ಜಮೀರ್ ಆಸ್ತಿಯನ್ನು ಸರ್ಕಾರಕ್ಕೆ ಕೊಡಿಸುತ್ತಿದ್ದೇನೆ: ಪ್ರಶಾಂತ್ ಸಂಬರಗಿ

Public TV
2 Min Read

– ಫೈಲ್ ಹಿಡಿದು ಸಿಸಿಬಿ ಕಚೇರಿಗೆ ಸಂಬರಗಿ

ಬೆಂಗಳೂರು: ಶಾಸಕ ಜಮೀರ್ ಅಹಮ್ಮದ್ ಅವರ ಆಸ್ತಿಯನ್ನು ಸರ್ಕಾರಕ್ಕೆ ಕೊಡಿಸುತ್ತೇನೆ ಎಂದು ಉದ್ಯಮಿ ಮತ್ತು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿಯವರು ಹೇಳಿದ್ದಾರೆ.

ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿದ ಹಿನ್ನೆಲೆ ಪ್ರಶಾಂತ್ ಸಂಬರಿಗಿ ಇಂದು ವಿಚಾರಣೆಗೆ ಹಾಜಾರಾಗಿದ್ದಾರೆ. ಇದಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸತ್ಯಕ್ಕೆ ಆಯಸ್ಸು ಜಾಸ್ತಿ ಇದೆ. ಇಂದು ಸತ್ಯದ ದೀಪ ಬೆಳಗುತ್ತಿದ್ದೇನೆ ಎಂದು ಹೇಳಿದ್ದಾರೆ.

ಸರ್ಕಾರಕ್ಕೆ ತೆರಿಗೆ ಕಟ್ಟುವ ನಾನು ಇವತ್ತು ಸರ್ಕಾರಕ್ಕೆ ಇನ್ನೊಂದು ಆದಾಯವನ್ನು ತಂದು ಕೊಡುತ್ತೇನೆ. ಜಮೀರ್ ಅವರ ಆಸ್ತಿಯನ್ನು ಸರ್ಕಾರಕ್ಕೆ ಕೊಡಿಸುತ್ತಿದ್ದೇನೆ. ಜಮೀರ್ ಅಹಮ್ಮದ್ ಖಂಡಿತ ಅವರ ಆಸ್ತಿಯನ್ನು ಸರ್ಕಾರಕ್ಕೆ ನೀಡಬೇಕಾಗುತ್ತೆ. ಅದಕ್ಕೆ ಸಂಬಂಧಿಸಿದ ದಾಖಲಾತಿಗಳು ನನ್ನ ಬಳಿ ಇದೆ ಎಂದು ಫೈಲ್ ತೋರಿಸಿದ ಪ್ರಶಾಂತ್ ಸಂಬರಗಿ, ಸಿಸಿಬಿ ಕಚೇರಿಗೆ ತೆರಳಿದ್ದಾರೆ. ಇದನ್ನು ಓದಿ: ಹಿಂದೆ ಹೇಳಿದ್ದ 3 ಸ್ಫೋಟಕ ಒಗಟುಗಳಲ್ಲಿ ಮೂರು ಸತ್ಯವಾಗಿದೆ – ಪ್ರಶಾಂತ್‌ ಸಂಬರಗಿ

ಈ ಹಿಂದೆ ಮಾತನಾಡಿದ್ದ ಸಂಬರಗಿ, ಜಮೀರ್ ಅವರು ಕಳೆದ ವರ್ಷ ಜೂನ್ ತಿಂಗಳಲ್ಲಿ ಶ್ರೀಲಂಕಾದ ರಾಜಧಾನಿ ಕೊಲಂಬೋಗೆ ನಟಿ ಸಂಜನಾ ಜೊತೆ ಹೋಗಿದ್ದಾರೆ ಎಂದು ಆರೋಪ ಮಾಡಿದ್ದರು. ಇದಕ್ಕೆ ಉತ್ತರಿಸಿದ್ದ ಜಮೀರ್ ಅಹಮ್ಮದ್, ನನ್ನ ಮೇಲೆ ಕೇಳಿ ಬಂದಿರುವ ಆರೋಪ ಸಾಬೀತಾದರೆ, ನಾನು ಸಂಜನಾ ಜೊತೆ ಕೊಲಂಬೋಗೆ ಹೋಗಿದ್ದರೆ ನಾನು ನನ್ನ ಆಸ್ತಿಯನ್ನು ಸರ್ಕಾರಕ್ಕೆ ಬರೆದು ಕೊಡುತ್ತೇನೆ ಎಂದು ಹೇಳಿದ್ದರು.

ಇದಕ್ಕೂ ಮುನ್ನಾ ಮಾತನಾಡಿದ್ದ ಅವರು, ನಾನು ದಾಖಲೆ ಇಟ್ಟುಕೊಂಡೇ ಮಾತನಾಡುತ್ತೇನೆ. ನಾನು ಸಂಜನಾ ಜೊತೆಯಲ್ಲೇ ಜಮೀರ್ ಶ್ರೀಲಂಕಾಗೆ ಹೋಗಿದ್ದಾರೆ ಎಂದು ಹೇಳಿಲ್ಲ. ಆದರೆ 2019ರ ಜೂನ್ 8, 9, 10ರಂದು ಜಮೀರ್ ಅಹ್ಮದ್ ಎಲ್ಲಿದ್ದರು? ಅವರು ಶ್ರೀಲಂಕಾದಲ್ಲಿ ಇದ್ದರೋ ಇಲ್ಲವೋ ಎನ್ನುವುದನ್ನು ಹೇಳಲಿ. ನನಗೆ ಜಮೀರ್ ಉತ್ತರ ನೀಡುವ ಅಗತ್ಯವಿಲ್ಲ. ಜನತೆ ಪಾಸ್‍ಪೋರ್ಟ್ ತೋರಿಸಿದರೆ ಸಾಕು. ನನ್ನ ಒಂದು ಸಣ್ಣ ಪ್ರಶ್ನೆಗೆ ಉತ್ತರ ನೀಡಲಿ ಎಂದು ಸವಾಲು ಎಸೆದಿದ್ದರು.

ಜೊತೆಗೆ ನನ್ನನ್ನು ಕಾಜಿಪಿಂಜಿ ಎಂದು ಕರೆಯುತ್ತಾರೆ. ಆದರೆ ನಾನು ಕಾಜಿಪಿಂಜಿ ಅಲ್ಲ. ಕಾನೂನು ಗೊತ್ತಿರುವ ನಾನು ಒಬ್ಬ ಜನ ಪ್ರತಿನಿಧಿಯ ವಿರುದ್ಧ ದಾಖಲೆ ಇಲ್ಲದೇ ಸುಳ್ಳು ಆರೋಪ ಮಾಡುವುದಿಲ್ಲ. ನನ್ನ ವಿರುದ್ಧ ಈಗ ಸುಳ್ಳು ಕೇಸ್ ಹಾಕಿದ್ದಾರೆ. ಈ ರೀತಿ ಕೇಸ್ ಬೀಳುತ್ತದೆ ಎಂಬುದು ನನಗೆ ಮೊದಲೇ ಗೊತ್ತಿತ್ತು. ಇದರ ವಿರುದ್ಧ ಹೋರಾಡುತ್ತೇನೆ ಎಂದು ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *