ಟೆರೇಸ್ ಮೇಲೆ ನಿಂತಿದ್ದ ಯುವತಿಗೆ ಗುಂಡಿನೇಟು

Public TV
1 Min Read

– ಏಣಿ ಇರಿಸಿ ಟೆರೇಸ್ ತಲುಪಿದ್ದ ಯುವಕ

ಜೈಪುರ: ಟೆರೇಸ್ ಮೇಲೆ ನಿಂತಿದ್ದ ಯುವತಿಗೆ ಯುವಕನೋರ್ವ ಗುಂಡು ಹೊಡೆದು ಕೊಲೆಗೈದಿರುವ ಘಟನೆ ಭರತ್‍ಪುರ ಪಟ್ಟಣದ ಮುಖರ್ಜಿ ನಗರದಲ್ಲಿ ನಡೆದಿದೆ.

19 ವರ್ಷದ ಅಂಕಿತಾ ಮೃತ ಯುವತಿ. ನೆರೆ ಮನೆಯ ಯುವಕ ಸುನಿಲ್ ಆರೋಪಿ. ಅಂಕಿತಾಳನ್ನ ಸುನಿಲ್ ಪ್ರೀತಿಸುತ್ತಿದ್ದ ಎನ್ನಲಾಗಿದ್ದು, ಘಟನೆ ಬಳಿಕ ಆರೋಪಿ ಪರಾರಿಯಾಗಿದ್ದಾನೆ. ಅಂಕಿತಾಳ ತಂದೆ-ತಾಯಿ ಶಿಕ್ಷಕರಾಗಿದ್ದು, ಇಂದು ಬೆಳಗ್ಗೆ ಗಣರಾಜ್ಯೋತ್ಸವ ಹಿನ್ನೆಲೆ ಬೆಳಗ್ಗೆ ಏಳು ಗಂಟೆಗೆ ಮನೆಯಿಂದ ಹೊರಟಿದ್ದರು. ಅಂಕಿತಾ ಮಲಗಿದ್ದರಿಂದ ಮನೆಯ ಬಾಗಿಲಿಗೆ ಕೀ ಹಾಕಿ ಶಾಲೆಗೆ ಹೋಗಿದ್ದರು. ಮನೆಯ ಮೇಲೆ ವಾಟರ್ ಟ್ಯಾಂಕ್ ತುಂಬಿಸಲು ಅಂಕಿತಾ ಟೆರೇಸ್ ಮೇಲೆ ಹೋದಾಗ ಸುನಿಲ್ ಗುಂಡು ಹೊಡೆದಿದ್ದಾನೆ. ಅಂಕಿತಾಳ ಧ್ವನಿ ಕೇಳಿ ಎಚ್ಚರಗೊಂಡ ಆಕೆಯ ಸೋದರಿ ಟೆರೇಸ್ ಗೆ ಹೋದಾಗ ಅಕ್ಕ ರಕ್ತದ ಮಡುವಿನಲ್ಲಿ ಬಿದಿದ್ದರೆ ಸುನಿಲ್ ಪರಾರಿ ಆಗುತ್ತಿರೋದನ್ನು ನೋಡಿದ್ದಾಳೆ.

ಗುಂಡಿನ ಸದ್ದು ಕೇಳಿದ ಸ್ಥಳೀಯರು ಮನೆಗೆ ಬಂದು ಅಂಕಿತಾಳನ್ನ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಅಂಕಿತಾ ಮೃತಪಟ್ಟಿದ್ದಾಳೆ. ಇನ್ನು ಮಗಳ ಸಾವಿನ ವಿಷಯ ತಿಳಿಯುತ್ತಿದ್ದಂತೆ ಪೋಷಕರು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಆಸ್ಪತ್ರೆ ಆವರಣದಲ್ಲಿ ಅಂಕಿತಾ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಆರೋಪಿ ಅಂಕಿತಾ ಹಿಂಭಾಗದಲ್ಲಿರುವ ಮನೆಯಲ್ಲಿ ವಾಸವಾಗಿದ್ದನು. ಫಿಲ್ಮಿ ಸ್ಟೈಲ್ ನಲ್ಲಿ ತಮ್ಮ ಮನೆಯ ಮೇಲ್ಭಾಗದಿಂದ ಅಂಕಿತಾ ಟೆರೇಸ್ ಗೆ ಏಣಿ ಇಟ್ಟು ಬಂದಿದ್ದನು. ಗುಂಡು ಹೊಡೆದ ಬಳಿಕ ಬಂದ ಮಾರ್ಗದಲ್ಲಿಯೇ ಸುನಿಲ್ ಪರಾರಿಯಾಗಿದ್ದಾನೆ. ಈ ಹಿಂದೆಯೂ ಸುನಿಲ್ ಮತ್ತು ಅಂಕಿತಾ ನಡುವೆ ಪ್ರೇಮ ವಿಷಯವಾಗಿ ಗಲಾಟೆ ನಡೆದಿತ್ತು. ಆದ್ರೆ ಅಂಕಿತಾ ಪ್ರಪೋಸಲ್ ತಿರಸ್ಕರಿಸಿದ್ದರಿಂದ ಯುವಕ ಕೋಪಗೊಂಡಿದ್ದನು. ಈ ಸಂಬಂಧ ಎರಡೂ ಕುಟುಂಬಗಳ ಮಧ್ಯೆ ರಾಜಿ ಸಹ ನಡೆದಿತ್ತು.

Share This Article
Leave a Comment

Leave a Reply

Your email address will not be published. Required fields are marked *