ಕಾಂಗ್ರೆಸ್‍ನವರಿಗೆ ಸ್ವತಂತ್ರವಾಗಿ ಹೋರಾಡುವ ಶಕ್ತಿಯಿಲ್ಲ: ಈಶ್ವರಪ್ಪ

Public TV
1 Min Read

ಚಿತ್ರದುರ್ಗ: ರಾಜ್ಯದಲ್ಲಿ ಕಾಂಗ್ರೆಸ್ ಶಕ್ತಿಹೀನವಾಗಿದೆ ಎನ್ನುವುದಕ್ಕೆ ರೈತ ಸಂಘದ ಜೊತೆ ಸೇರಿ ಹೋರಾಟ ಮಾಡುತ್ತೇವೆ ಎನ್ನುವ ಸಿದ್ದರಾಮಯ್ಯ ಹೇಳಿಕೆಯೇ ಸಾಕ್ಷಿ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದರು.

ಚಿತ್ರದುರ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಗೆ ಸ್ವತಂತ್ರವಾಗಿ ಹೋರಾಡುವ ಶಕ್ತಿ ಇದ್ದಿದ್ದರೆ ರೈತ ಸಂಘವನ್ನು ಯಾಕೆ ಸೇರಿಸಿಕೊಳ್ಳಬೇಕಿತ್ತು, ಅವರು ಹತಾಶರಾಗಿದ್ದಾರೆ. ಲೋಕಸಭೆಯಲ್ಲಿ ಒಂದೇ ಸ್ಥಾನ ಗೆದ್ದಿದ್ದು, ಅಧಿಕಾರ ಕಳೆದುಕೊಂಡಿದ್ದು, ಎಲ್ಲವೂ ಇದಕ್ಕೆ ಉದಾಹರಣೆಯಾಗಿವೆ. ಈ ಕಾರಣಕ್ಕೆ ಜೀವ ಪಡೆದುಕೊಳ್ಳಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಹರಿಹಾಯ್ದರು.

ಕಾಂಗ್ರೆಸ್‍ನಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ವಿಪಕ್ಷ ನಾಯಕರ ನಡುವೆ ಪೈಪೋಟಿ ನಡೆಯುತ್ತಿದೆ. ನಾನು ಲೀಡರ್ ಆಗಬೇಕು, ನಾನು ಲೀಡರ್ ಆಗಬೇಕು ಎಂಬ ಪೈಪೋಟಿ ನಡೆಯುತ್ತಿದೆ. ರಾಜಕೀಯವಾಗಿ ಏನಾದರೂ ಆಪಾದನೆ ಮಾಡಿದರೆ ನಾಯಕರಾಗುತ್ತೇವೆ ಎಂಬ ಉದ್ದೇಶ ಹೊಂದಿದ್ದಾರೆ. ಅಲ್ಲದೆ ಹೋರಾಟ ಮಾಡುತ್ತಿದ್ದೇನೆ ಎಂದು ಸೋನಿಯಾ ಗಾಂಧಿ ಅವರನ್ನು ತೃಪ್ತಿಪಡಿಸಬೇಕು ಅದಕ್ಕಾಗಿ ಹೀಗೆ ಮಾತನಾಡುತ್ತಾರೆ. ವಿರೋಧ ಪಕ್ಷದ ನಾಯಕರಾಗಿ ಜೀವಂತವಾಗಿದ್ದೇವೆ ಎಂದು ತೋರಿಸಬೇಕಲ್ಲ ಅದಕ್ಕಾಗಿ ಹೀಗೆ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್ಸಿನವರು ಈ ಪರಿಸ್ಥಿತಿಯಲ್ಲಿ ಪಕ್ಷ ಬೇಧ ಮರೆತು ಸರ್ಕಾರಕ್ಕೆ ಬೆಂಬಲ ಕೊಡಬೇಕಾಗಿತ್ತು. ಜನ ಸಂಕಷ್ಟದಲ್ಲಿದ್ದಾರೆ, ರಾಜಕೀಯ ಮಾಡಬಾರದು ಎಂದು ಸಹಕಾರ ಕೊಡುವುದು ಬಿಟ್ಟು, ಹುಳುಕು ಹುಡುಕುತ್ತಿದ್ದಾರೆ. ಇದನ್ನು ಜನ ಗಮನಿಸುತ್ತಾರೆ. ಇಂತಹ ಸಂದರ್ಭದಲ್ಲೂ ರಾಜಕಾರಣ ಮಾಡುತ್ತಾರೆ ಎಂದು ಜನ ಸಿದ್ದರಾಮಯ್ಯ ಅವರಿಗೆ ಛೀಮಾರಿ ಹಾಕುತ್ತಾರೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *