ಓಟಿಟಿಯಾದ್ರೇನು, ಓವರ್​ಸೀಸ್​ ಆದ್ರೇನು, ನಿರ್ಮಾಪಕನಿಗೆ ನಷ್ಟ ಆಗ್ಬಾರ್ದು ಅಷ್ಟೆ: ಮುನಿರತ್ನ

Public TV
2 Min Read

ದಾವಣಗೆರೆ: ಓಟಿಟಿ ಆದರೇನು, ಓವರ್​ಸೀಸ್​ ಆದರೇನು..?. ಒಟ್ಟಿನಲ್ಲಿ ನಿರ್ಮಾಪಕನಿಗೆ ನಷ್ಟ ಆಗಬಾರದು ಎಂದು ಶಾಸಕ ಮುನಿರತ್ನ ಹೇಳಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಒಟಿಟಿಯಲ್ಲಿ ಚಿತ್ರ ಬಿಡುಗಡೆಗೆ ನಟ ದರ್ಶನ ವಿರೋಧ ವ್ಯಕ್ತಪಡಿಸಿದ್ದಕ್ಕೆ ಪ್ರತಿಕ್ರಿಯಿಸಿ, ಓಟಿಟಿಯಾದರೇನು, ಓವರ್​ಸೀಸ್​ ಆದರೇನು..? ಹೂಡಿದ ಹಣ ವಾಪಸ್ ಬರಬೇಕು ಅಷ್ಟೆ. ನಿರ್ಮಾಪಕನಿಗೆ ಅನುಕೂಲ ಆಗುವ ರೀತಿ ಚಿತ್ರ ಬಿಡುಗಡೆಯಾಗಬೇಕು. ನಷ್ಟ ಆಗದ ರೀತಿ ವ್ಯಾಪಾರ ನೋಡಿಕೊಂಡು ಚಿತ್ರ ಬಿಡುಗಡೆ ಮಾಡುವ ಹೊಣೆ ನಿರ್ಮಾಪಕನದ್ದು ಎಂದು ತಿಳಿಸಿದರು.

ಈ ಬಗ್ಗೆ ಯಾರು ಏನೂ ಮಾತನಾಡಬಾರದು. ಸಿನಿಮಾ ಬಿಡುಗಡೆ ನಿರ್ಮಾಪಕನಿಗೆ ಸಂಬಂಧಿಸಿದ್ದು. ಎಲ್ಲಿ, ಯಾವಾಗ ಬಿಡುಗಡೆ ಮಾಡಿದರೆ ಗಳಿಕೆ, ಲಾಭ ಬರುತ್ತೆ ಅನ್ನೊದು ನಿರ್ಮಾಪಕನಿಗೆ ಗೊತ್ತಿರುತ್ತೆ. ಒಟಿಟಿ ಆದರೇನು ಓವರ್​ಸೀಸ್​ ಆದರೇನು ಲಾಭ ಆದರೆ ಸಾಕು ಎಂದು ದಾಸನಿಗೆ ಮುನಿರತ್ನ ಟಾಂಗ್ ನೀಡಿದರು.

ದರ್ಶನ್ ಹೇಳಿದ್ದೇನು..?
ಜನವರಿ 10ರಂದು ಫೇಸ್‍ಬುಕ್ ಲೈವ್ ಬಂದಿದ್ದ ಸಾರಥಿ, ಆರಂಭದಲ್ಲಿ ಎಲ್ಲರಿಗೂ ಹೊಸ ವರ್ಷದ ಶುಭಾಶಯ ತಿಳಿಸಿದ್ದರು. ನಂತರ ಬಹುನಿರೀಕ್ಷೆಯ ರಾಬರ್ಟ್ ಸಿನಿಮಾ ಮಾರ್ಚ್ 11ರಂದು ಚಿತ್ರಮಂದಿರಗಳಲ್ಲೇ ಬಿಡುಗಡೆಯಾಗಲಿದೆ ಎಮದು ಹೇಳಿದ್ದರು. ಇದೇ ವೇಳೆ ಓಟಿಟಿ ಪ್ಲಾಟ್‍ಫಾರಂನಲ್ಲಿ ಸಿನಿಮಾ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದ ಅವರು, ಥಿಯೇಟರ್ ನಲ್ಲಿ ಕೇಳುವ ಚಪ್ಪಾಳೆಗಳೇ ನಮಗೆ ಮುಖ್ಯ. ಸದ್ಯ ಶೇ.50ರಷ್ಟು ಆಸನ ಭರ್ತಿಗೆ ಸರ್ಕಾರ ಅನುಮತಿ ನೀಡಿದೆ. ಆದ್ರೂ ನಾವು ಚಿತ್ರಮಂದಿರದಲ್ಲಿಯೇ ಸಿನಿಮಾ ಬಿಡುಗಡೆ ಮಾಡಲು ಪ್ಲಾನ್ ಮಾಡಿಕೊಂಡಿದ್ದೇವೆ ಎಂದು ತಿಳಿಸಿದ್ದರು.

ಚಿತ್ರಮಂದಿರಗಳಲ್ಲಿ ಸಂಪೂರ್ಣ ಸೀಟು ಭರ್ತಿಗೆ ಅವಕಾಶ ನೀಡದೆ ಇರುವುದರ ಹಿಂದೆ ಅಂಬಾನಿಯ 5ಜಿ ಸ್ಕ್ಯಾಮ್ ಇದೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಯಾಕೆಂದರೆ ಮಾಲ್ ಗಳು, ಮಾರುಕಟ್ಟೆ, ಅಂಗಡಿ, ಕಲ್ಯಾಣ ಮಂಟಪಗಳು, ಶಾಲಾ- ಕಾಲೇಜುಗಳು ತೆರೆದಿವೆ. ಎಲ್ಲ ಕಡೆ ಜನ ಸೇರುತ್ತಿದ್ದಾರೆ. ಆದರೆ ಚಿತ್ರಮಂದಿರಗಳಲ್ಲಿ ಮಾತ್ರ ಶೇ.100ರಷ್ಟು ಸೀಟು ಭರ್ತಿಗೆ ಅವಕಶ ನೀಡುತ್ತಿಲ್ಲ. ಅಂಬಾನಿ 5 ಜಿ ನೆಟ್ ವರ್ಕ್ ಲಾಂಚ್ ಮಾಡುತ್ತಿದ್ದಾರೆ. ಅವರ 5 ಜಿ ನೆಟ್‍ವರ್ಕ್ ಚಾಲ್ತಿಯಲ್ಲಿರಬೇಕು ಎಂದರೆ ಎಲ್ಲರೂ ಮೊಬೈಲ್ ಗೆ ಅಡಿಕ್ಟ್ ಆಗಬೇಕು. 5 ಜಿ ಓಡಬೇಕು ಅಂದರೆ ಓಟಿಟಿಯಲ್ಲಿ ಸಿನಿಮಾಗಳು ಇರಬೇಕು. ಆಗಲೇ ಅವರಿಗೆ ಹಣ ಬರುವುದು. ಅದೇ ಚಿತ್ರಮಂದಿರಗಳು ತೆರೆದರೆ ಓಟಿಟಿಗಳ ಮಾರುಕಟ್ಟೆ ಕುಸಿಯುತ್ತದೆ. ಹಾಗಾಗಿ ಅಂಬಾನಿ ದೊಡ್ಡವರಿಗೆ ಹೇಳಿ ಚಿತ್ರಮಂದಿರಗಳಿಗೆ ಅವಕಾಶ ನಿರಾಕರಿಸುತ್ತಿರಬಹುದು ಎಂದು ಅಭಿಪ್ರಾಯ ಪಟ್ಟಿದ್ದರು.

Share This Article
Leave a Comment

Leave a Reply

Your email address will not be published. Required fields are marked *