ನೀನೇ ಬಿಜೆಪಿಗೆ ಬರುತ್ತಿಯಲ್ಲ- ವಿನಯ್ ಕುಲಕರ್ಣಿಯನ್ನು ಪಕ್ಷಕ್ಕೆ ಆಹ್ವಾನಿಸಿದ ರಮೇಶ್ ಜಾರಕಿಹೊಳಿ

Public TV
1 Min Read

ಬೆಳಗಾವಿ: ಮೀಸಲಾತಿ ವಿಚಾರವಾಗಿ ನಡೆದ ಸಭೆಯಲ್ಲಿ ಅನಿರೀಕ್ಷಿತ ಬೆಳವಣಿಗೆಯೊಂದು ನಡೆದಿದ್ದು, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿಯವರನ್ನು ಬಿಜೆಪಿಗೆ ಆಹ್ವಾನಿಸಿದ್ದಾರೆ.

ನಗರದ ಸುವರ್ಣಸೌಧ ಎದುರು ನಡೆದ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವ ಹೋರಾಟದಲ್ಲಿ ಈ ಆಹ್ವಾನ ನೀಡಲಾಗಿದೆ.

ಮೀಸಲಾತಿ ಕೊಡಿಸುವಂತೆ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ಸಚಿವ ರಮೇಶ್ ಜಾರಕಿಹೊಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಈ ವೇಳೆ ಇದೊಂದು ಕೆಲಸ ಮಾಡಿ ಕೊಡಿ ಎಂದು ರಮೇಶ್ ಜಾರಕಿಹೊಳಿ ಅವರಿಗೆ ವಿನಯ್ ಕುಲಕರ್ಣಿ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ತಕ್ಷಣವೇ ಪ್ರತಿಕ್ರಿಯಿಸಿದ ರಮೇಶ್ ಜಾರಕಿಹೊಳಿ ಅವರು, ನೀನೇ ಬಿಜೆಪಿಗೆ ಬರುತ್ತಿಯಲ್ಲ ಎಂದಿದ್ದಾರೆ. ಈ ವೇಳೆ ವಿನಯ್ ಕುಲಕರ್ಣಿ ನಗುತ್ತಾ ಕೈ ಮುಗಿದಿದ್ದಾರೆ.

ಈ ಬೆಳವಣಿಗೆ ನಡೆದ ಬೆನ್ನಲ್ಲೇ ತಕ್ಷಣ ಮಧ್ಯಸ್ಥಿಕೆ ವಹಿಸಿ ನಸುನಕ್ಕು ಜಯಮೃತ್ಯುಂಜಯ ಸ್ವಾಮೀಜಿ ಅವರು ವಿಷಯಾಂತರ ಮಾಡಿದ್ದಾರೆ. ಈ ಮೂಲಕ ವಿನಯ್ ಕುಲಕರ್ಣಿಯವರನ್ನು ರಮೇಶ್ ಜಾರಕಿಹೊಳಿ ಬಿಜೆಪಿಗೆ ಆಹ್ವಾನಿಸಿದ್ದಾರೆ.

ಈ ಘಟನೆ ಬಳಿಕ ವಿನಯ್ ಕುಲಕರ್ಣಿ ಸುದ್ದಿಗಾರರೊಂದಿಗೆ ಮಾತನಾಡಿ ಸ್ಪಷ್ಟನೆ ನೀಡಿದ್ದು, ಸಚಿವ ರಮೇಶ್ ಜಾರಕಿಹೊಳಿ ಬಿಜೆಪಿಗೆ ಬಾ ಎಂದು ಕರೆದರು ಅದಕ್ಕೆ ಕೈ ಮುಗಿದೆ. ಬಿಜೆಪಿ ಸೇರುವ ಬಗ್ಗೆ ನಾನು ಯಾರ ಬಳಿಯೂ ಚರ್ಚೆ ಮಾಡಿಲ್ಲ, ಅಭಿಮಾನಿಗಳೂ ಚರ್ಚೆ ಮಾಡಿಲ್ಲ. ಮಾಧ್ಯಮಗಳಲ್ಲಿ ಊಹಾಪೋಹದ ಸುದ್ದಿ ಹರಿದಾಡುತ್ತಿದೆ. ನಾನು ನನ್ನ ಹೊಲ ಬಿಟ್ಟು ಎಲ್ಲಿಯೂ ಹೋಗಿಲ್ಲ. ಹೊಲದಲ್ಲೇ ಇದ್ದೇನೆ. ನನ್ನ ಹೊಲದಲ್ಲಿ ನೇಗಿಲು ಹೊಡೆದುಕೊಂಡು ಅರಾಮಾಗಿ ಇದ್ದೇನೆ. ಬಾ ಎಂದು ರಮೇಶ್ ಜಾರಕಿಹೊಳಿ ಕರೆದಿದ್ದಾರೆ.ಸ ನಾನು ಕೈ ಮುಗಿದೆ. ಎಲ್ಲರ ಮುಂದೆ ನಾನು ಅವರಿಗೆ ನಮಸ್ಕಾರ ಮಾಡಿದೆ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಸ್ಪಷ್ಟಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *