ಶಾಕುಂತಲೆ ‘ಕೋಟಿ’ ರಹಸ್ಯ – ‘ಡೀಲ್ ಸ್ಟಾರ್’ ಯುವರಾಜನ ಜಾಲದಲ್ಲಿ ರಾಧಿಕಾ?

Public TV
1 Min Read

– ಲೆಕ್ಕ ತಪ್ಪಿದ ಸ್ಯಾಂಡಲ್‍ವುಡ್ ಸ್ವೀಟಿಗೆ ತಪ್ಪಿದ್ದಲ್ಲ ಸಂಕಷ್ಟ?
– ರಾಧಿಕಾ ಕುಮಾರಸ್ವಾಮಿ ಕೋಟಿ ರಹಸ್ಯ

ಬೆಂಗಳೂರು: ವಂಚಕ ಯುವರಾಜನ ಬಳಿಯಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಹಣ ಪಡೆದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಯುವರಾಜನ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿ ಬರುತ್ತಿದ್ದಂತೆ ಸುದ್ದಿಗೋಷ್ಠಿ ನಡೆಸಿದ ನಟಿ ರಾಧಿಕಾ ಕುಮಾರಸ್ವಾಮಿ, ಐತಿಹಾಸಿಕ ಕಥೆಯುಳ್ಳ ನಾಟ್ಯರಾಣಿ ಶಕುಂತಲೆ ಸಿನಿಮಾಗಾಗಿ 75 ಲಕ್ಷ ರೂ. ಪಡೆದಿರೋದಾಗಿ ಹೇಳಿದ್ದರು. ಯುವರಾಜ್ 15 ಲಕ್ಷ ನೀಡಿದ್ರೆ, ಮತ್ತೊಬ್ಬರ ಖಾತೆಯಿಂದ 60 ಲಕ್ಷ ಜಮೆ ಆಗಿತ್ತು ಅಂತ ಹೇಳಿದ್ದರು.

ರಾಧಿಕಾ ಹೇಳಿಕೆ ಬೆನ್ನಲ್ಲೇ ಸಿಸಿಬಿ ವಿಚಾರಣೆ ನಡೆಸಿ ಕೆಲ ಮಾಹಿತಿಯನ್ನ ಪಡೆದುಕೊಂಡಿತ್ತು. ಈ ವೇಳೆ ಯುವರಾಜ್ ಮತ್ತು ರಾಧಿಕಾ ಇಬ್ಬರನ್ನ ಮುಖಾಮುಖಿಯಾಗಿ ಕೂರಿಸಿ ವಿಚಾರಣೆ ನಡೆಸಿರುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿತ್ತು. ಇದೀಗ ರಾಧಿಕಾ ಕುಮಾರಸ್ವಾಮಿ ಶಕುಂತಲೆ ಸಿನಿಮಾಗಾಗಿ ಬರೋಬ್ಬರಿ 1 ಕೋಟಿ 25 ಲಕ್ಷ ರೂಪಾಯಿ ಪಡೆದಿರುವ ಎಕ್ಸ್ ಕ್ಲೂಸಿವ್ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಯುವರಾಜ್ ನಿಂದ ರಾಧಿಕಾ ಕುಮಾರಸ್ವಾಮಿ ಪಡೆದ ಹಣವನ್ನೆಲ್ಲಾ ಜಪ್ತಿ ಮಾಡಿರುವ ಸಿಸಿಬಿ ಪೊಲೀಸರು ನ್ಯಾಯಾಲಯದ ಸುಪರ್ದಿಗೆ ನೀಡಲು ಸಿದ್ಧತೆ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ 75 ಲಕ್ಷ ರೂ. ಹಣ ಪಡೆಯಲಾಗಿದೆ ಎಂದು ರಾಧಿಕಾ ಹೇಳಿದ್ದರು. ಈಗ ರಾಧಿಕಾ ಸುಳ್ಳು ಹೇಳಿದ್ರಾ ಅನ್ನೋ ಪ್ರಶ್ನೆಯೊಂದು ಉತ್ತರವನ್ನು ಹುಡುಕುತ್ತಿದೆ. ಯುವರಾಜ್ ವಿರುದ್ಧ ದೂರು ಸಲ್ಲಿಸಿರುವ ಮೈಸೂರಿನ ವಿಜಯ್ ಎಂಬವರು ರಾಧಿಕಾರ ಖಾತೆಗೆ 60 ಲಕ್ಷ ಹಣ ಜಮೆ ಮಾಡಿದ್ರು ಎನ್ನಲಾಗಿದೆ.

ದೂರುದಾರನ ಖಾತೆಯಿಂದಲೇ ಹಣ ಬಂದಿದ್ದರಿಂದ ರಾಧಿಕಾ ಕುಮಾರಸ್ವಾಮಿ ಸಂಕಷ್ಟದಲ್ಲಿ ಸಿಲುಕಿಕೊಳ್ತಾರಾ ಅನ್ನೋ ಚರ್ಚೆಗಳು ಆರಂಭಗೊಂಡಿವೆ. ಇದೀಗ ಪತ್ತೆಯಾಗಿರುವ ಹೆಚ್ಚುವರಿ 50 ಲಕ್ಷ ರೂ.ಗಾಗಿ ಸಿಸಿಬಿ ಮತ್ತೊಮ್ಮೆ ರಾಧಿಕಾ ಅವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸುವ ಸಾಧ್ಯತೆಗಳಿವೆ.

Share This Article
Leave a Comment

Leave a Reply

Your email address will not be published. Required fields are marked *