ಆಟಿಕೆಗಳಂತೆ ಕೊಚ್ಚಿ ಹೋಯ್ತು ಬೈಕುಗಳು – ಮನೆ, ಅಪಾರ್ಟ್‍ಮೆಂಟ್‍ಗಳಿಗೆ ಜಲದಿಗ್ಬಂಧನ

Public TV
2 Min Read

– ಎರಡನೇ ದಿನವೂ ಬೆಂಗಳೂರಿನಲ್ಲಿ ಭರ್ಜರಿ ಮಳೆ
– ಮೂರು ದಿನ ಮಳೆ ಸಾಧ್ಯತೆ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಎರಡನೇ ದಿನವೂ ರಾತ್ರಿ ಮಳೆ ಮುಂದುವರೆದಿದೆ. ಬುಧವಾರ ರಾತ್ರಿ ಸತತವಾಗಿ ಸುರಿದ ಮಳೆಗೆ ಮನೆ, ಅಪಾರ್ಟ್‍ಮೆಂಟ್‍ಗಳು ಜಲಾವೃತವಾಗಿವೆ. ಜನರು ಹೊರ ಬರುವುದಕ್ಕೂ ಕಷ್ಟ ಪಡುವ ಸ್ಥಿತಿ ನಿರ್ಮಾಣವಾಗಿದೆ.

ಬುಧವಾರ ಮಳೆಗೆ ಪೂರ್ತಿ ಜಲಾವೃತವಾಗಿದ್ದ ಹೊರಮಾವು ನಗರಕ್ಕೆ ರಾತ್ರಿ ಸುರಿದ ಮಳೆ ಜಲದಿಗ್ಬಂಧನ ಹಾಕಿದೆ. ಆರ್‍ಆರ್ ನಗರದಲ್ಲಿ ರಾಜಕಾಲುವೆ ಒಡೆದುಕೊಂಡು ಮನೆಗಳಿಗೆ ನೀರು ನುಗ್ಗಿದೆ. ಬೈಕುಗಳು ಕೊಚ್ಚಿಕೊಂಡು ಹೋಗಿವೆ. ಚೊಕ್ಕಸಂದ್ರ, ಶಿವಾನಂದ ಸರ್ಕಲ್, ಪೀಣ್ಯ, ದಾಸರಹಳ್ಳಿ ಮತ್ತು ಬಿನ್ನಿಮಿಲ್ ರಸ್ತೆಗಳಲ್ಲಿ ನೀರು ನಿಂತಿದೆ.

ತತವಾಗಿ ಸುರಿದ ಮಳೆಗೆ ಮಾನ್ಯತಾ ಟೆಕ್‍ಪಾರ್ಕ್‍ನ ಅಪಾರ್ಟ್‍ಮೆಂಟ್‍ಗೆ ನೀರು ನುಗ್ಗಿದ್ದು, ಮಳೆ ನೀರಿನ ರಭಸಕ್ಕೆ ಬೈಕ್‍ಗಳು ಆಟಿಕೆಗಳಂತೆ ಕೊಚ್ಚಿ ಹೋಗಿವೆ. ಹೊರಮಾವು ನಿವಾಸಿಗಳಿಗಂತು ಮಳೆ ಜಲದಿಗ್ಭಂದನ ಹಾಕಿದೆ. ಮೊನ್ನೆ ರಾತ್ರಿ ಸುರಿದ ಮಳೆಯಿಂದ ದ್ವೀಪದಂತಾಗಿದ್ದ ಹೊರಮಾವು ಸಂಜೆ ಹೊತ್ತಿಗೆ ಕೊಂಚ ಸುಧಾರಿಸಿತ್ತು. ಆದರೆ ಮತ್ತೆ ನಿನ್ನೆ ರಾತ್ರಿ ಸುರಿದ ಮಳೆಯಿಂದಾಗಿ ಅಪಾರ್ಟ್‍ಮೆಂಟ್, ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಕಾರುಗಳು ನೀರಲ್ಲೇ ಜಲಾವೃತವಾಗಿವೆ.

ಶಿವಾನಂದ ಸರ್ಕಲ್ ರಸ್ತೆ ಸಂಪೂರ್ಣ ಜಲಾವೃತವಾಗಿದ್ದು, ಮಾಗಡಿ ರಸ್ತೆಯ ಕೆಪಿ ಅಗ್ರಹಾರದಲ್ಲಿ ಮನೆಗಳಿಗೆ ಮಳೆ ನೀರಿನ ಜೊತೆ ಚರಂಡಿ ನೀರು ಮನೆಗೆ ನುಗ್ಗಿದೆ. ಪೀಣ್ಯ ಫಸ್ಟ್ ಸ್ಟೇಜ್‍ನ ಅಪಾರ್ಟ್‍ಮೆಂಟ್‍ವೊಂದಕ್ಕೆ ನೀರು ನುಗ್ಗಿದ್ದು, ಅಂಡರ್ ಗ್ರೌಂಡ್ ಸಂಪೂರ್ಣ ಜಲಾವೃತವಾಗಿದೆ. ಇಲ್ಲಿನ ನಿವಾಸಿಗಳು ಹೊರಗಡೆ ಬರುವುದಕ್ಕೆ ಸಾಧ್ಯವಾಗದೇ ಪರದಾಡುತ್ತಿದ್ದಾರೆ. ಬೆಂಗಳೂರು – ತುಮಕೂರು ಹೆದ್ದಾರಿಯ ಪೀಣ್ಯ ಫಸ್ಟ್ ಸ್ಟೇಜ್ ರಸ್ತೆ ಸಂಪೂರ್ಣ ಕೆರಯಂತಾಗಿದೆ. ರಸ್ತೆ ಮಧ್ಯೆ ನಾಲ್ಕು ಅಡಿಯಷ್ಟು ನೀರು ನಿಂತಿದೆ.

ಇತ್ತ ಆರ್‍ಆರ್ ನಗರದ ಪಿಇಎಸ್ ಕಾಲೇಜು ಬಳಿ ಇರುವ ಪ್ರಮೋದ್ ಬಡಾವಣೆಗೆ ರಾಜಕಾಲುವೆಯ ನೀರು ನುಗ್ಗಿ ಸಾಕಷ್ಟು ಹಾನಿ ಉಂಟುಮಾಡಿದೆ. ರಾಜಕಾಲುವೆಯ ತಡೆಗೋಡೆ ಹೊಡೆದು ಮೋರಿ ನೀರು ಮನೆಗಳಿಗೆ ನುಗ್ಗಿ ಸುಮಾರು 5 ಅಡಿಯಷ್ಟು ನೀರು ತುಂಬಿಕೊಂಡಿದೆ. ಪರಿಣಾಮ ಮನೆಯಲ್ಲಿದ್ದ ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಕಂಪ್ಯೂಟರ್ ದಾಖಲೆ ಪತ್ರಗಳು ಸೇರಿದಂತೆ ಬಹುತೇಕ ವಸ್ತುಗಳು ನೀರಿಗೆ ಹಾಳಾಗಿ ಹೋಗಿದೆ.

ಮುಂದಿನ ಮೂರು ದಿನ ಮಳೆಯಾಗಲಿದೆ ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ಮತ್ತಷ್ಟು ಅವಾಂತರ ಸೃಷ್ಟಿಯಾಗುವ ಸಾಧ್ಯತೆಯಿದೆ.

Share This Article
Leave a Comment

Leave a Reply

Your email address will not be published. Required fields are marked *