ಪ್ರಧಾನಿ ಮೋದಿ ರಾಜಿಯಾಗುವುದು ಚೀನಾಗೆ ತಿಳಿದಿದೆ: ರಾಹುಲ್ ಗಾಂಧಿ

Public TV
3 Min Read

ಚೆನ್ನೈ: ದೇಶದ ಹಿತಾಸಕ್ತಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜಿ ಮಾಡಿಕೊಳ್ಳುತ್ತಾರೆ ಎಂಬುದು ಚೀನಾಗೆ ತಿಳಿದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ವಾಗ್ದಾಳಿ ನಡೆಸಿದ್ದಾರೆ.

ತಮಿಳುನಾಡಿನ ತೂತುಕುಡಿಯ ವಿಒಸಿ ಕಾಲೇಜಿನಲ್ಲಿ ಮಾತನಾಡಿದ್ದಾರೆ. ಚೀನಾ ಗಡಿ ವಿಚಾರದಲ್ಲಿ ರಾಹುಲ್ ಗಾಂಧಿ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀಕ್ಷ್ಣವಾಗಿ ವಾಗ್ದಾಳಿ ನಡೆಸುತ್ತಲೇ ಇದ್ದು, ಇದೀಗ ಮತ್ತೆ ಹರಿಹಾಯ್ದಿದ್ದಾರೆ. ದೇಶದ ಹಿತಾಸಕ್ತಿ ವಿಚಾರದಲ್ಲಿ ನರೇಂದ್ರ ಮೋದಿ ರಾಜಿಯಾಗುತ್ತಾರೆ ಎಂಬುದು ಚೀನಾಗೆ ತಿಳಿದಿದೆ. ದೇಶದಲ್ಲಿ ಪ್ರಜಾಪ್ರಭುತ್ವ ಸತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದಲ್ಲಿ ಪ್ರಜಾಪ್ರಭುತ್ವ ಸತ್ತು ಹೋಗಿದೆ. ಕಳೆದ 6 ವರ್ಷಗಳಿಂದ ಚುನಾಯಿತ ಸಂಸ್ಥೆಗಳು ಹಾಗೂ ಪತ್ರಿಕಾ ಸ್ವಾತಂತ್ರ್ಯದ ಮೇಲೆ ವ್ಯವಸ್ಥಿತ ದಾಳಿ ನಡೆಯುತ್ತಿದೆ. ಪ್ರಜಾಪ್ರಭುತ್ವ ಅಬ್ಬರದಿಂದ ಸಾಯುವುದಿಲ್ಲ, ನಿಧಾನವಾಗಿ ಸಾಯುತ್ತದೆ ಎಂದರು. ಇದೇ ವೇಳೆ ಆರ್‍ಎಸ್‍ಎಸ್‍ನ್ನು ಸಹ ದೂಷಿಸಿದರು.

ಪಾರ್ಲಿಮೆಂಟ್, ನ್ಯಾಯಾಂಗ, ಪತ್ರಿಕಾ ರಂಗ ಸೇರಿದಂತೆ ವಿವಿಧ ವಲಯಗಳು ದೇಶವನ್ನು ಹಿಡಿದಿವೆ. ಒಂದು ರಾಷ್ಟ್ರ ಇವರುಗಳ ಮೇಲೆಯೇ ನಿಂತಿರುತ್ತದೆ. ಈ ಸಮತೋಲನ ನಾಶವಾದರೆ, ದೇಶವೇ ಹಾಳಾದಂತೆ. ಇದೀಗ ಆರ್‍ಎಸ್‍ಎಸ್ ಇವುಗಳಲ್ಲಿ ನುಸುಳಿದೆ ಎಂದು ಹರಿಹಾಯ್ದರು.

ಆರ್‍ಎಸ್‍ಎಸ್ ದೇಶದಲ್ಲಿನ ಸಾಂಸ್ಥಿಕ ಸಮತೋಲನಕ್ಕೆ ಧಕ್ಕೆ ತಂದಿದೆ, ಹಾಳು ಮಾಡಿದೆ. ಭಾರತ ರಾಜ್ಯಗಳ ಒಕ್ಕೂಟವಾಗಿದೆ. ನೀವು ವ್ಯವಸ್ಥೆಯನ್ನು ನಾಶ ಮಾಡಿದರೆ ರಾಜ್ಯಗಳ ಧ್ವನಿಯನ್ನೇ ಹತ್ತಿಕ್ಕಿದಂತೆ. ಇದೀಗ ಸಂಸ್ಥೆಗಳ ನಡುವಿನ ಸಮತೋಲನ ನಾಶವಾಗಿದೆ, ಹೀಗಾಗಿಯೇ ನಾವು ಇದೀಗ ಈ ಪರಿಸ್ಥಿತಿ ಎದುರಿಸುತ್ತಿದ್ದೇವೆ. ಈಗ ನಡೆಯುತ್ತಿರುವ ಕ್ರೂರ ದಾಳಿಯಿಂದ ನಾವು ನಮ್ಮ ಸಂಸ್ಥೆಗಳನ್ನು ಉಳಿಸಬೇಕಾಗಿದೆ ಎಂದರು.

ಬಿಜೆಪಿ ಹಣ ಬಲ ಹಾಗೂ ತೋಳ್ಬಲದಿಂದ ಶಾಸಕರನ್ನು ಖರೀದಿಸಲು ನೋಡುತ್ತಿದೆ. ಪುದುಚೇರಿ, ಮಧ್ಯ ಪ್ರದೇಶಗಳಲ್ಲಿ ಜನಾದೇಶವಿದೆ. ಆದರೆ ಹಣ ನೀಡುವ ಮೂಲಕ ಕಾಂಗ್ರೆಸ್ ಶಾಸಕರನ್ನು ಖರೀದಿಸಲಾಗುತ್ತಿದೆ. ಶಾಸಕ ಸ್ಥಾನಕ್ಕೆ ಸರಿಯಾದ ಅಭ್ಯರ್ಥಿ ಆಯ್ಕೆ ಮಾಡುವುದು ಸಹ ಸಮಸ್ಯೆಯ ಒಂದು ಭಾಗವಾಗಿದೆ ಎಂದು ಕಿಡಿಕಾರಿದರು.

ಮಧ್ಯಪ್ರದೇಶ, ಗೋವಾ, ಅರುಣಾಚಲಪ್ರದೇಶ, ಪಾಂಡಿಚೇರಿ, ರಾಜಸ್ಥಾನ ಹಾಗೂ ಜಾರ್ಖಂಡ್‍ನಲ್ಲಿ ಜನಾದೇಶ ನಮ್ಮ ಪರವಾಗಿದೆ. ರಾಜ್ಯಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ಶಾಸಕರಿಗೆ ಎಷ್ಟು ಹಣ ನೀಡಲಾಗಿದೆ ಎಂಬುದು ತಿಳಿದಿದೆ ಎಂದು ಹರಿಹಾಯ್ದರು.

Share This Article
Leave a Comment

Leave a Reply

Your email address will not be published. Required fields are marked *