿರುವುದು, ಕಳೆದ ಏಳೆಂಟು ದಶಕಗಳಿಂದ ಕಾಡು ಮನುಷ್ಯರಂತೆ ಜೀವಿಸಿದ್ದ ಈ ಗ್ರಾಮದ ಜನರಲ್ಲಿ ಸಂತಸ ಮೂಡಿಸಿದೆ.

Share This Article
Leave a Comment

Leave a Reply

Your email address will not be published. Required fields are marked *