ಸೋದರಿಯ ಶವಸಂಸ್ಕಾರಕ್ಕೆ ಬಂದು ಬಾವನನ್ನು ಹತೈಗೈದ ಅಣ್ಣ

Public TV
1 Min Read

– ಆರು ಗಂಟೆಗಳಲ್ಲೇ ಆರೋಪಿಗಳ ಬಂಧನ

ಬೆಂಗಳೂರು: ಭಾನುವಾರ ಕಾಡುಗೋಡಿಯಲ್ಲಿ ನಡೆದ ಹೆಚ್.ಎ.ಎಲ್ ಉದ್ಯೋಗಿ ರಾಜೇಶ್ ಕೊಲೆ ಪ್ರಕರಣದ ಆರೋಪಿಗಳನ್ನು ಕೊಲೆ ನಡೆದ ಆರು ಗಂಟೆಗಳಲ್ಲಿ ಬಂಧಿಸುವಲ್ಲಿ ಕಾಡುಗೋಡಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ಜಾನ್‍ಪಾಲ್ ಹಾಗೂ ದಿನೇಶ್ ಎಂದು ಗುರುತಿಸಲಾಗಿದೆ. ಆರೋಪಿ ಜಾನ್‍ಪಾಲ್ ತಂಗಿ ಜಾಸ್ಮಿನ್‍ಗೆ ಏಳು ವರ್ಷಗಳ ಹಿಂದೆ ರಾಜೇಶ್ ಜೊತೆ ವಿವಾಹ ಮಾಡಲಾಗಿತ್ತು. ಇವರಿಗೆ ಐದು ವರ್ಷದ ಗಂಡು ಹಾಗೂ ಮೂರು ತಿಂಗಳ ಹೆಣ್ಣು ಮಗು ಇದ್ದು, ಕಾಡುಗೋಡಿಯ ವೀರಸ್ವಾಮಿರೆಡ್ಡಿ ಬಡಾವಣೆಯಲ್ಲಿ ವಾಸವಾಗಿದ್ದರು.

ಕಳೆದ ನಾಲ್ಕು ತಿಂಗಳ ಹಿಂದೆ ಜಾಸ್ಮಿನ್ ಮತ್ತು ರಾಜೇಶ್ ನಡುವೆ ಜಗಳವಾಗಿದ್ದು, ಜಾಸ್ಮಿನ್ ಕೆಜಿಎಫ್‍ನಲ್ಲಿರುವ ತನ್ನ ತವರು ಮನೆಗೆ ಹೋಗಿ ಅಲ್ಲೆ ವಾಸವಿದ್ದಳು. ಆದರೆ ಇದೇ ತಿಂಗಳ 15 ರಂದು ಜಾಸ್ಮಿನ್ ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ವಿಷಯ ತಿಳಿದ ಜಾಸ್ಮಿನ್ ಅಣ್ಣ ಯೋಧನಾಗಿರುವ ಜಾನ್‍ಪಾಲ್ ರಜೆಯ ಮೇಲೆ ತಂಗಿಯ ಶವಸಂಸ್ಕಾರಕ್ಕೆ ಬಂದಿದ್ದನು. ತಂಗಿಯ ಸಾವಿಗೆ ಆಕೆಯ ಪತಿಯೇ ಕಾರಣ ಎಂದು ತಿಳಿದು ತನ್ನ ಚಿಕ್ಕಪ್ಪನ ಮಗನಾದ ದಿನೇಶ್ ಜೊತೆಗೂಡಿ ಕೊಲೆ ಮಾಡಲು ಪ್ಲಾನ್ ಮಾಡಿದ್ದನು. ಅದರಂತೆಯೇ ಕೆಜಿಎಫ್‍ನಿಂದ ಕಾಡುಗೋಡಿಗೆ ಬಂದಿದ್ದ ರಾಜೇಶ್‍ನನ್ನು ಕಾಡುಗೋಡಿ ವೀರಸ್ವಾಮಿರೆಡ್ಡಿ ಲೇಔಟ್‍ನ ಮಯೂರ ಬೇಕರಿ ಬಳಿ ಚಾಕುವಿನಿಂದ ಕುತ್ತಿಗೆ ಸೀಳಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದರು.

ವಿಷಯ ತಿಳಿದ ಕಾಡುಗೋಡಿ ಪೊಲೀಸರು ಕಾರ್ಯ ಪ್ರವೃತ್ತರಾಗಿದ್ದು, ಕೊಲೆ ನಡೆದ ಆರು ಗಂಟೆಗಳಲ್ಲಿಯೇ ಇಬ್ಬರು ಆರೋಪಿಗಳನ್ನು ಬಂಗಾರ ಪೇಟೆಯಲ್ಲಿ ಬಂಧಿಸಿದ್ದಾರೆ. ಸದ್ಯಕ್ಕೆ ಈ ಕುರಿತು ಪ್ರಕರಣ ದಾಖಲಿಸಿಕೊಂಡು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *