ಮಗು ಕೊಂದ ಆಸ್ಪತ್ರೆಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಿ: ಬಿಎಸ್‍ವೈಗೆ ಸಿದ್ದು ಒತ್ತಾಯ

Public TV
1 Min Read

ಬೆಂಗಳೂರು: ಆಸ್ಪತ್ರೆ ಮುಂದೆ ಆಟೋದಲ್ಲಿಯೇ ಹೆರಿಗೆಯಾಗಿ ನವಜಾತ ಶಿಶು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಗಡುಕ ಆಸ್ಪತ್ರೆಗಳ ಮೇಲೆ ಕ್ರಮ ಕೈಗೊಳ್ಳಿ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಗೆ ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಸಿಎಂ, ಹೆರಿಗೆಗಾಗಿ ಬೆಂಗಳೂರಿನ ಆಸ್ಪತ್ರೆಗಳೆಲ್ಲ ಸುತ್ತಾಡಿದ ಗರ್ಭಿಣಿಯೊಬ್ಬರು ಎಲ್ಲಿಯೂ ಸೇರಿಸಿಕೊಳ್ಳದೆ ಇದ್ದಾಗ ಕೊನೆಗೆ ಅಟೊರಿಕ್ಷಾದಲ್ಲಿಯೇ ಹಡೆದ ಪರಿಣಾಮ ಹಸುಕೂಸನ್ನು ಕಳೆದುಕೊಳ್ಳಬೇಕಾಯಿತು. ಹೀಗಾಗಿ ಮುಖ್ಯಮಂತ್ರಿಗಳೇ ಮೊದಲು ಈ ನತದೃಷ್ಟ ತಾಯಿಯ ಮಗುವಿನ ಕೊಲೆಗಡುಕ ಆಸ್ಪತ್ರೆಗಳ ಮೇಲೆ ಕ್ರಮಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ.

ಇನ್ನೊಂದು ಟ್ವೀಟ್ ಮಾಡಿ, ರಾಜ್ಯದಲ್ಲಿ ಕೊರೊನಾ ಸೋಂಕಿತರಿಗಿಂತ ಹೆಚ್ಚು, ಬೇರೆ ಕಾಯಿಲೆಯ ರೋಗಿಗಳು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗದೆ ಸಾಯುತ್ತಿದ್ದಾರೆ. ಮುಖ್ಯಮಂತ್ರಗಳೇ ಚಿಕಿತ್ಸೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ಪರವಾನಿಗೆಯನ್ನು ರದ್ದುಮಾಡುವ ಕಠಿಣ ಕ್ರಮಕೈಗೊಳ್ಳಿ. ನಿಮ್ಮ ಹುಸಿಬೆದರಿಕೆಗೆ ಅವರು ಜಗ್ಗುವವರಲ್ಲ ಎಂದು ಬರೆದುಕೊಂಡು ಎರಡೂ ಟ್ವೀಟನ್ನು ಸಿಎಂ ಆಫ್ ಕರ್ನಾಟಕಕ್ಕೆ ಟ್ಯಾಗ್ ಮಾಡಿದ್ದಾರೆ.

ಏನಿದು ಪ್ರಕರಣ..?
ಶ್ರೀರಾಮಪುರದ ನಿವಾಸಿಯಾಗಿರುವ ಗರ್ಭಿಣಿಗೆ ಇಂದು ನಸುಕಿನ ಜಾವ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣ ಮನೆಯವರು ಆಟೋದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮುಂದಾಗಿದ್ದಾರೆ. ವಿಕ್ಟೋರಿಯಾ, ವಾಣಿ ವಿಲಾಸ್, ಶ್ರೀರಾಮಪುರ ಸರ್ಕಾರಿ ಆಸ್ಪತ್ರೆ ಸೇರಿದಂತೆ ಸುಮಾರು 10ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಓಡಾಡಿದ್ದಾರೆ. ರಾತ್ರಿ ಮೂರು ಗಂಟೆಯಿಂದಲೂ ಸುತ್ತಾಡಿದರೂ ಎಲ್ಲೂ ಬೆಡ್ ಸಿಗಲಿಲ್ಲ. ನಂತರ ಕೆಸಿ ಜರಲ್ ಆಸ್ಪತ್ರೆಗೆ ಬಂದಿದ್ದಾರೆ. ಆದರೆ ಅಲ್ಲಿಯೂ ತಕ್ಷಣ ದಾಖಲಿಸಿಕೊಳ್ಳದೆ ನಿರ್ಲಕ್ಷ್ಯ ತೋರಿದ್ದಾರೆ. ಕೊನೆಗೆ ವೈದ್ಯರ ಎಡವಟ್ಟಿನಿಂದ ಆಟೋದಲ್ಲಿಯೇ ಹೆರಿಗೆಯಾಗಿದೆ. ಆದರೆ ಹೆರಿಗೆಯಾದ ಕೆಲವೇ ಕ್ಷಣದಲ್ಲಿ ಅಮ್ಮನ ಕಾಣುವ ಮುಂಚೆಯೇ ಮಗು ಸಾವನ್ನಪ್ಪಿದೆ.

ಕಡೆಗೆ ಕೆಸಿ ಜನರಲ್ ಆಸ್ಪತ್ರೆಯವರು ಅರ್ಧಗಂಟೆ ಬಳಿಕ ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ವೈದ್ಯರ ಎಡವಟ್ಟಿಗೆ ಹಸುಗೂಸು ಸಾವನ್ನಪ್ಪಿದೆ ಎಂದು ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *