ಹುತಾತ್ಮರ ಬಲಿದಾನ ನಮಗೆಲ್ಲರಿಗೂ ಸ್ಪೂರ್ತಿ: ಕೆ.ಬಿ ಶಿವಕುಮಾರ್

Public TV
1 Min Read

ಶಿವಮೊಗ್ಗ: ವನ್ಯಸಂಪತ್ತಿನ ರಕ್ಷಣೆ ಕಾರ್ಯದಲ್ಲಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಅರಣ್ಯ ಇಲಾಖೆ ಹುತಾತ್ಮರ ಬಲಿದಾನ ಇನ್ನಷ್ಟು ಆತ್ಮ ಸಮರ್ಪಣೆಯಿಂದ ಕರ್ತವ್ಯ ನಿರ್ವಹಿಸಲು ನಮಗೆಲ್ಲರಿಗೂ ಸ್ಫೂರ್ತಿಯಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ತಿಳಿಸಿದರು.

ನಗರದ ಶ್ರೀಗಂಧ ಕೋಠಿ ಆವರಣದಲ್ಲಿ ವಿಶ್ವ ಹುತಾತ್ಮ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಹುತಾತ್ಮ ಸ್ಮಾರಕಕ್ಕೆ ಪುಷ್ಪಗುಚ್ಛವಿರಿಸಿ ಗೌರವ ಸಮರ್ಪಿಸಿ ಮಾತನಾಡಿದರು.

ವನ್ಯಜೀವಿ, ಮರಗಳು ಹಾಗೂ ಅರಣ್ಯ ಸಂರಕ್ಷಣೆ ಕಾರ್ಯದಲ್ಲಿ ತೊಡಗುವ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಅತ್ಯಂತ ಕಷ್ಟಕರವಾದ ಪರಿಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಇವರ ಪರಿಶ್ರಮದಿಂದಾಗಿಯೇ ಕಾಡು ಇಂದಿಗೂ ಈ ಸ್ವರೂಪದಲ್ಲಿ ಉಳಿದಿದೆ. ಅರಣ್ಯ ಸಂರಕ್ಷಣೆ ಕಾರ್ಯದಲ್ಲಿ ಅರಣ್ಯ ಇಲಾಖೆಯೊಂದಿಗೆ ಎಲ್ಲರೂ ಸಹಕರಿಸುವ ಅಗತ್ಯವಿದೆ ಎಂದರು.

ಕರ್ತವ್ಯದ ವೇಳೆ ಮೃತಪಟ್ಟ ಹುತಾತ್ಮರ ಕುಟುಂಬದ ಜತೆ ನಾವೆಲ್ಲರೂ ಇದ್ದೇವೆ. ಅವರ ಕಷ್ಟ ಸುಖದಲ್ಲಿ ಸರ್ಕಾರ ಕೈ ಜೋಡಿಸಿ ಸ್ಪಂದಿಸುತ್ತದೆ. ಹುತಾತ್ಮರಾದವರ ನೆನಪು ಸದಾ ಜೀವಂತವಾಗಿರುವುದು. ಸರ್ಕಾರಿ ನೌಕರರು ಶೇ. 100ರಷ್ಟು ಅರ್ಪಣಾ ಮನೋಭಾವದಿಂದ ಕರ್ತವ್ಯ ನಿರ್ವಹಿಸುವುದೇ, ಸೇವೆಯಲ್ಲಿರುವಾಗ ಹುತಾತ್ಮರಾಗುವವರಿಗೆ ನೀಡುವ ನಿಜವಾದ ಗೌರವ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ಎಂ.ಶಾಂತರಾಜು ಅವರು ಮಾತನಾಡಿ, ಅರಣ್ಯ ಇಲಾಖೆಯವರು ಕೇವಲ ಅರಣ್ಯ ಸಂರಕ್ಷಣೆ ಮಾತ್ರವಲ್ಲದೆ ಅರಣ್ಯವನ್ನು ಬೆಳೆಸುವ ಕಾರ್ಯವನ್ನು ಸಹ ಮಾಡುತ್ತಿದ್ದಾರೆ. ಕರ್ತವ್ಯದಲ್ಲಿರುವಾಗ ಹುತಾತ್ಮರಾಗುವವರ ಬಲಿದಾನ ಎಂದಿಗೂ ವ್ಯರ್ಥವಾಗುವುದಿಲ್ಲ. ಅವರು ನಮಗೆಲ್ಲರಿಗೂ ಸ್ಫೂರ್ತಿಯಾಗಿದ್ದಾರೆ ಎಂದರು.

ಜಿಲ್ಲಾ ಪೊಲೀಸ್ ಬ್ಯಾಂಡ್ ತಂಡದಿಂದ ಹುತಾತ್ಮರಿಗೆ ಗೌರವ ಸಮರ್ಪಣೆ ಹಾಗೂ ಪೊಲೀಸ್ ತಂಡದಿಂದ ಕುಶಾಲು ತೋಪು ಹಾರಿಸಿ ಗೌರವ ಸಲ್ಲಿಸಲಾಯಿತು.

Share This Article
Leave a Comment

Leave a Reply

Your email address will not be published. Required fields are marked *