19ನೇ ಓವರಿನಲ್ಲಿ 25 ರನ್, 22 ಬಾಲಿಗೆ ಎಬಿಡಿ ಅರ್ಧ ಶತಕ – ಆರ್‌ಸಿಬಿಗೆ 7 ವಿಕೆಟ್‍ಗಳ ಜಯ

Public TV
2 Min Read

– 6 ಸಿಕ್ಸ್, 1 ಫೋರ್ ಮಿಸ್ಟರ್ 360 ಆಟಕ್ಕೆ ರಾಜಸ್ಥಾನ್ ಬೌಲರ್‌ಗಳು ತತ್ತರ

ದುಬೈ: ಇಂದು ನಡೆದ ಸೂಪರ್ ಶನಿವಾರದ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಏಳು ವಿಕೆಟ್‍ಗಳ ಅಂತರದಲ್ಲಿ ಗೆದ್ದು ಬೀಗಿದೆ.

ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ನಾಯಕ ಸ್ಟೀವನ್ ಸ್ಮಿತ್ ಮತ್ತು ಇಂದ ಆರಂಭಿಕರಾಗಿ ಕಣಕ್ಕಿಳಿದ ರಾಬಿನ್ ಉತ್ತಪ್ಪ ಅವರ ಸ್ಫೋಟಕ ಆಟದಿಂದ ನಿಗದಿತ 20 ಓವರಿನಲ್ಲಿ 177 ರನ್ ಸಿಡಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ ಬೆಂಗಳೂರು ತಂಡ ಕೊನೆಯಲ್ಲಿ ಎಬಿಡಿ ವಿಲಿಯರ್ಸ್ ಅವರ ಭರ್ಜರಿ ಬ್ಯಾಟಿಂಗ್‍ಯಿಂದ ಇನ್ನು ಎರಡು ಬಾಲ್ ಉಳಿಸಿ 179 ರನ್ ಚಚ್ಚಿತು. ಈ ಮೂಲಕ 7 ವಿಕೆಟ್‍ಗಳ ಜಯದಿಂದ ಅಂಕಪಟ್ಟಿಯಲ್ಲಿ 12 ಅಂಕ ಗಳಿಸಿತು.

ಎಬಿಡಿ ಆಟಕ್ಕೆ ರಾಯಲ್ಸ್ ಉಡೀಸ್
12 ಮತ್ತು 13ನೇ ಓವರಿನಲ್ಲಿ ಕೊಹ್ಲಿ ಮತ್ತು ಪಡಿಕಲ್ ಅವರ ಬ್ಯಾಕ್ ಟು ಬ್ಯಾಕ್ ವಿಕೆಟ್ ಬಿದ್ದಾಗ ಬೆಂಗಳೂರು ತಂಡಕ್ಕೆ ಸಂಕಷ್ಟ ಎದುರಾಗಿತ್ತು. ಕೊನೆಯ ನಾಲ್ಕು ಓವರಿನಲ್ಲಿ 54 ರನ್‍ಗಳ ಅವಶ್ಯಕತೆಯಿತ್ತು. ಈ ವೇಳೆ ಗುರ್ಕೀರತ್ ಸಿಂಗ್ ಮನ್ ಒಂದಾದ ಎಬಿಡಿ ವಿಲಿಯರ್ಸ್ ಸಿಕ್ಸರ್ ಗಳ ಸುರಿಮಳೆಗೈದರು. ಕೇವಲ 22 ಬಾಲಿಗೆ ಆರು ಸಿಕ್ಸರ್ ಮತ್ತು ಒಂದು ಬೌಂಡರಿ ಸಮೇತ ಬರೋಬ್ಬರಿ 55 ರನ್ ಸಿಡಿಸಿದರು. ಇವರಿಗೆ ಸಾಥ್ ಕೊಟ್ಟ ಗುರ್ಕೀರತ್ 19 ರನ್ ಸಿಡಿಸಿ ಮಿಂಚಿದರು.

178 ರನ್ ಬೆನ್ನತ್ತಿದ ಬೆಂಗಳೂರು ತಂಡಕ್ಕೆ ಓಪನರ್ ಫಿಂಚ್ ಸ್ಫೋಟಕ ಆರಂಭ ನೀಡಲು ಮುಂದಾದರು. ಜೊತೆಗೆ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಸಿಡಿಸುತ್ತಿದ್ದರು. ಆದರೆ ಮೂರನೇ ಓವರಿನಲ್ಲಿ ಕನ್ನಡಿಗ ಶ್ರೇಯಾಸ್ ಗೋಪಾಲ್ ಅವರ ಸ್ಪಿನ್ ಮೋಡಿಗೆ ಬಲಿಯಾದ ಫಿಂಚ್ 14 ರನ್ ಸಿಡಿಸಿ ಔಟ್ ಆದರು. ನಂತರ ಜೊತೆಯಾದ ನಾಯಕ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕಲ್ ತಾಳ್ಮೆಯ ಆಟವಾಡಿ ಆರು ಓವರ್ ಮುಕ್ತಾಯಕ್ಕೆ 47 ರನ್ ಸೇರಿಸಿದರು.

ಬ್ಯಾಕ್ ಟು ಬ್ಯಾಕ್ ವಿಕೆಟ್ಸ್: ಕೊಹ್ಲಿ ಮತ್ತು ಪಡಿಕಲ್ ಉತ್ತಮವಾಗಿ ಬ್ಯಾಟ್ ಬೀಸಿದರು. ಈ ಜೋಡಿ ಎರಡನೇ ವಿಕೆಟಿಗೆ 40 ಬಾಲಿನಲ್ಲಿ ಅರ್ಧಶತಕದ ಜೊತೆಯಾಟವಾಡಿತು. 12ನೇ ಓವರ್ ಅಂತ್ಯಕ್ಕೆ 92 ರನ್ ಗಳಿಸಿ ಮುನ್ನುಗುತ್ತಿದ್ದ ತಂಡಕ್ಕೆ ತಿವಾಟಿಯಾ 2ನೇ ಎದುರೇಟು ನೀಡಿದರು. ತಿವಾಟಿಯಾ ಓವರಿನಲ್ಲಿ ಭಾರೀ ಹೊಡೆತಕ್ಕೆ ಮುಂದಾದ ಪಡಿಕ್ಕಲ್ ಕ್ಯಾಚ್ ನೀಡಿ ಔಟಾದರು. 37 ಎಸೆತಗಳಲ್ಲಿ 2 ಬೌಂಡರಿಗಳ ನೆರವಿನೊಂದಿಗೆ 35 ರನ್ ಗಳಿಸಿದ್ದ ನಿರ್ಗಮಿಸಿದರು. ಇದರ ಬೆನ್ನಲ್ಲೇ ದಾಳಿಗಿಳಿದ ಕಾರ್ತಿಕ್ ತ್ಯಾಗಿ 43 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ಅವರ ವಿಕೆಟ್ ಪಡೆದರು. ಬೌಂಡರಿ ಗೆರೆಯಂಚಿನಲ್ಲಿ ಅತ್ಯುತ್ತಮ ಕ್ಯಾಚ್ ಪಡೆದ ತಿವಾಟಿಯಾ ಕೊಹ್ಲಿ ವಿಕೆಟ್ ಪಡೆಯಲು ಪ್ರಮುಖ ಕಾರಣವಾದರು. 102 ರನ್ ಗಳಿಸಿದ್ದ ವೇಳೆ ಆರ್‍ಸಿಬಿ ಪ್ರಮುಖ 2 ವಿಕೆಟ್‍ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ನಂತರ ನಾಲ್ಕು ಓವರಿಗೆ 54 ರನ್‍ಗಳ ಅವಶ್ಯಕತೆ ಇದ್ದಾಗ ಸ್ಫೋಟಕ ಆಟಗಾರ ಎಬಿ ಡಿವಿಲಿಯರ್ಸ್ ಮತ್ತು ಗುರ್ಕೀರತ್ ಸಿಂಗ್ ಮನ್ ಕ್ರಿಸಿನಲ್ಲಿ ಇದ್ದರು. ಇದಾದ ನಂತರ ಎಬಿ ಡಿವಿಲಿಯರ್ಸ್ ಅವರು ಹೊಡಿಬಡಿ ಆಟಕ್ಕೆ ಮುಂದಾದರು. 19ನೇ ಓವರಿನಲ್ಲಿ ಜಯದೇವ್ ಉನಾದ್ಕಟ್ ಅವರಿಗೆ ಸತತ ಮೂರು ಬಾಲಿಗೆ ಮೂರು ಸಿಕ್ಸರ್ ಸಿಡಿಸಿದರು. ಈ ಮೂಲಕ 19ನೇ ಓವರಿನಲ್ಲೇ ಬೆಂಗಳೂರು ತಂಡಕ್ಕೆ 25 ರನ್‍ಗಳು ಬಂದಿತು.

Share This Article
Leave a Comment

Leave a Reply

Your email address will not be published. Required fields are marked *