ರಾಜಕಾರಣಿಗಳನ್ನೂ ನಾಚಿಸಿದ ರಾಯಚೂರು ಶಿಕ್ಷಕರು- ಗುಮ್ಮಟ ನಗರಿಯಲ್ಲಿ ಕೊರೊನಾಗೆ ಡೋಂಟ್ ಕೇರ್

Public TV
1 Min Read

– ನಡುರಸ್ತೆಯಲ್ಲಿ ನಿಂತು ಮತಯಾಚನೆ

ರಾಯಚೂರು/ವಿಜಯಪುರ: ಜಿಲ್ಲಾ ಶಿಕ್ಷಕರ ಸಂಘದ ಚುನಾವಣೆಗೆ ಮತದಾನ ನಡೆಯುತ್ತಿದ್ದು, ರಾಯಚೂರಿನ ಟೀಚರ್ಸ್ ರಾಜಕಾರಣಿಗಳನ್ನೇ ನಾಚಿಸುವಂತೆ ಮತಯಾಚನೆ ಮಾಡಿದ್ದಾರೆ. ಇತ್ತ ಗುಮ್ಮಟ ನಗರಿ ವಿಜಯಪುರದ ಶಿಕ್ಷಕಕ ವೃಂದ ಕೊರೊನಾ ನಿಯಮಗಳನ್ನ ಗಾಳಿಗೆ ತೂರಿದ್ದಾರೆ. ಎರಡೂ ಜಿಲ್ಲೆಗಳಲ್ಲಿ ಭರ್ಜರಿ ಮತದಾನ ನಡೆಯುತ್ತಿದ್ದು, ಅಭ್ಯರ್ಥಿಗಳು ಕೊನೆಯ ಕಸರತ್ತು ನಡೆಸುತ್ತಿದ್ದಾರೆ.

ಶಿಕ್ಷಕರಿಗೆ ಪೊಲೀಸರಿಂದ ಪಾಠ: ಯಾವುದೇ ಚುನಾವಣೆಗೂ ಕಡಿಮೆಯಿಲ್ಲದಂತೆ ರಾಯಚೂರಿನಲ್ಲಿ ಜಿಲ್ಲಾ ಶಿಕ್ಷಕರ ಸಂಘದ ಚುನಾವಣೆ ನಡೆಯುತ್ತಿದೆ. ಯಾವ ರಾಜಕಾರಣಿಗಳಿಗೂ ಕಮ್ಮಿಯಿಲ್ಲದಂತೆ ಪಾಠ ಮಾಡಬೇಕಾದ ಶಿಕ್ಷಕರು ರಾಜಕಾರಣಿಗಳಂತಾಗಿದ್ದಾರೆ. ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ಮತದಾನ ನಡೆಯುತ್ತಿದ್ದು, ಗುಂಪು ಗುಂಪಾಗಿ ಶಿಕ್ಷಕರು ಮತದಾನಕ್ಕೆ ಬಂದಿದ್ದಾರೆ.

ನಗರದ ಸ್ಟೇಷನ್ ರಸ್ತೆಯ ಟ್ಯಾಗೋರ್ ಪ್ರೌಢಶಾಲೆಯಲ್ಲಿ ಮತದಾನ ನಡೆಯುತ್ತಿದ್ದು, ರಾಜಕೀಯ ನಾಯಕರು ನಾಚುವಂತೆ ಶಿಕ್ಷಕರು ವರ್ತಿಸಿದ್ದಾರೆ. ನೂರಾರು ಶಿಕ್ಷಕರು ರಸ್ತೆಯಲ್ಲಿ ನಿಂತು ಮತಯಾಚನೆ ಮಾಡಿದ್ದಾರೆ. ಮಾರಕ ಕೋವಿಡ್ ಹಾವಳಿಯ ಸಂದರ್ಭದಲ್ಲಿ ಸಾಮಾಜಿಕ ಅಂತರ ಮರೆತು ನಿಯಮ ಉಲ್ಲಂಘಿಸಿ ಗುಂಪು ಗುಂಪಾಗಿ ನಿಂತು ಚುನಾವಣೆ ನಡೆಸುತ್ತಿದ್ದಾರೆ. ಮತದಾನಕ್ಕೂ ಶಿಕ್ಷಕರು ನೂಕುನುಗ್ಗಲು ಮಾಡಿದ್ದಾರೆ. ಶಿಕ್ಷಕರ ವರ್ತನೆಯಿಂದ ಬೇಸತ್ತ ಪೊಲೀಸರು ಸ್ಥಳದಿಂದ ಎಲ್ಲರನ್ನೂ ಚದುರಿಸಿದ್ದಾರೆ. ವಿದ್ಯಾರ್ಥಿಗಳನ್ನ ತಿದ್ದಿತೀಡಬೇಕಾದ ಶಿಕ್ಷಕರೇ ಪೊಲೀಸರಿಂದ ನೀತಿ ಪಾಠ ಹೇಳಿಸಿಕೊಂಡಿದ್ದಾರೆ. ರಾಜಕೀಯ ಪಕ್ಷಗಳು ನಾಚುವ ರೀತಿಯಲ್ಲಿ ಶಿಕ್ಷಕರ ಸಂಘದ ಚುನಾವಣೆ ನಡೆದಿದ್ದು ಮಾತ್ರ ವಿಪರ್ಯಾಸ.

ಕೊರೊನಾ ರೂಲ್ಸ್ ಮರೆತ ಟೀಚರ್ಸ್: ವಿಧಾನಸಭಾ ಚುನಾವಣೆಗೂ ಕಡಿಮೆ ಇಲ್ಲದಂತೆ ವಿಜಯಪುರದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ನಡೆಯುತ್ತಿದೆ. ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ಮತದಾನ ನಡೆಯುತ್ತಿದ್ದು ಸಾಮಾಜಿಕ ಅಂತರ ಇಲ್ಲದೆ ಶಿಕ್ಷಕರು ಮತದಾನದಲ್ಲಿ ಬ್ಯುಸಿ ಆಗಿದ್ದಾರೆ.

ಅಭ್ಯರ್ಥಿಗಳು ಮತದಾನ ಕೇಂದ್ರದ ಹೊರಗೆ ಗುಂಪು ಗುಂಪಾಗಿ ನಿಂತು ರಾಜಕಾರಣಿಗಳನ್ನು ಮೀರಿಸುವಂತೆ ಕೊರೊನ ಆತಂಕವಿಲ್ಲದೆ ಮತಯಾಚೆನೆಯಲ್ಲಿ ಮುಳುಗಿದ್ದಾರೆ. ನಗರದ ಕಾಳಿದಾಸ ಶಿಕ್ಷಣ ಸಂಸ್ಥೆಯಲ್ಲಿ ಮತದಾನ ನಡೆಯುತ್ತಿದ್ದು, ರಾಜಕೀಯ ನಾಯಕರು ನಾಚುವಂತೆ ಶಿಕ್ಷಕರು ವರ್ತಿಸುತ್ತಿದ್ದಾರೆ. ಮತದಾನ ನೂಕುನುಗ್ಗಲು ಮಾಡುತ್ತಿದ್ದಾರೆ. ಇನ್ನು ಇದನ್ನ ನೋಡಿಯೂ ನೋಡದಂತೆ ಪೊಲೀಸರು ಕುಳಿತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *